ಕೋಳಿ, ಕಾಗೆ, ನವಿಲುಗಳಲ್ಲೂ ಹಕ್ಕಿಜ್ವರ; ಭಾರತದ 12 ರಾಜ್ಯಗಳಿಗೆ ಆಘಾತ!
ನವದೆಹಲಿ, ಜನವರಿ.27: ಕೊರೊನಾವೈರಸ್ ಆತಂಕ ಕೊಂಚ ತಗ್ಗಿತು ಎನ್ನುವಷ್ಟರಲ್ಲೇ ಹಕ್ಕಿಜ್ವರದ ಭೀತಿ ಎದುರಾಗಿದೆ. ಭಾರತದ 9 ರಾಜ್ಯಗಳಲ್ಲಿ ಪಕ್ಷಿಗಳಿಗೆ ಹಕ್ಕಿಜ್ವರ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಬುಧವಾರದ ಅಂಕಿ-ಅಂಶಗಳ ಪ್ರಕಾರ, ಕೇರಳ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್ ಗಢ, ಉತ್ತರಾಖಂಡ್, ಗುಜರಾತ್, ಉತ್ತರಪ್ರದೇಶ ಮತ್ತು ಪಂಜಾಬ್ ನಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಸ್ಪಷ್ಟವಾಗಿದೆ.
ದೇಶದ 12 ರಾಜ್ಯಗಳಲ್ಲಿ ಕಾಗೆಗಳು, ವಲಸೆ ಪಕ್ಷಿಗಳು ಮತ್ತು ಕಾಡು ಪಕ್ಷಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಗೊತ್ತಾಗಿದೆ. ಮಧ್ಯಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಛತ್ತೀಸ್ ಗಢ, ಹಿಮಾಚಲ ಪ್ರದೇಶ, ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ್, ದೆಹಲಿ, ರಾಜಸ್ಥಾನ್, ಜಮ್ಮು ಕಾಶ್ಮೀರ ಮತ್ತು ಪಂಜಾಬ್ ನಲ್ಲಿ ಕೋಳಿ ಹೊರತಾದ ಪಕ್ಷಿಗಳಲ್ಲಿಯೂ ಹಕ್ಕಿಜ್ವರ ತಗುಲಿರುವುದು ದೃಢಪಟ್ಟಿದೆ.

ಕೋಳಿಗಳ ವೈದ್ಯಕೀಯ ತಪಾಸಣೆಯಲ್ಲಿ ದೃಢ
ಮಹಾರಾಷ್ಟ್ರದ ನಾಂದೇಡ್, ಸೋಲ್ಲಾಪುರ್, ಪುಣೆ, ಅಹ್ಮದ್ ನಗರ, ಬುಲ್ದಾನಾ, ಅಕೋಲಾ, ನಾಸಿಕ್, ಹಿಂಗೋಲಿ ಜಿಲ್ಲೆಗಳಲ್ಲಿ ಕೋಳಿಗಳ ಮಾದರಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಹಕ್ಕಿಜ್ವರ ತಗುಲಿರುವುದು ದೃಢಪಟ್ಟಿದೆ. ಇದರ ಜೊತೆಗೆ ಗುಜರಾತಿನ ಭಾವಾನಗರ್ ಮತ್ತು ಛತ್ತೀಸ್ ಗಢದ ಧಾಮಾತರಿ ಜಿಲ್ಲೆಗಳಲ್ಲಿ ಕೋಳಿಗಳಿಗೆ ರೋಗ ತಗುಲಿರುವುದು ಖಾತ್ರಿಯಾಗಿದೆ.

