Arvind Kejriwal: ಅರವಿಂದ ಕೇಜ್ರಿವಾಲ್ಗೆ ದೊಡ್ಡ ಸವಾಲು ಹಾಕಿದ ಬಿಜೆಪಿ!
ಬೆಂಗಳೂರು, ಸೆಪ್ಟೆಂಬರ್ 16: ಭಾನುವಾರ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜೀನಾಮೆ ಕುರಿತು ಘೋಷಣೆ ಮಾಡಿದ್ದಾರೆ. ಎರಡು ದಿನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಜನರು ತಮ್ಮ ತೀರ್ಪು ನೀಡುವ ತನಕ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಾರೆ ಎಂದು ಹೇಳಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜ್ಯದ ಪ್ರತಿಪಕ್ಷ ಬಿಜೆಪಿ ಈ ವಿಚಾರ ಮುಂದಿಟ್ಟುಕೊಂಡು ಟೀಕೆಗಳನ್ನು ಮಾಡುತ್ತಿದೆ.
ಸೋಮವಾರ ದೆಹಲಿಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವಾ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ಗೆ ಸವಾಲೊಂದನ್ನು ಹಾಕಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನಿಂದ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಅರವಿಂದ ಕೇಜ್ರಿವಾಲ್ ಅವರಿಗೆ, "ನಿಮಗೆ ಧೈರ್ಯವಿದ್ದರೆ ಮದ್ಯಕ್ಕೆ ದಾಸರಾಗಿ ಜೀವ ಕಳೆದುಕೊಂಡವರ ಮನೆಗೆ ಭೇಟಿ ನೀಡಿ" ಎಂದು ಹೇಳಿದ್ದಾರೆ.

"ಮದ್ಯಕ್ಕೆ ದಾಸರಾಗಿ ಜೀವ ಕಳೆದುಕೊಂಡವರ ಮನೆಗೆ ಅಥವ ಅದರಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳನ್ನು ಭೇಟಿ ಮಾಡಿ. ಹೌದು ಎನ್ನುವುದಾದರೆ ಅವರು ನಿಮಗೆ ಅಗ್ನಿಪರೀಕ್ಷೆಯನ್ನು ನೀಡುತ್ತಾರೆ" ಎಂದು ವೀರೇಂದ್ರ ಸಚ್ದೇವಾ ತಿಳಿಸಿದ್ದಾರೆ. "ನಾನು ಅಗ್ನಿಪರೀಕ್ಷೆ ಎದುರಿಸಲು ಸಿದ್ಧ" ಎಂಬ ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ಈ ರೀತಿಯಾಗಿ ಟೀಕೆಯನ್ನು ಮಾಡಿದೆ.
ಬಿಜೆಪಿ ಚುನಾವಣೆಗೆ ಸಿದ್ಧವಾಗಿದೆ: ವೀರೇಂದ್ರ ಸಚ್ದೇವಾ ಮಾತನಾಡಿ, "77 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೆಹಲಿ ಮಳೆ ನೀರು ನಿಂತು ಜನರ ಇಷ್ಟು ಸಾವುಗಳನ್ನು ಕಂಡಿದೆ. ಎಲ್ಲಾ ಇಲಾಖೆಗಳು ಭ್ರಷ್ಟವಾಗಿವೆ. ಜನರು ದೆಹಲಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕು ಎಂದು ಬಯಸಿದ್ದಾರೆ" ಎಂದರು.
"ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನೂ ಸಹ ಚುನಾವಣೆಗೆ ಸಿದ್ಧನಾಗಿದ್ದಾನೆ, ಆದಷ್ಟು ಬೇಗ ಚುನಾವಣೆ ನಡೆಸುವಂತೆ ನಾವು ಬೇಡಿಕೆ ಇಡುತ್ತೇವೆ" ಎಂದು ವೀರೇಂದ್ರ ಸಚ್ದೇವಾ ಹೇಳಿದ್ದಾರೆ. ಈ ಮೂಲಕ ದೆಹಲಿ ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ ರಾಜ್ಯದಲ್ಲಿ ಚುನಾವಣೆ ನಡೆಯಬಹುದು ಎಂಬ ಸುಳಿವನ್ನು ಸಹ ನೀಡಿದ್ದಾರೆ.
ಭಾನುವಾರ ಅರವಿಂದ ಕೇಜ್ರಿವಾಲ್ ರಾಜೀನಾಮೆ ಘೋಷಣೆ ಬಳಿಕ ಪ್ರತಿಕ್ರಿಯೆ ನೀಡಿದ್ದ ವೀರೇಂದ್ರ ಸಚ್ದೇವಾ, "ಕೇವಲ ಅರವಿಂದ ಕೇಜ್ರಿವಾಲಾ ಮಾತ್ರವಲ್ಲ ಸಂಪುಟದ ಎಲ್ಲಾ ಸಚಿವರು ಸಹ ರಾಜೀನಾಮೆ ನೀಡಬೇಕು" ಎಂದು ಒತ್ತಾಯಿಸಿದ್ದರು.
"ಕೇಜ್ರಿವಾಲ್ ಸರ್ಕಾರದಲ್ಲಿ ಆಳವಾಗಿ ಭ್ರಷ್ಟಾಚಾರ ಬೇರೂರಿದೆ. ಆದ್ದರಿಂದ ಇಡೀ ಸಂಪುಟವೇ ರಾಜೀನಾಮೆ ನೀಡಬೇಕಿದೆ. ಕೇಜ್ರಿವಾಲ್ ಅವರನ್ನು ಜೈಲಿಗೆ ಕಳಿಸುವಾಗಲೇ ಜನರು ತೀರ್ಪು ನೀಡಿ ಆಗಿದೆ. ಎರಡು ದಿನ ವಿಳಂಬವಾಗಿ ಅವರು ರಾಜೀನಾಮೆ ನೀಡುವುದು ಏಕೆ?" ಎಂದು ವೀರೇಂದ್ರ ಸಚ್ದೇವಾ ಪ್ರಶ್ನೆ ಮಾಡಿದ್ದಾರೆ.
ಅರವಿಂದ ಕೇಜ್ರಿವಾಲ್ ರಾಜೀನಾಮೆ ಘೋಷಣೆ ಬಳಿಕ ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆಗಳು ಆರಂಭವಾಗಿವೆ. ಮಂಗಳವಾರ ಎಎಪಿಯ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಣೆ ಮಾಡಿ ಹೊಸ ಮುಖ್ಯಮಂತ್ರಿ ಆಯ್ಕೆ ಮಾಡುವ ನಿರೀಕ್ಷೆ ಇದೆ. ಅಲ್ಲದೇ ಎಎಪಿ ಪಕ್ಷ ನವೆಂಬರ್ನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಸಿ ಎಂದು ಸಹ ಆಯೋಗಕ್ಕೆ ಬೇಡಿಕೆ ಇಟ್ಟಿದ್ದು, ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications