ದ್ರಾಕ್ಷಿ ಹುಳಿ ಎನ್ನುತ್ತಿದೆ ಕಾಂಗ್ರೆಸ್: ಸುಬ್ರಮಣಿಯನ್ ಸ್ವಾಮಿ ಲೇವಡಿ!
ನವದೆಹಲಿ, ಜೂನ್ 28: 'ಕಾಂಗ್ರೆಸ್ ಕತೆ ದ್ರಾಕ್ಷಿ ಹುಳಿ ಎಂದ ನರಿಯ ಕತೆಯಾಯ್ತು! ತನ್ನ ಬಳಿ ಮಾಡಲಾಗಿದ್ದನ್ನು ಬೇರೆಯವರು ಮಾಡಿದರೆ ಅದಕ್ಕೆ ಅಪಹಾಸ್ಯ ಮಾಡುವುದು ಸರಿಯಲ್ಲ' ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಚಾನೆಲ್ ಗಳಲ್ಲಿ ಬಿಡುಗಡೆಯಾದ ಕುರಿತಂತೆ ಕಾಂಗ್ರೆಸ್ ಇಂದು ಬೆಳಿಗ್ಗೆ ಪ್ರತಿಕ್ರಿಯೆ ನೀಡಿತ್ತು. 'ಸೈನಿಕರ ಬಲಿದಾನವನ್ನು ಬಿಜೆಪಿ ಮತಗಳಿಕೆಗಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿಗೆ ತನ್ನ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂದಾಗ ಇಂಥ ವಿಡಿಯೋಗಳು ನೆನಪಾಗುತ್ತವೆ' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದರು.
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅರುಣ್ ಶೌರಿ ಅಚ್ಚರಿಯ ಹೇಳಿಕೆ
ಈ ಕುರಿತು ಪ್ರತಿಕ್ರಿಯೆ ನೀಡಿದ ಸುಬ್ರಮಣಿಯನ್ ಸ್ವಾಮಿ, 'ಅವರಿಗೆ(ಕಾಂಗ್ರೆಸ್ಸಿಗೆ) ಈ ಕೆಲಸವನ್ನು ಮಾಡಲಿಲ್ಲ ಎಂದ ಮಾತ್ರಕ್ಕೆ ಬಿಜೆಪಿಯವರು ಅದನ್ನು(ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಿಡುಗಡೆ) ಮಾಡಬಾರದೆ? ಇದರಿಂದ ಜನರ ಭಾವನೆಗಳಿಗೆ ಬಿಜೆಪಿ ನೋವುಂಟು ಮಾಡಿದಂತೆ ಹೇಗಾಗುತ್ತದೆ? ಕಾಂಗ್ರೆಸ್ ಈ ಕೆಲಸ ಮಾಡಿದ್ದರೆ ಅದನ್ನು ಅಡಗಿಸಿಡುವುದೇಕೆ? ಅವರು ಮಾಡಿದ್ದರೆ ಅವರೂ ಹೇಳಲಿ? ಕಾಂಗ್ರೆಸ್ಸಿನ ಪರಿಸ್ಥಿತಿ, ದ್ರಾಕ್ಷಿಹುಳಿ ಎಂದ ನರಿಯ ಕತೆಯಾಯ್ತು' ಎಂದು ಸುಬ್ರಮಣಿಯನ್ ಸ್ವಾಮಿ ಲೇವಡಿ ಮಾಡಿದ್ದಾರೆ.
2016 ರ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನೆ ಪಾಕುಸ್ತಾನದ ಗಡಿಯೊಳಗೆ ನುಗ್ಗಿ ಅಲ್ಲಿನ ಉಗ್ರರ ನೆಲೆಗಳನ್ನು ದ್ವಂಸಗೊಳಿಸಿತ್ತು. ಇದಕ್ಕೆ ಸರ್ಜಿಕಲ್ ಸ್ಟ್ರೈಕ್ ಎಂದು ಕರೆಯಲಾಗುತ್ತು. ಉರಿಯಲ್ಲಿ ಸೈನಿಕರ ಶಿಬಿರದ ಮೇಲೆ ನಡೆದ ದಾಳಿಗೆ ಭಾರತ ಹೀಗೆ ಸೇಡು ತೀರಿಸಿಕೊಂಡಿತ್ತು. ಆದರೆ ಈ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದೇ ಸುಳ್ಳು ಎಂದು ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ದೂರುತ್ತಿವೆ.