ಒಗ್ಗಟ್ಟಿನಲ್ಲಿ ಬಲವಿದೆ: ವಿರೋಧ ಪಕ್ಷಗಳಿಂದ ಬಿಜೆಪಿಗೆ ಖಡಕ್ ಸಂದೇಶ ರವಾನೆ
ದೊಡ್ಡ ಗೆಲುವಿಗೆ ಮುನ್ನ ಸಣ್ಣ ಸೋಲು ಮಾಮೂಲು ಎನ್ನುವ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರ 'ಉಪಚುನಾವಣೆಯಲ್ಲಿನ ಸೋಲಿಗೆ' ನೀಡಿದ ವ್ಯಾಖ್ಯಾನ ಅತಿಯಾದ ಆತ್ಮವಿಶ್ವಾಸವೋ ಅಥವಾ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದೇಗೆಲ್ಲುತ್ತೆವೆ ಎನ್ನುವ ಆತ್ಮಬಲವೋ?
ಸಾಲುಸಾಲು ರಾಜ್ಯಗಳು ಬಿಜೆಪಿ ಮಡಿಲಿಗೆ ಸೇರುತ್ತಿರುವಾಗ, ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ ಎನ್ನುವುದನ್ನು ಅರಿತಿರುವ ಬಿಜಿಪಿಯೇತರ ಪಕ್ಷಗಳು, ಹೊಂದಾಣಿಕೆಯ ಮೂಲಕ ಬಿಜೆಪಿ ವಿರುದ್ದ ಕಣಕ್ಕಿಳಿದು, ಉಪಚುನಾವಣೆಯಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಿದೆ.
ವಾರದ ಹಿಂದೆ, ಕುಮಾರಸ್ವಾಮಿಯವರ ಪ್ರಮಾಣವಚನ ಸಂದರ್ಭದಲ್ಲಿ ಕಾಂಗ್ರೆಸ್ಸಿನೊಂದಿಗೆ ಹಲವು ಪ್ರಾದೇಶಿಕ ಪಕ್ಷಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು, ಒಗ್ಗಟ್ಟಿನ ಮಂತ್ರವನ್ನು ಜಪಿಸಿ ಹೋಗಿದ್ದವು. ಇದರ ಬೆನ್ನಲ್ಲೇ, ಉತ್ತರಪ್ರದೇಶ, ಬಿಹಾರ ಸೇರಿದಂತೆ ಉಪಚುನಾವಣೆಯ ಫಲಿತಾಂಶದಿಂದ ಉತ್ತೇಜಿತಗೊಂಡು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಇತರ ಪಕ್ಷಗಳು ಯುಗಳಗೀತೆ ಹಾಡುವ ಸಾಧ್ಯತೆ ದಟ್ಟವಾಗಿದೆ.
ಎನ್ಡಿಎ ಮೈತ್ರಿಕೂಟದ ಅಂಗ ಪಕ್ಷವಾಗಿದ್ದ ತೆಲುಗುದೇಶಂ, ಬಿಜೆಪಿಯಿಂದ ದೂರ ಸರಿದಿದ್ದು ಒಂದೆಡೆಯಾದರೆ, ಶಿವಸೇನೆ ಪಕ್ಷ ಬಿಜೆಪಿ ವಿರುದ್ದ ಬಾಂಬ್ ಸಿಡಿಸುತ್ತಲೇ ಬರುತ್ತಿದೆ. ಆಂಧ್ರದಲ್ಲಿ ತೆಲುಗುದೇಶಂ ಹೋದರೆ ಏನಂತೆ, ವೈಎಸ್ಆರ್ ಕಾಂಗ್ರೆಸ್, ಎನ್ಡಿಎ ಮೈತ್ರಿಕೂಟದ ತೆಕ್ಕೆಗೆ ಬರುವ ಸಾಧ್ಯತೆಯಿದ್ದರೂ, ಮಹಾರಾಷ್ಟ್ರದಲ್ಲಿನ ರಾಜಕೀಯ ಹಾಗಲ್ಲ.
ಇನ್ನು, ಪ್ರಾದೇಶಿಕ ಪಕ್ಷಗಳ ಬೆಂಬಲ ಬಿಜೆಪಿಗೆ ಸಿಗುತ್ತದೋ ಎನ್ನುವ ಪ್ರಶ್ನೆ ಬಂದಾಗ, ಪ್ರಮುಖವಾಗಿ ನಿಲ್ಲುವುದು ತಮಿಳುನಾಡಿನ ರಾಜಕೀಯ. ಸದ್ಯ, 40 ಸಂಸದರ ಬಲದ ತಮಿಳುನಾಡಿನಲ್ಲಿ, ಎಐಎಡಿಎಂಕೆ ಕಳೆದ ಚುನಾವಣೆಯಲ್ಲಿ ಬಹುತೇಕ ಕ್ಲೀನ್ ಸ್ವೀಪ್ ಮಾಡಿ 38ಸ್ಥಾನವನ್ನು ಗೆದ್ದಿತ್ತು. ಆದರೆ, ಆ ಚುನಾವಣೆ ಗೆದ್ದಾಗ, ತಮಿಳುನಾಡಿನ ಸಿಎಂ ಆಗಿದ್ದದ್ದು ದಿ. ಜಯಲಲಿತಾ. ಮೋದಿ ಒಂದು ಕಡೆ, ಮಿಕ್ಕವರೆಲ್ಲಾ ಇನ್ನೊಂದು ಕಡೆ,ಮುಂದೆ ಓದಿ..

