ರಾಜ್ಯಸಭೆ ಚುನಾವಣೆ: ಎನ್‌ಡಿಎ ಕೈತಪ್ಪಲಿರುವ ಏಳೆಂಟು ಸ್ಥಾನ

ನವದೆಹಲಿ, ಮೇ 15: ಮುಂದಿನ ತಿಂಗಳ ಜೂನ್ 10 ರಂದು 57 ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಎನ್‌ಡಿಎ ಮತ್ತು ಯುಪಿಎ ಮೈತ್ರಿಕೂಟದಲ್ಲಿ ಕಲರವ ಶುರುವಾಗಿದೆ. ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಜೊತೆಗೆ 11 ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ರಾಷ್ಟ್ರಪತಿ ಚುನಾವಣೆ ಹಾಗೂ ಅನೇಕ ಮಸೂದೆಗಳ ಅಂಗೀಕಾರ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ರಾಜ್ಯಸಭೆ ಚುನಾವಣೆಯತ್ತ ಬಿಜೆಪಿ ಸಂಪೂರ್ಣ ಗಮನ ನೆಟ್ಟಿದೆ. ಸದ್ಯ ತೆರವಾಗಿರುವ ರಾಜ್ಯಸಭೆ ಸ್ಥಾನಗಳಲ್ಲಿ ಹೆಚ್ಚಿನವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದ್ದಾಗಿವೆ.

ಇದರಿಂದ ಬಿಜೆಪಿ ಪಾಳಯ ಒಂದು ರೀತಿಯಲ್ಲಿ ಒತ್ತಡಕ್ಕೆ ಸಿಲುಕಿದೆ. ಕರ್ನಾಟಕದ ಸೇರಿದಂತೆ ಹದಿನೈದು ರಾಜ್ಯಗಳ 57 ಸ್ಥಾನಗಳ ಪೈಕಿ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಬಲ 31 ಇದೆ. ಈಗ ಬದಲಾದ ವಿಧಾನಸಭೆ ಬಲಾಬಲ ಲೆಕ್ಕಾಚಾರದ ಪ್ರಕಾರ ಬಿಜೆಪಿಗೆ ಏಳೆಂಟು ಸ್ಥಾನಗಳ ನಷ್ಟ ಆಗುವ ಸಾಧ್ಯತೆ ಇದೆ.

ಚುನಾವಣೆ ವಿವರ

ಚುನಾವಣೆ ವಿವರ

15 ರಾಜ್ಯಗಳಿಂದ 57 ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ಇದೆ. ಮೇ 31 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದರೆ ಜೂನ್ 3ರವರೆಗೆ ನಾಮಪತ್ರ ವಾಪಸ್ ಪಡೆಯುವ ಅವಕಾಶ ನೀಡಲಾಗಿದೆ. ಜೂನ್ 10ರಂದು ಮತದಾನವಾದರೆ ಅದೇ ದಿನ ಸಂಜೆ 5ರಿಂದ ಮತ ಎಣಿಕೆ ಕಾರ್ಯ ನಿಗದಿಯಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಸ್ಥಾನ?

ಎಲ್ಲೆಲ್ಲಿ ಎಷ್ಟೆಷ್ಟು ಸ್ಥಾನ?

ಉತ್ತರಪ್ರದೇಶ: 11
ತಮಿಳುನಾಡು: 6
ಮಹಾರಾಷ್ಟ್ರ: 6
ಬಿಹಾರ: 5
ಕರ್ನಾಟಕ: 4
ಆಂಧ್ರ: 4
ರಾಜಸ್ಥಾನ: 4
ಮಧ್ಯಪ್ರದೇಶ: 3
ಒಡಿಶಾ: 3
ತೆಲಂಗಾಣ: 2
ಛತ್ತೀಸ್‌ಗಡ: 2
ಪಂಜಾಬ್: 2
ಜಾರ್ಖಂಡ್: 2
ಹರ್ಯಾಣ: 2
ಉತ್ತರಾಖಂಡ್: 1

