ವಿವಾದವಿಲ್ಲದ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸಲು ಅನುಮತಿ ನೀಡಿ: ಸುಪ್ರೀಂಗೆ ಕೇಂದ್ರ ಮನವಿ
ಸುಪ್ರೀಂ ಕೋರ್ಟ್ ಬಳಿ ಕೇಂದ್ರ ಸರಕಾರ ಹೊಸ ಮನವಿ ಮಾಡಿದೆ. ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಯತ್ನ ಕೂಡ ಮಾಡುತ್ತಿಲ್ಲ ಎಂಬ ಆಕ್ಷೇಪದಿಂದ ಆಗಬಹುದಾದ ಹಾನಿಯಿಂದ ತಪ್ಪಿಸಿಕೊಳ್ಳುವ ಮಾಡುವ ಪ್ರಯತ್ನದಂತೆ ಕಾಣುತ್ತಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಅಭಿಪ್ರಾಯವನ್ನು ಪಕ್ಕಕ್ಕಿಟ್ಟು, ಸುದ್ದಿಯನ್ನಷ್ಟೇ ತಿಳಿಸುತ್ತಿದ್ದೇವೆ. ಮಂಗಳವಾರದಂದು ಸುಪ್ರೀಂ ಕೋರ್ಟ್ ಬಳಿ ಕೇಂದ್ರ ಸರಕಾರ ಮನವಿಯೊಂದನ್ನು ಮಾಡಿದೆ. ಸದ್ಯಕ್ಕೆ ವಿವಾದಾಸ್ಪದವಾಗಿರುವ ಆಯೋಧ್ಯೆಯಲ್ಲಿನ ಮಂದಿರ-ಮಸೀದಿ ಬಳಿ ಇರುವ ಭೂಮಿಯನ್ನು ರಾಮ್ ಜನ್ಮಭೂಮಿ ನ್ಯಾಸ್ ಅಥವಾ ಟ್ರಸ್ಟ್ ಗೆ ಹಸ್ತಾಂತರಿಸಲು ಅನುಮತಿ ಕೋರಿದೆ.
ಅಯೋಧ್ಯೆ ವಿವಾದಕ್ಕೆ ಶೀಘ್ರವೇ ತಿಲಾಂಜಲಿ ಹಾಡಬೇಕು: ರವಿಶಂಕರ್ ಪ್ರಸಾದ್
ಮೇ ತಿಂಗಳಲ್ಲಿ ನಡೆಯಬಹುದಾದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಈ ನಡೆ ಮಹತ್ವದ್ದಾಗಿದೆ. ಭೂಮಿಯ ಮೂಲ ಒಡೆತನ ಯಾರದ್ದೋ, ಯಾರು ರಾಮಮಂದಿರ ನಿರ್ಮಾಣ ಮಾಡಬೇಕು ಅಂದುಕೊಂಡಿದ್ದಾರೋ ಅವರಿಗೆ ಭೂಮಿಯನ್ನು ಹಿಂತಿರುಗಿಸಬೇಕು ಎಂಬುದು ಆಲೋಚನೆ ಎಂದು ಬಿಜೆಪಿ ಹೇಳಿದೆ.
ನಾವು ಭೂಮಿಯನ್ನು ಜನ್ಮಭೂಮಿ ನ್ಯಾಸ್ ಗೆ ವಾಪಸ್ ನೀಡಲು ಬಯಸಿದ್ದೇವೆ. ಅಲ್ಲಿ ಮಂದಿರ ನಿರ್ಮಿಸಲು ಅವರು ಬಯಸಿದ್ದಾರೆ. ಆ ಭೂಮಿಯನ್ನು ಅವರಿಗೆ ಹಿಂತಿರುಗಿಸಲೇಬೇಕು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಒಡೆತನದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವ್ಯಾಜ್ಯ ಬಾಕಿ ಇರುವ ಭೂಮಿಯನ್ನು ಸರಕಾರ ಮುಟ್ಟಲು ಸಹ ಹೋಗುವುದಿಲ್ಲ ಎಂದು ಹೇಳಿರುವ ಅವರು, ಈಗಾಗಲೇ ದೇಗುಲ ನಿರ್ಮಾಣವಾಗಿದೆ ಮತ್ತು ಅದನ್ನು ಚಂದಗೊಳಿಸಬೇಕಿದೆ ಎಂಬುದನ್ನು ಬಿಜೆಪಿ ನಂಬುತ್ತದೆ ಎಂದು ಅವರು ಹೇಳಿದ್ದಾರೆ.
"ರಾಮಮಂದಿರ ನಿರ್ಮಾಣಕ್ಕೆ ಕಾನೂನು ತಂದರೆ NDA ಗೆಲುವು ಖಚಿತ!"
ಬಾಬ್ರಿ ಮಸೀದಿ ಕೆಡವಿದ ಒಂದು ವರ್ಷದ ನಂತರ ಸರಕಾರ ವಶಪಡಿಸಿಕೊಂಡ ಸುತ್ತಲ ಅರವತ್ತೇಳು ಎಕರೆ ಜಾಗದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಕೇಂದ್ರ ಸರಕಾರ 0.313 ಎಕರೆ ಜಾಗ ಮಾತ್ರ ವಿವಾದಾಸ್ಪದವಾಗಿದೆ ಎಂದು ಹೇಳಿದೆ.
ಮಂಗಳವಾರದಂದು ಅಯೋಧ್ಯಾ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಬೇಕಿತ್ತು. ಆದರೆ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದಲ್ಲಿ ಒಬ್ಬರು ಗೈರಾಗಲಿದ್ದಾರೆ ಎಂಬುದು ಮುಂಚಿತವಾಗಿಯೇ ತಿಳಿದಿದ್ದರಿಂದ ವಿಚಾರಣೆ ಮುಂದಕ್ಕೆ ಹೋಗಿದೆ.
ಅಯೋಧ್ಯಾ ಪ್ರಕರಣದ ವಿಚಾರಣೆ ಕಳೆದ ಎಪ್ಪತ್ತು ವರ್ಷದಿಂದ ಬಾಕಿ ಇದೆ. ಅಲಹಾಬಾದ್ ಹೈ ಕೋರ್ಟ್ ಮಂದಿರ ಪರವಾಗಿ ತೀರ್ಪು ನೀಡಿತ್ತು. ಆದರೆ ನಂತರ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಈ ವಿಚಾರ ಶೀಘ್ರ ಇತ್ಯರ್ಥಗೊಳ್ಳಬೇಕು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.