ವ್ಯಕ್ತಿಪೂಜೆಗೆ ಹೆಸರಾಗಿರುವ ತಮಿಳುನಾಡು
ಅಭಿವೃದ್ದಿ ಕೆಲಸಕ್ಕಿಂತ ಹೆಚ್ಚಾಗಿ ವ್ಯಕ್ತಿಪೂಜೆಗೆ ಹೆಸರಾಗಿರುವ ತಮಿಳುನಾಡಿನಲ್ಲಿ, ಈ ಹಿಂದೆ ಎಐಎಡಿಎಂಕೆ ಜನಪ್ರತಿನಿಧಿಗಳು ಜಯಲಲಿತಾಗೆ ಹೇಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದರೋ, ಅದಕ್ಕಿಂತ ಹೆಚ್ಚು ವಿನಮ್ರತೆಯನ್ನು ಪ್ರಧಾನಿ ಮೋದಿಗೆ ತೋರಿಸುತ್ತಿದ್ದಾರೆ. ಇದು ಮೋದಿ ಮೇಲಿನ ಪ್ರೀತಿಯೋ ಅಥವಾ ಕೇಂದ್ರದ ಸುಪರ್ದಿಯಲ್ಲಿರುವ ಸಂಸ್ಥೆಗಳ ದಾಳಿಯ ಭಯವೂ ಇದ್ದಿರಬಹುದು. ಎಐಎಡಿಎಂಕೆ ಈಗ ಹಲವು ಭಾಗಗಳಾಗಿ ಚೂರುಚೂರು ಆಗಿವೆ. ಆದರೆ, ಚೂರುಚೂರು ಆಗಿರುವವರೆಲ್ಲರೂ ಜಯಲಲಿತಾ ಫೋಟೋ ಹಿಡಿದುಕೊಂಡು ರಾಜಕೀಯ ಮಾಡುತ್ತಿದ್ದಾರೆ.

