ಉತ್ತರಪ್ರದೇಶದಲ್ಲಿ ಬಿಜೆಪಿ ಮುಖಂಡನ ಕಗ್ಗೊಲೆ
ಮುಝಾಫರ್ ನಗರ(ಉ.ಪ್ರ), ಜೂ.10: ಗ್ರೇಟರ್ ನೋಯ್ಡಾದ ಬಿಜೆಪಿ ಮುಖಂಡ ವಿಜಯ್ ಪಂಡಿತ್ ಅವರ ಹತ್ಯೆಯ ಶೋಕಾಚರಣೆ ಬೆನ್ನಲ್ಲೇ ಮತ್ತೊಬ್ಬ ಬಿಜೆಪಿ ಮುಖಂಡನ ಹತ್ಯೆಯಾಗಿದೆ. ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಿಜೆಪಿ ಮುಖಂಡರೊಬ್ಬರು ಸಾವನ್ನಪ್ಪಿದ್ದಾರೆ.
ಮೀರ್ಪುರದ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದ 40 ವರ್ಷ ವಯಸ್ಸಿನ ಓಂವೀರ್ ಎಂಬುವರೇ ಮೃತಪಟ್ಟಿರುವ ದುರ್ದೈವಿ. ಮಂಗಳವಾರ ಬೆಳಗ್ಗೆ ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಓಂವೀರ್ ಅವರ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ.

ಓಂವೀರ್ ಅವರು ತಮ್ಮ ತೋಟದ ಕಡೆಗೆ ಮುಂಜಾನೆ ನಡೆದುಕೊಂಡು ಹೋಗುವಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ರಿವಾಲ್ವರ್ ನಿಂದ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಓಂವೀರ್ ಅವರು ಮರು ದಾಳಿ ನಡೆಸಿದ್ದಾರೆ. ಆದರೆ, ಇಬ್ಬರು ದುಷ್ಕರ್ಮಿ ಗಳು ನಡೆಸಿದ ತೀವ್ರ ದಾಳಿಗೆ ಓಂವೀರ್ ಅವರು ಪ್ರತಿರೋಧ ಒಡ್ಡಲಾಗದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ ದಿನವೇ ರಾಜ್ಯವು ಮತ್ತೊಂದು ದುರ್ಘಟನೆಗೆ ಸಾಕ್ಷಿಯಾಗಿದೆ.
ಸರಕಾರದ ಉನ್ನತ ಅಧಿಕಾರಿಗಳು, ಎಲ್ಲಾ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಐಜಿಗಳು, ಡಿಐಜಿಗಳು ಹಾಗೂ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಜೊತೆ ಅಖಿಲೇಶ್ ಸಭೆ ನಡೆಸಿದ್ದರು.












Click it and Unblock the Notifications