ಉತ್ತರ ಪ್ರದೇಶದಲ್ಲಿ ಬಿಜೆಪಿ ಲಾಭ

ಉತ್ತರ ಪ್ರದೇಶದಲ್ಲಿ ಬಿಜೆಪಿ ಲಾಭ

ಉತ್ತರ ಪ್ರದೇಶ ಬಿಟ್ಟರೆ ಉಳಿದ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಬರುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಈ ರಾಜ್ಯದಲ್ಲಿರುವ 11 ಸ್ಥಾನಗಳಲ್ಲಿ ಬಿಎಸ್‌ಪಿ 2 ಮತ್ತು ಕಾಂಗ್ರೆಸ್ 1 ಸ್ಥಾನ ಕಳೆದುಕೊಳ್ಳುವುದು ಖಚಿತ. ಈ ಮೂರು ಸ್ಥಾನಗಳು ಬಿಜೆಪಿಯ ಪಾಲಾಗಲಿದೆ. ಇವು ಸೇರಿ ಬಿಜೆಪಿಗೆ ಒಟ್ಟು 7 ಸ್ಥಾನಗಳು ಸಿಗುವುದು ನಿಶ್ಚಿತ. ಸಮಾಜವಾದಿ ಪಕ್ಷ ಮೂರು ಸ್ಥಾನ ಉಳಿಸಿಕೊಳ್ಳಲಿದೆ. ಇನ್ನೊಂದು ಸ್ಥಾನಕ್ಕೆ ಪೈಪೋಟಿ ಇದ್ದು, ಇದು ಬಿಜೆಪಿ ಬುಟ್ಟಿಗೆ ಬೀಳುವ ಸಾಧ್ಯತೆ ದಟ್ಟವಾಗಿದೆ.

ಬೇರೆ ರಾಜ್ಯಗಳಲ್ಲಿ ಬಿಜೆಪಿಗೆ ನಷ್ಟ

ಬೇರೆ ರಾಜ್ಯಗಳಲ್ಲಿ ಬಿಜೆಪಿಗೆ ನಷ್ಟ

ಮಹಾರಾಷ್ಟ್ರದ 6 ರಾಜ್ಯಸಭಾ ಸ್ಥಾನಗಳಲ್ಲಿ ಬಿಜೆಪಿ ಮೂರು ಹೊಂದಿದೆ. ಆದರೆ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಹೋರಾಡಿದರೆ ಬಿಜೆಪಿ ಒಂದು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ತಮಿಳುನಾಡಿನ ಆರು ಸ್ಥಾನಗಳ ಪೈಕಿ ಮೂರು ಹೊಂದಿರುವ ಎನ್‌ಡಿಎ ಮಿತ್ರ ಎಐಎಡಿಎಂಕೆ ಒಂದು ಸ್ಥಾನ ಕಳೆದುಕೊಳ್ಳಬಹುದು ಎಂಬ ಲೆಕ್ಕಾಚಾರ ಇದೆ.

ಆಂಧ್ರ, ರಾಜಸ್ಥಾನದಲ್ಲಿ ಬಿಜೆಪಿ ಹಿನ್ನಡೆ

ಆಂಧ್ರ, ರಾಜಸ್ಥಾನದಲ್ಲಿ ಬಿಜೆಪಿ ಹಿನ್ನಡೆ

ಆಂಧ್ರ ಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚು ಆಘಾತವಾಗಲಿದೆ. ಇಲ್ಲಿ ಚುನಾವಣೆ ನಡೆಯಲಿರುವ ನಾಲ್ಕು ರಾಜ್ಯಸಭೆ ಸ್ಥಾನಗಳಲ್ಲಿ ಬಿಜೆಪಿ ಬರೋಬ್ಬರಿ ಮೂರನ್ನು ಹೊಂದಿದೆ. ಆದರೆ, ಜೂನ್ 10ರಂದು ಈ ಮೂರೂ ಸ್ಥಾನಗಳು ಬಿಜೆಪಿಯ ಕೈತಪ್ಪುವ ಸಾಧ್ಯತೆ ಹೆಚ್ಚಿದೆ.