ಯುಪಿಎ ಮೈತ್ರಿಕೂಟದಲ್ಲಿರುವ ಡಿಎಂಕೆ
2014ರ ಚುನಾವಣೆಯ ಫಲಿತಾಂಶ ತಮಿಳುನಾಡಿನಲ್ಲಿ ಪುನರಾವರ್ತನೆಯಾಗಲು ಸಾಧ್ಯವೇ, ಸದ್ಯದ ಮಟ್ಟಿಗೆ ಇದು ಸಾಧ್ಯವಾಗದ ಮಾತು. ಹಾಗಾದರೆ, ಅಲ್ಲಿನ ಜನರಿಗಿರುವ ಇನ್ನೊಂದು ಆಯ್ಕೆಯೆಂದರೆ ಕರುಣಾನಿಧಿಯವರ ಡಿಎಂಕೆ. ಅದು ಯುಪಿಎ ಮೈತ್ರಿಕೂಟದಲ್ಲೇ ತಮ್ಮನ್ನು ಗುರುತಿಸಿಕೊಂಡು ಬಂದಿರುವುದು, ಹಾಗಾಗಿ ಬಿಜೆಪಿಗೆ ಇಲ್ಲಿ ಮುಂದಿನ ಚುನಾವಣೆಯಲ್ಲಿ ಸೂಕ್ತ ವೇದಿಕೆ ನಿರ್ಮಾಣವಾಗುವುದು ಡೌಟು ಎನ್ನುವುದು ಸದ್ಯದ ರಾಜಕೀಯ ಲೆಕ್ಕಾಚಾರ.

ಬಿಹಾರದಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಹೊಂದಾಣಿಕೆ
ಬಿಹಾರದಲ್ಲಿ ಆರ್ಜೆಡಿ, ಜೆಡಿಯು ಒಟ್ಟಾಗಿ ಸರಕಾರ ರಚಿಸಿದ್ದರೂ, ಬದಲಾದ ರಾಜಕೀಯದಲ್ಲಿ ಸಿಎಂ ನಿತೀಶ್ ಕುಮಾರ್ ಅವರನ್ನೇ ಹೈಜಾಕ್ ಮಾಡಿ, ಬಿಜೆಪಿ ಅಧಿಕಾರಕ್ಕೆ ಬಂತು. ಮೇವು ಹಗರಣದಿಂದ ಲಾಲೂ ಜೈಲು ಪಾಲಾದರು. ಈ ಸಿಟ್ಟಿನಲ್ಲಿ ಆರ್ಜೆಡಿ, ಕಾಂಗ್ರೆಸ್ ಜೊತೆ ಸೇರಿಕೊಂಡು ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ದ ಕಣಕ್ಕಿಳಿದು, ಕಮಲಕ್ಕೆ ಸೋಲಿನ ರುಚಿ ತೋರಿಸಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ವಿರುದ್ದ ಸ್ಪರ್ಧಿಸುವುದು ಬಹುತೇಕ ಖಚಿತ.

ಇವೆಲ್ಲಕ್ಕಿಂತ ಹೆಚ್ಚಾಗಿ ಉತ್ತರಪ್ರದೇಶದ ಉಪಚುನಾವಣಾ ಫಲಿತಾಂಶ ಬಿಜಿಪಿಗೆ ಎಚ್ಚರಿಕೆಯ ಗಂಟೆ
ಇವೆಲ್ಲಕ್ಕಿಂತ ಹೆಚ್ಚಾಗಿ ಉತ್ತರಪ್ರದೇಶದ ಉಪಚುನಾವಣಾ ಫಲಿತಾಂಶ ಬಿಜಿಪಿಗೆ ಎಚ್ಚರಿಕೆಯ ಗಂಟೆ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ, ಬಿಜೆಪಿ ಸಾಲುಸಾಲು ಚುನಾವಣೆಯಲ್ಲಿ ಸೋಲು ಅನುಭವಿಸುತ್ತಿದೆ. ಕೈರಾನ ಲೋಕಸಭಾ ಕ್ಷೇತ್ರದ ಫಲಿತಾಂಶ, ಮತ್ತೆ ವಿರೋಧಿಗಳು ಒಂದಾದರೆ, ಬಿಜೆಪಿಯನ್ನು ಸೋಲಿಸುವುದು ದೊಡ್ಡ ಕೆಲಸವಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ. ಬಿಜೆಪಿ ಮೂರು ಲೋಕಸಭಾ ಕ್ಷೇತ್ರಗಳನ್ನು ಲೋಕಸಭಾ ಉಪಚುನಾವಣೆಯಲ್ಲಿ ಕಳೆದುಕೊಂಡಿದೆ. ಬಿಎಸ್ಪಿ-ಎಸ್ಪಿ-RLD ಒಗ್ಗಟ್ಟು ಪ್ರದರ್ಶಿಸಿ, ಬಿಜೆಪಿಗೆ ಸೋಲಿನ ರುಚಿ ಭರ್ಜರಿಯಾಗಿಯೇ ತೋರಿಸಿದೆ.

