ಪಾಟ್ನಾ ಸ್ಫೋಟ ಐಎಮ್ ಕೈವಾಡ ಸೇಡಿನ ಕ್ರಮ
ಪಾಟ್ನಾ ಅ.28: ಬಿಹಾರ ರಾಜಧಾನಿ ಪಾಟ್ನಾದಲ್ಲಿ ಮೋದಿ ಸಭೆಗೂ ಮುನ್ನ ಸಂದರ್ಭ ನಿನ್ನೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 7ಕ್ಕೆ ತಲುಪಿದೆ. ಇಂದು ಆಸ್ಪತ್ರೆಯಲ್ಲಿ ಮೃತಪಟ್ಟವನು ಶಂಕಿತ ಉಗ್ರ ಐನೂಲ್ ಎನ್ನಲಾಗಿದೆ. ಸ್ಫೋಟದ ಸಂಬಂಧ ಇಮ್ತಿಯಾಜ್ ಅನ್ಸಾರಿ, ಐನೂಲ್, ಅಖ್ತರ್ ಹಾಗೂ ಖಲೀಮ್ ಎಂಬುವವರನ್ನು NIA ತನ್ನ ವಶಕ್ಕೆ ತೆಗೆದುಕೊಂಡಿದೆ.
ಮುಜಾಫರ್ ನಗರದ ಗಲಭೆಗೆ ಪ್ರತೀಕಾರ: ಇತ್ತೀಚೆಗೆ ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯಲ್ಲಿ ನಡೆದಿದ್ದ ಕೋಮುಗಲಭೆಯ ಸಾವು-ನೋವುಗಳಿಗೆ ಪ್ರತೀಕಾರವಾಗಿ ಈ ಸ್ಫೋಟ ನಡೆಸಲಾಯಿತು ಎಂದು ಪೊಲೀಸರ ಬಂಧನದಲ್ಲಿರುವ ಶಂಕಿತ ಉಗ್ರ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಬಂಧಿತ ಇಮ್ತಿಯಾಜ್ ಅನ್ಸಾರಿಯ ರಾಂಚಿಯ ನಿವಾಸದಲ್ಲಿದ್ದ ಪ್ರೆಷರ್ ಕುಕ್ಕರ್ ಬಾಂಬುಗಳನ್ನು ಸೋಮವಾರ ಪೊಲೀಸರು ವಶಪಡಿಸಿಕೊಂಡಿದ್ದು, ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ವಿಚಾರಣೆ ವೇಳೆ ಅನ್ಸಾರಿ ಸ್ಫೋಟಕ ಮಾಹಿತಿ ಹೊರ ಹಾಕಿದ್ದು, ಆತನಿಂದ ಬಾಂಬ್ ಬಗ್ಗೆ ಮಾಹಿತ ಪಡೆದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಶೀಘ್ರ ಕಾರ್ಯಾಚರಣೆ ನಡೆಸಿ, ಬಾಂಬುಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಫೋಟದ ಹಿಂದೆ ಐಎಂ ಪಾತ್ರ ಸ್ಪಷ್ಟ: ಈ ಮಧ್ಯೆ, ಯಾಸಿನ್ ಭಟ್ಕಳನನ್ನು ವಶಕ್ಕೆ ಪಡೆದಿರುವ ದೆಹಲಿ ವಿಶೇಷ ಪೊಲೀಸ್ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆ ವೇಳೆ ಸ್ಫೋಟದ ಹಿಂದೆ ಮುಜಾಹಿದ್ದೀನ್ ಪಾತ್ರವಿರುವುದಾಗಿ ಯಾಸಿನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ನಿನ್ನೆಯ ಪಾಟ್ನಾ ಸರಣಿ ಬಾಂಬ್ ಸ್ಫೋಟಕ್ಕೆ ಬಾಂಬುಗಳನ್ನು ಒದಗಿಸಿ, ಸ್ಫೋಟಕ್ಕೆ ಸಂಚು ರೂಪಿಸಿದ್ದವನು ಇಂಡಿಯನ್ ಮುಜಾಹೀದ್ದಿನ್ (ಐಎಂ) ಸಂಘಟನೆಯ ತೆಹಸೀನ್ ಅಖ್ತರ್ ಎಂಬ ವಿಷಯವೂ ಇದೀಗ ಬಯಲಾಗಿದೆ. ಮುಜಾಫರ್ ನಗರ ಗಲಭೆಗೆ ಸೇಡಿನ ಕ್ರಮವಾಗಿಯೇ ಈ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ್ದು, ಈ ಸ್ಫೋಟದ ಹಿಂದೆ ಇಂಡಿಯನ್ ಮುಜಾಹೀದ್ದಿನ್ ಸಂಸ್ಥಾಪಕ, ಪ್ರಸ್ತುತ ರಾಷ್ಟ್ರೀಯ ತನಿಖಾ ಸಂಸ್ಥೆಯ ವಶದಲ್ಲಿರುವ ಯಾಸೀನ್ ಭಟ್ಕಳ್ ಹಾಗೂ ಅವನ ಸಹಚರ ತೆಹಸೀನ್ ಅಖ್ತರ್ ಸರಣಿ ಸ್ಫೋಟದ ರೂವಾರಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಬಿಹಾರದ ಬುದ್ಧಗಯಾ ದೇವಸ್ಥಾನದಲ್ಲಿ ನಡೆಸಲಾಗಿದ್ದ ಸರಣಿ ಸ್ಫೋಟಗಳಿಗೂ, ನಿನ್ನೆ ಗಾಂಧಿ ಮೈದಾನದಲ್ಲಿ ನಡೆದಿರುವ ಸರಣಿ ಸ್ಫೋಟಕ್ಕೂ ಸಾಮ್ಯತೆ ಇರುವುದನ್ನು ತನಿಖಾ ತಂಡ ಗುರುತಿಸಿದೆ.
ಈ ಮಧ್ಯೆ, ಬಾಂಬ್ ಸ್ಫೋಟ ಪ್ರಕರಣವು ರಾಜಕಾರಣಿಗಳ ಮಧ್ಯೆ ವಾಗ್ವಾದಕ್ಕೆ ದಾಳವಾಗಿದೆ. ಗಮನಾರ್ಹವೆಂದರೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಕೇಂದ್ರ ಸರ್ಕಾರ ಮೊದಲೇ ಮುನ್ಸೂಚನೆ ನೀಡಿತ್ತು ಎಂಬ ಮಾಹಿತಿಯೂ ಬಹಿರಂಗವಾಗಿದೆ. ಇದರಿಂದ ಕೇಂದ್ರ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಭಾರಿ ಮುಜುಗರವಾಗಿದೆ.
ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೂಂಕಾರ ಸಮಾವೇಶಕ್ಕೆ ದಾಳಿಯ ಭೀತಿ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಬಿಹಾರ ಸರ್ಕಾರಕ್ಕೆ ಅಕ್ಟೋಬರ್ 24ರಂದೇ ಪತ್ರ ಬರೆದು ಮುನ್ಸೂಚನೆ ನೀಡಿದೆ. ಇದರಿಂದ ನಿತೀಶ್ ಕುಮಾರ್ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ.