ಪಕ್ಷದ ಕಾರ್ಯಕರ್ತರಿಗೆ ಒಂದು ಹೊತ್ತಿನ ಊಟ ಬಿಡಲು ಹೇಳಿದ ಬಿಜೆಪಿ ರಾಷ್ಟ್ರಾಧ್ಯಕ್ಷ
ನವದೆಹಲಿ, ಏಪ್ರಿಲ್ 6: "ದೇಶ ಎದುರಿಸುತ್ತಿರುವ ಈ ಮೆಡಿಕಲ್ ಎಮರ್ಜೆನ್ಸಿ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಒಂದು ಹೊತ್ತಿನ ಊಟವನ್ನು ತ್ಯಜಿಸಬೇಕು" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕರೆ ನೀಡಿದ್ದಾರೆ.
"ಭಾರತ ಈಗ ಕೊರೊನಾ ವಿರುದ್ದ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ನಮ್ಮ ಪ್ರಧಾನಿಗಳು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ನಾವು ಅದನ್ನು ಪಾಲನೆ ಮಾಡಬೇಕು" ಎಂದು ನಡ್ಡಾ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರಿಗೆ ಐದು ಸಲಹೆ ನೀಡಿದ ಪ್ರಧಾನಿ ನರೇಂದ್ರ ಮೋದಿ
ಪಕ್ಷದ ನಲವತ್ತನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾಲುಸಾಲು ಟ್ವೀಟ್ ಮಾಡಿರುವ ನಡ್ಡಾ, "ದೇಶದ ಎಲ್ಲಾ ಸಂಸದರ ಸಂಬಳವನ್ನು ಮುಂದಿನ ಒಂದು ವರ್ಷದ ಅವಧಿಗೆ ಶೇ. 30 ಕಡಿತಗೊಳಿಸುವ ನಿರ್ಧಾರವನ್ನು ಪ್ರಧಾನಿಗಳು ಪ್ರಕಟಿಸಿದ್ದಾರೆ. ಬಿಜೆಪಿ ಇದನ್ನು ಸ್ವಾಗತಿಸುತ್ತದೆ" ಎಂದು ನಡ್ಡಾ ಟ್ವೀಟ್ ನಲ್ಲಿ ಹೇಳಿದ್ದಾರೆ.
"ಪ್ರಧಾನಿಗಳ ಒಂದೊಂದು ನಿರ್ಧಾರವೂ ನಮಗೆ ಪ್ರೇರಣೆ. ದೇಶದ ಎದುರಿಸುತ್ತಿರುವ ಇಂತಹ ಸಂಕಷ್ಟದ ಸಮಯದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಎಲ್ಲಾ ರಾಜ್ಯಪಾಲರೂ ವೇತನ ಕಡಿತಕ್ಕೆ ಒಪ್ಪಿಗೆಯನ್ನು ನೀಡಿದ್ದಾರೆ" ಎಂದು ಜೆ.ಪಿ.ನಡ್ಡಾ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
"ನಮ್ಮೆಲ್ಲಾ ಬಿಜೆಪಿಯ ಕಾರ್ಯಕರ್ತರು ಪ್ರಧಾನಿ ನೀಡಿದ ಐದು ಸಲಹೆಗಳನ್ನು ಖಂಡಿತ ಪಾಲಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನಿಮ್ಮ ಮಾರ್ಗದರ್ಶನದಲ್ಲಿ ಪಕ್ಷ ಇನ್ನೂ ಬೆಳೆಯಲಿ" ಎಂದು ನಡ್ಡಾ ಆಶಿಸಿದ್ದಾರೆ.
"ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ತಲುಪಿಸಲು ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು" ಎನ್ನುವುದೂ ಸೇರಿದಂತೆ, ಐದು ಸಲಹೆಗಳನ್ನು ಪ್ರಧಾನಿ ಮೋದಿ, ಪಕ್ಷದ ಕಾರ್ಯಕರ್ತರಿಗೆ ನೀಡಿದ್ದರು.