ಬಿಜೆಪಿಗೆ ಭಾರೀ ಫಲಿತಾಂಶ ನೀಡಿದ್ದು ಉತ್ತರಪ್ರದೇಶ
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಫಲಿತಾಂಶ ನೀಡಿದ್ದು ಉತ್ತರಪ್ರದೇಶ. ಖುದ್ದು ನರೇಂದ್ರ ಮೋದಿಯೇ ಇಲ್ಲಿಂದ ಕಣಕ್ಕಿಳಿದಿದ್ದರಿಂದ, ಎಂಬತ್ತು ಕ್ಷೇತ್ರಗಳ ಪೈಕಿ, ಬಿಜೆಪಿ ಮೈತ್ರಿಕೂಟ 72ಸ್ಥಾನವನ್ನು ಗೆದ್ದಿತ್ತು. ಸದ್ಯದ ಮತದಾರರ ಮೂಡ್ ಪ್ರಕಾರ, ಬಿಜೆಪಿ ಇಷ್ಟು ಸ್ಥಾನವನ್ನು ಖಂಡಿತ ಉಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಮತ್ತೊಂದು ಅವಧಿಗೆ ಮೋದಿ ಪ್ರಧಾನಿಯಾಗಬೇಕಾದರೆ, ಉತ್ತರಪ್ರದೇಶದ ಪಾಲು ಬಹುದೊಡ್ಡದು. ಸದ್ಯದ ಇಲ್ಲಿನ ರಾಜಕೀಯ ವಾತಾವರಣದ ಪ್ರಕಾರ, ಪ್ರಾದೇಶಿಕ ಪಕ್ಷಗಳು ಮತ್ತು ಕಾಂಗ್ರೆಸ್ ಜಂಟಿಯಾಗಿ, ಬಿಜೆಪಿ ವಿರುದ್ದ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚು.

ಶಿವಸೇನೆ ಮತ್ತು ಎನ್ಸಿಪಿ ಪ್ರಾದೇಶಿಕ ಪಕ್ಷಗಳು
ಇನ್ನು ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ಡಿಎ ಮೈತ್ರಿಕೂಟದ ಅಂಗಪಕ್ಷವಾಗಿದ್ದರೂ, ಬಿಜೆಪಿ ಜೊತೆಗಿನ ಸಂಬಂಧ ತೀರಾ ಹಳಸಿ ಹೋಗಿದೆ. ಶಿವಸೇನೆ ಮತ್ತು ಎನ್ಸಿಪಿ ಅಲ್ಲಿನ ಪ್ರಾದೇಶಿಕ ಪಕ್ಷಗಳು. ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಎನ್ಸಿಪಿ-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡರೂ ಎನ್ಡಿಎ ಮೈತ್ರಿಕೂಟಕ್ಕೆ ಕಷ್ಟವೇ. ಕಳೆದ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 48ರಲ್ಲಿ 41ಕ್ಷೇತ್ರವನ್ನು ಗೆದ್ದಿದ್ದವು. ಆಂಧ್ರ, ತೆಲಂಗಾಣ, ಪಂಜಾಬ್, ಜಾರ್ಖಂಡ, ಅಸ್ಸಾಂ, ಪಶ್ಚಿಮಬಂಗಾಳ ಮುಂತಾದ ಕಡೆ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರವಹಿಸುತ್ತವೆ. ಒಟ್ಟಿನಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ಬಿಜೆಪಿಯೇತರ ಪಕ್ಷಗಳು ತೋರಿಸಿಕೊಟ್ಟಿವೆ.












Click it and Unblock the Notifications