ಆಂಧ್ರದಂತೆ ರಾಜಸ್ಥಾನದಲ್ಲಿ ಎಲ್ಲಾ ನಾಲ್ಕು ರಾಜ್ಯಸಭೆ ಸ್ಥಾನಗಳು ಬಿಜೆಪಿಯ ಸದಸ್ಯರದ್ದಾಗಿವೆ. ಆದರೆ, ಈ ಬಾರಿ ಮೂರು ಸ್ಥಾನಗಳು ಬಿಜೆಪಿಯ ಕೈತಪ್ಪುವ ನಿರೀಕ್ಷೆ ಇದೆ. ಒಂದನ್ನು ಮಾತ್ರ ಬಿಜೆಪಿ ಉಳಿಸಿಕೊಳ್ಳಬಹುದು.

ಬೇರೆ ರಾಜ್ಯಗಳ ಸ್ಥಿತಿ

ಬೇರೆ ರಾಜ್ಯಗಳ ಸ್ಥಿತಿ

ಛತ್ತೀಸ್‌ಗಡದ ಎರಡೂ ಸ್ಥಾನಗಳನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಬಿಜೆಪಿಗೆ ಇಲ್ಲಿ ಒಂದು ಸ್ಥಾನ ಕೈತಪ್ಪಿದಂತಾಗುತ್ತದೆ. ಜಾರ್ಖಂಡ್ ರಾಜ್ಯದಲ್ಲಿ ಎರಡೂ ಸ್ಥಾನಗಳನ್ನು ಹೊಂದಿರುವ ಬಿಜೆಪಿ ಒಂದನ್ನು ಮಾತ್ರ ಉಳಿಸಿಕೊಳ್ಳಲು ಯಶಸ್ವಿಯಾಗಬಹುದು. ಮಧ್ಯಪ್ರದೇಶದಲ್ಲಿ ಬಿಜೆಪಿ ಎರಡು ಸ್ಥಾನ ಉಳಿಸಿಕೊಳ್ಳಬಹುದು.

ಕರ್ನಾಟಕ ಲೆಕ್ಕಾಚಾರ

ಕರ್ನಾಟಕ ಲೆಕ್ಕಾಚಾರ

ಕರ್ನಾಟಕದಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳು ತೆರವಾಗುತ್ತಿವೆ. ಬಿಜೆಪಿ 2 ಮತ್ತು ಕಾಂಗ್ರೆಸ್ 2 ಸ್ಥಾನಗಳನ್ನು ಹೊಂದಿದ್ದವು. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಕೆ. ಸಿ. ರಾಮಮೂರ್ತಿ ಆಯ್ಕೆಯಾಗಿದ್ದರೆ, ಕಾಂಗ್ರೆಸ್‌ನಿಂದ ಜೈರಾಮ್ ರಮೇಶ್ ಮತ್ತು ದಿವಂಗತ ಆಸ್ಕರ್ ಫರ್ನಾಂಡಿಸ್ ಸದಸ್ಯರಾಗಿದ್ದರು. ಆಸ್ಕರ್ ಫರ್ನಾಂಡಿಸ್ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನಿಧನರಾದ್ದರಿಂದ ಆಗಿನಿಂದಲೂ ಅವರ ಸ್ಥಾನ ಖಾಲಿ ಇದೆ.

ಈ ನಾಲ್ಕರಲ್ಲಿ ಬಿಜೆಪಿಗೆ ಎರಡು ಸ್ಥಾನ ಖಚಿತ. ಕಾಂಗ್ರೆಸ್ ಒಂದನ್ನು ಪಡೆಯುತ್ತದೆ. ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಇದೆ. ಜೆಡಿಎಸ್ ಬೆಂಬಲ ಯಾರಿಗೆ ಸಿಗುತ್ತದೆ? ಎಂಬುದರ ಮೇಲೆ ಈ ನಾಲ್ಕನೇ ಸ್ಥಾನ ನಿರ್ಧಾರವಾಗಲಿದೆ.

