'ಬಿಜೆಪಿ, ಭಾರತ ಬಿಡಿ' ಚಳವಳಿ: ಆಗಸ್ಟ್ 9 ರಂದು ಉದ್ಘಾಟನೆ!
ಕೋಲ್ಕತ್ತಾ, ಜುಲೈ 21: ಬಿಜೆಪಿ ವಿರುದ್ಧ ಒಂದಿಲ್ಲೊಂದು ಹೇಳಿಕೆ ನೀಡುವುದರಲ್ಲಿ ಸದಾ ಮುಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸ ಚಳವಳಿಯೊಂದನ್ನು ಆರಂಭಿಸುತ್ತಿದ್ದಾರೆ. 'ಬಿಜೆಪಿ ಭಾರತ್ ಚೋಡೋ'(ಬಿಜೆಪಿ ಭಾರತ ಬಿಡಿ) ಎಂದು ಈ ಚಳವಳಿಯ ಹೆಸರು. ಆಗಸ್ಟ್ 9 ರಂದು ಈ ಚಳವಳಿಯನ್ನು ಉದ್ಘಾಟಿಸುವುದಾಗಿ ಮಮತಾ ಹೇಳಿದ್ದಾರೆ.
ಇಂದು (ಜುಲೈ 21) ಕೋಲ್ಕತ್ತಾದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದ ಅವರು, ಕೇಂದ್ರ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 'ನಾವು ನಿಜಕ್ಕೂ ಪ್ರಜಾಪ್ರಭುತ್ವ ಪದ್ಧತಿಯಲ್ಲಿದ್ದೀವಾ ಎಂದು ಅನುಮಾನ ಹುಟ್ಟಿಸುವಂಥ ಸಂದರ್ಭದಲ್ಲಿ ನಾವಿಂದು ಬದುಕುತ್ತಿದ್ದೇವೆ. 'ನಕಲಿ ಹಿಂದುತ್ವ' ದಿಂದಾಗಿ ಪ್ರಾಮಾಣಿಕ ಹಿಂದುಗಳು ಈ ದೇಶದಲ್ಲಿ ಬದುಕುವುದಕ್ಕೆ ಸಾಧ್ಯವಾಗುತ್ತಿಲ್ಲ. ದಲಿತರು ಮತ್ತು ಮುಸ್ಲಿಮರು ಈ ದೇಶದಲ್ಲಿ ಗೌರವದಿಂದ ಬದುಕುವುದಕ್ಕೆ ಸಾಧ್ಯವಾಗುತ್ತಿಲ್ಲ' ಎಂದು ಮಮತಾ ಕಿಡಿಕಾರಿದ್ದಾರೆ.

'ಅಪನಗದೀಕರಣದ ಸಮಯದಲ್ಲಿ ಬಿಜೆಪಿ ಸಾಕಷ್ಟು ಹಣ ದೋಚಿದೆ. ಅದಕ್ಕೆಂದೇ ಇದುವರೆಗೂ ರಿಸರ್ವ್ ಬ್ಯಾಂಕ್ ಸಹ, ಅಪನಗದೀಕರಣದಿಂದ ಒಟ್ಟು ಸಂಗ್ರಹ ಎಷ್ಟಾಗಿದೆ ಎಂಬ ಕುರಿತು ಮಾಹಿತಿ ನೀಡಿಲ್ಲ. ಈ ಅಪನಗದೀಕರಣ ಎಂಬುದೇ ಒಂದು ದೊಡ್ಡ ಹಗರಣ' ಎಂದು ಬಿಜೆಪಿ ವಿರುದ್ಧದ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ತೃಣಮೂಲ ಕಾಂಗ್ರೆಸ್ ಗೆ ಜನಪರ ಕಾಳಜಿ ಇಲ್ಲವೆಂದಾಗಿದ್ದರೆ, ಪಶ್ಚಿಮ ಬಂಗಾಳದ ಜನರು ಎಡಪಕ್ಷವನ್ನು ಮೂಲೆಗುಂಪು ಮಾಡಿ ನಮ್ಮನ್ನು ಅಧಿಕಾರಕ್ಕೇರಲು ಬಿಡುತ್ತಿರಲಿಲ್ಲ! ಬಿಜೆಪಿ ಪಶ್ಚಿಮ ಬಂಗಾಳದಿಂದ ಒಂದೇ ಒಂದು ಸೀಟು ಗೆಲ್ಲುವುದಕ್ಕೂ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.












Click it and Unblock the Notifications