ಪಕ್ಷದ ನಾಯಕರ ಅಸಂಬದ್ದ ಹೇಳಿಕೆ: ಸತ್ಯ ಒಪ್ಪಿಕೊಂಡ ಅಮಿತ್ ಶಾ
ನವದೆಹಲಿ, ಹೈದರಾಬಾದ್ ಜ 9: ಮತಾಂತರ ಮತ್ತು ಇತರ ವಿಚಾರಗಳಲ್ಲಿ ಪಕ್ಷದ ಕೆಲವು ನಾಯಕರು ಹೇಳುತ್ತಿರುವ ಹೇಳಿಕೆಗಳಿಂದ ನಾವು ಮುಜುಗರ ಎದುರಿಸ ಬೇಕಾಗುತ್ತಿರುವುದು ನಿಜ ಎಂದು ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಕೋಮು, ಧರ್ಮ, ಮತಾಂತರ ಮುಂತಾದವು ಸೂಕ್ಷ್ಮ ವಿಚಾರಗಳು. ಈ ವಿಚಾರದಲ್ಲಿ ಎಚ್ಚರಿಕೆಯಿಂದ ಹೇಳಿಕೆ ನೀಡಬೇಕಾಗುತ್ತದೆ. ಇಲ್ಲಸಲ್ಲದ ಹೇಳಿಕೆ ನೀಡಿದರೆ ಮುಗುಜರಕ್ಕೀಡಾಗುವುದು ಪಕ್ಷ. (ಬಿಜೆಪಿ ಗೆಲುವಿನ ಅಭಿಯಾನ ತಡೆಯಲು ರಾಹುಲ್ ಶಕ್ತರೇ)
ಪಕ್ಷದ ಅಧಿಕೃತ ವಕ್ತಾರರು ಹೊರತಾಗಿ ಯಾರೂ ಈ ಬಗ್ಗೆ ಹೇಳಿಕೆ ನೀಡಬಾರದೆಂದು ಪಕ್ಷದ ಎಲ್ಲಾ ಮುಖಂಡರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಹೈದರಾಬಾದಿನಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅಮಿತ್ ಶಾ, ಕೇಂದ್ರ ಸರಕಾರದ ಅಭಿವೃದ್ದಿ ಮತ್ತು ನೂತನ ಕಾರ್ಯಕ್ರಮವನ್ನು ಜನರಿಗೆ ನಾವು ಮೊದಲು ತಲುಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ನಾಯಕರು ಮುಂದಾಗಬೇಕು.
ಮತಾಂತರ ನಮ್ಮ ಪಕ್ಷದ ಕಾರ್ಯಕ್ರಮವಲ್ಲ. ಆ ಕಾರ್ಯಕ್ರಮದ ಬಗ್ಗೆ ಪಕ್ಷದ ಮುಖಂಡರು ಮಾತನಾಡಬಾರದು. ಈ ಸಂಬಂಧ ಎಲ್ಲಾ ರಾಜ್ಯ ಘಟಕದ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ ಎಂದು ಅಮಿತ್ ಶಾ ಪುನರುಚ್ಚಿಸಿದ್ದಾರೆ. (ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಅಮಿತ್ ಶಾ ಕರೆ)
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ಎಚ್ಚರಿಕೆಯೂ ನಡುವೆಯೂ ಹರಿದು ಬಂದ ಕೆಲವೊಂದು ವಿವಾದಕಾರಿ ಹೇಳಿಕೆಗಳು..

ಸಾಧ್ವಿ ಜ್ಯೋತಿ
ದೆಹಲಿ ಜನತೆಗೆ ಶ್ರೀರಾಮಭಕ್ತರ (ಬಿಜೆಪಿ) ಸರಕಾರ ಬೇಕೋ ಅಥವಾ ಅಕ್ರಮ ಸಂತಾನದವರ (ಸೋನಿಯಾ-ಕಾಂಗ್ರೆಸ್) ಸರಕಾರ ಬೇಕೋ ಎನ್ನುವುದನ್ನು ನೀವೇ ನಿರ್ಧರಿಸಿ ಎಂದು ಸಾಧ್ವಿ ಜ್ಯೋತಿ ಮತದಾರರಿಗೆ ಕರೆ ನೀಡಿದ್ದರು. ನಂತರ ಪ್ರಧಾನಿ ಮೋದಿಯವರ ಎಚ್ಚರಿಕೆಯಿಂದ ಕ್ಷಮೆಯಾಚಿಸಿದ್ದರು. ಕಾಂಗ್ರೆಸ್ ಸಾಧ್ವಿಯ ರಾಜೀನಾಮೆಗೆ ಪಟ್ಟು ಹಿಡಿದಿತ್ತು. ಉತ್ತರ ಪ್ರದೇಶದ ಫತೇಪುರ್ ಕ್ಷೇತ್ರದಿಂದ ಮೊದಲ ಬಾರಿಗೆ ಇವರು ಸಂಸತ್ತಿಗೆ ಆಯ್ಕೆಯಾಗಿದ್ದರು.