ಕರ್ನಾಟಕದಿಂದ ರಾಜ್ಯಸಭಾ ಸ್ಥಾನಗಳಿಗೆ ನಿರ್ಮಲಾ ಸೀತಾರಾಮನ್, ಕೆ. ಸಿ. ರಾಮಮೂರ್ತಿ ಸೇರಿ ಐವರು ಹೆಸರುಗಳಿರುವ ಸಂಭಾವ್ಯರ ಪಟ್ಟಿಯನ್ನು ಬಿಜೆಪಿ ತಯಾರಿಸಿದೆ. ಇವರಲ್ಲಿ ನಿರ್ಮಲಾ ಮತ್ತು ರಾಮಮೂರ್ತಿ ಅವರಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದೆ.

ಕರ್ನಾಟಕದ ಪರಿಷತ್ ಪೈಪೋಟಿ

ಕರ್ನಾಟಕದ ಪರಿಷತ್ ಪೈಪೋಟಿ

ಇದೇ ವೇಳೆ ರಾಜ್ಯದಲ್ಲಿ 11 ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‌ನ 7 ಸ್ಥಾನಗಳು, ಹಾಗು ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪರಿಷತ್‌ನಲ್ಲಿ ಬಹುಮತ ಗಳಿಸಲು ಬಿಜೆಪಿಗೆ ಈ ಪರಿಷತ್ ಚುನಾವಣೆ ಮಹತ್ವದ್ದಾಗಿದೆ. ಶಿಕ್ಷಕರ ಕ್ಷೇತ್ರದಿಂದ ಅರುಣ ಶಹಾಪುರ ಮತ್ತು ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದೆ.
ಪದವೀಧರರ ಕ್ಷೇತ್ರಗಳಿಂದ ಹಾಲಿ ಸದಸ್ಯ ಹಣುಮಂತ ರುದ್ರಪ್ಪ ನಿರಾಣಿ ಮತ್ತು ಎಂ. ವಿ. ರವಿಶಂಕರ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಮೂಲಗಳು ಹೇಳುತ್ತಿವೆ. ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಜೂನ್ 13ರಂದು ಚುನಾವಣೆ ನಡೆಯಲಿದ್ದು ಜೂನ್ 15ರಂದು ಫಲಿತಾಂಶ ಪ್ರಕಟವಾಗಲಿದೆ.

ವಿಧಾನಸಭೆಯಿಂದ ಪರಿಷತ್‌ನ ಏಳು ಸ್ಥಾನಗಳಿಗೆ ಬಿಜೆಪಿ 20 ಸಂಭವನೀಯರ ಪಟ್ಟಿ ಮಾಡಿರುವುದು ತಿಳಿದುಬಂದಿದೆ. ಇದರಲ್ಲಿ ಬಿ. ವೈ. ವಿಜಯೇಂದ್ರರಿಗೆ ಟಿಕೆಟ್ ಖಚಿತ ಎಂದು ಹೇಳಲಾಗುತ್ತಿದೆ.

ರಾಜ್ಯಸಭೆ ಒಟ್ಟು ಬಲ

ರಾಜ್ಯಸಭೆ ಒಟ್ಟು ಬಲ

ಸದ್ಯ ರಾಜ್ಯಸಭೆಯಲ್ಲಿ 12 ನಾಮನಿರ್ದೇಶನದ ಸ್ಥಾನ ಸೇರಿದಂತೆ ಒಟ್ಟು 245 ಸದಸ್ಯರ ಬಲ ಇದೆ. ಇದರಲ್ಲಿ ಎನ್‌ಡಿಎ ಮೈತ್ರಿಕೂಟ 116 ಮತ್ತು ಯುಪಿಎ ಮೈತ್ರಿಕೂಟ 55 ಸ್ಥಾನಗಳನ್ನು ಹೊಂದಿವೆ. ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಸೇರಿ ಇತರ ಪಕ್ಷಗಳು 70 ಸ್ಥಾನಗಳನ್ನು ಹೊಂದಿವೆ. ಜೂನ್ 10ರ ನಂತರ ಎನ್‌ಡಿಎ ಮೈತ್ರಿಕೂಟದ ಬಲ 110ಕ್ಕಿಂತ ಕೆಳಗಿಳಿಯಬಹುದು ಎಂಬ ಎಣಿಕೆ ಇದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+