ತೇಜಶ್ವಿನಿ ರಮೇಶ್
ಕಾಂಗ್ರೆಸ್ನಲ್ಲಿ ಸುಂದರ ಮಹಿಳೆಯರನ್ನು ವಸ್ತುವಿನಂತೆ ಬಳಸಿಕೊಳ್ಳಲಾಗುತ್ತಿದೆ. ಆ ಪಕ್ಷದಲ್ಲಿ ದುಶ್ಯಾಸನನಂತಹ ಮಹಿಳಾ ಪೀಡಕರಿದ್ದಾರೆ. ಪುರುಷರು ಹೇಳಿದಂತೆ ಕೇಳಿದರೆ ಮಾತ್ರ ಮಹಿಳೆಯರಿಗೆ ಪದವಿ ಸಿಗುತ್ತದೆ. ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ, ಅಧಿಕಾರ ನೀಡುವುದಿಲ್ಲ. ಚಿತ್ರನಟಿ ರಮ್ಯಾ ಸುಂದರಿಯಾಗಿದ್ದು, ಸೆಲೆಬ್ರಿಟಿಯಾಗಿರುವ ಕಾರಣ ಅವರಿಗೆ ಟಿಕೆಟ್ ನೀಡಲಾಗಿದೆ. ಆದ್ದರಿಂದ ಮಹಿಳೆಯರು ಕಾಂಗ್ರೆಸ್ ಸೇರುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಬಿಜೆಪಿ ನಾಯಕಿ ತೇಜಶ್ವಿನಿ ರಮೇಶ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ನಂತರ ಉಮಾಶ್ರೀ - ತೇಜಶ್ವಿನಿ ನಡುವೆ ತೀವ್ರ ವಾಗ್ಯುದ್ದಕ್ಕೆ ಒಳಗಾಗಿತ್ತು.

ಸಾಕ್ಷಿ ಮಹಾರಾಜ್
ಹಿಂದೂ ಹೆಣ್ಣು ಮಕ್ಕಳು ಕನಿಷ್ಠ 4 ಮಕ್ಕಳನ್ನು ಪಡೆಯಬೇಕು. ನಾಲ್ಕು ಜನ ಹೆಂಡಿತಿಯರಿಗೆ 40 ಮಕ್ಕಳು ಎಂಬ ಪರಿಕಲ್ಪನೆಯನ್ನು ಭಾರತದಲ್ಲಿ ಅಳವಡಿಸಲು ಸಾಧ್ಯವಿಲ್ಲ. ಹಿಂದೂ ಸಮಾಜ ರಕ್ಷಣೆಗೆ ಇರುವುದು ಒಂದೇ ದಾರಿ. ಸಮಾಜದ ಪ್ರತಿಯೊಬ್ಬ ಮಹಿಳೆಯು ನಾಲ್ಕು ಮಕ್ಕಳನ್ನು ಪಡೆಯಬೇಕು ಎಂದು ಸಾಕ್ಷಿ ಮಹಾರಾಜ್ ಮೀರತ್ ನಲ್ಲಿ ನಡೆದ ಸಂತ ಸಮಾಗಮ ಮಹೋತ್ಸವದಲ್ಲಿ ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ನಾಥೂರಾಮ್ ಗೋಡ್ಸೆ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಂತಕ ನಾಥುರಾಮ್ ಗೋಡ್ಸೆಯನ್ನು 'ದೇಶಪ್ರೇಮಿ' ಎಂದು ಹಾಡಿ ಹೊಗಳಿದ್ದವರು ಇದೇ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್. ಇದು ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾದಾಗ, ನಾನೇನಾದರೂ ತಪ್ಪು ಮಾತನಾಡಿದ್ದರೆ ಕ್ಷಮಿಸಿ, ನನ್ನ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳುತ್ತೇನೆ. ಗೋಡ್ಸೆ ದೇಶಪ್ರೇಮಿಯಾಗಿರಲಿಲ್ಲ' ಎಂದು ಸಾಕ್ಷಿ ಮಹಾರಾಜ್ ಯೂ ಟರ್ನ್ ಹೊಡೆದಿದ್ದರು.

ತಾಜ್ ಮಹಲ್ ಪ್ರೇಮಸೌಧವಲ್ಲ, ದೇವಸ್ಥಾನ
ತಾಜ್ ಮಹಲ್ ಪ್ರೇಮಸೌಧವಲ್ಲ, ಪುರಾತನ ದೇಗುಲ, ಈ ಹಿಂದೆ ಶಿವನ ದೇಗುಲವಾಗಿತ್ತು. ನಂತರ ಮೊಘಲರ ಸಾಮ್ರಾಜ್ಯ ಬೆಳೆದಂತೆ ಇಲ್ಲಿನ ಪ್ರದೇಶ ಅವರ ಕೈಸೇರಿತು ಎಂದು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಲಕ್ಷ್ಮಿಕಾಂತ್ ಹೇಳಿಕೆಯನ್ನು ನೀಡಿದ್ದರು.

ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ಪಶ್ಚಿಮದಲ್ಲಿ ಕಳೆದ ಎರಡುವರೆ ವರ್ಷದಲ್ಲಿ 450 ಗಲಭೆ ಪ್ರಕರಣಗಳು ವರದಿಯಾಗಿದೆ. ಈ ಭಾಗದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಇಲ್ಲಿ ಗಲಭೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಬಿಜೆಪಿ ಮುಖಂಡ ಯೋಗಿ ಆದಿತ್ಯನಾಥ್ ಹೇಳಿದ್ದರು.

ಅಮಿತ್ ಶಾ
ಹಲವು ಬಾರಿ ನಮ್ಮ ಪಕ್ಷದ ಮುಖಂಡರಿಗೆ ಮುಜುಗರಕ್ಕೀಡಾಗುವ ಹೇಳಿಕೆ ನೀಡಬೇಡಿ ಎಂದು ಎಚ್ಚರಿಸಲಾಗಿದೆ. ಆದರೂ ಕೆಲವೊಂದು ಅಸಂಬದ್ದ ಹೇಳಿಕೆಗಳನ್ನು ಕೆಲವು ನಾಯಕರು ನೀಡುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ ಎಂದು ಅಮಿತ್ ಶಾ ಸತ್ಯ ಒಪ್ಪಿಕೊಂಡಿದ್ದಾರೆ.












Click it and Unblock the Notifications