ನವಿಲು ಮತ್ತು ಕಾಗೆಯಲ್ಲೂ ಹಕ್ಕಿಜ್ವರದ ಸೋಂಕು
ಕೋಳಿಗಳಿಗಷ್ಟೇ ಹಕ್ಕಿಜ್ವರ ಸೀಮಿತವಾಗಿಲ್ಲ. ಬದಲಿಗೆ ಕಾಗೆ, ನವಿಲು ಮತ್ತು ವಲಸೆ ಪಕ್ಷಿಗಳಲ್ಲೂ ಮಹಾಮಾರಿ ಅಂಟಿಕೊಂಡಿರುವುದು ಗೊತ್ತಾಗಿದೆ. ಉತ್ತರಾಖಂಡ್ ದಲ್ಲಿರುವ ರುದ್ರಪ್ರಯಾಗ್ ಅರಣ್ಯ ವಿಭಾಗದಲ್ಲಿರುವ ಕಾಗೆಗಳ ಮಾದರಿಯನ್ನು ಪರೀಕ್ಷಿಸಿದ ವೇಳೆ ಹಕ್ಕಿಜ್ವರ ತಗುಲಿರುವುದು ದೃಢಪಟ್ಟಿದೆ. ಮಹಾರಾಷ್ಟ್ರದ ಬೀಡ್ ಪ್ರದೇಶದಲ್ಲಿ ನವಿಲುಗಳಲ್ಲಿ ಸೋಂಕು ತಗುಲಿರುವುದು ಗೊತ್ತಾಗಿದೆ.

ಹಕ್ಕಿಜ್ವರ ನಿಯಂತ್ರಿಸುವ ಕಾರ್ಯಾಚರಣೆ ಶುರು
ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ ಗಢ, ಪಂಜಾಬ್, ಉತ್ತರ ಪ್ರದೇಶ ಮತ್ತು ಗುಜರಾತ್ನ ಹಕ್ಕಿಜ್ವರ ಪೀಡಿತ ಕೇಂದ್ರಗಳಲ್ಲಿ ಸೋಂಕು ನಿಯಂತ್ರಣ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಇದರ ಜೊತೆಗೆ ಬೇರೆ ಜಾತಿಯ ಪಕ್ಷಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ಸ್ಥಳಗಳಲ್ಲೂ ಕಣ್ಗಾವಲು ಇರಿಸಲಾಗಿದೆ. ಸೋಂಕಿನ ಪ್ರಮಾಣ ಹೆಚ್ಚದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪರಿಹಾರ ಕಾರ್ಯ
ಹಕ್ಕಿಜ್ವರ ಕಾಣಿಸಿಕೊಂಡಿರುವ ಕೋಳಿ ಮತ್ತು ಪಕ್ಷಿಗಳು ಮತ್ತು ಮೊಟ್ಟೆಗಳ ವಿಲೇವಾರಿ ಕಾರ್ಯವನ್ನು ಚುರುಕುಗೊಳಿಸಲಾಗುತ್ತಿದೆ. ಪಶುಸಂಗೋಪನೆ ಮತ್ತು ಹೈನಾಗಾರಿಕೆ ಇಲಾಖೆ, ಕೇಂದ್ರ ಸರ್ಕಾರವು 50;50 ಅನುಪಾತದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರವನ್ನು ನೀಡಲಾಗುತ್ತದೆ ಎಂದು ಘೋಷಿಸಿದೆ.
ಮಹಾರಾಷ್ಟ್ರ ಸರ್ಕಾರವು ಹಕ್ಕಿಜ್ವರ ರೋಗ ನಿಯಂತ್ರಣ ಕಾರ್ಯಕ್ರಮದಡಿ, ಸೋಂಕಿತ ಪ್ರದೇಶದ 1 ಕಿ.ಮೀ ವ್ಯಾಪ್ತಿಯಲ್ಲಿ ಕೋಳಿ ಮತ್ತು ಇತರ ಪಕ್ಷಿಗಳು, ಮೊಟ್ಟೆ ಮತ್ತು ಕೋಳಿ ಆಹಾರ ಮತ್ತು ರೋಗ ನಿಯಂತ್ರಿಸುವ ಹಿನ್ನೆಲೆ ವಿಲೇವಾರಿ ಕಾರ್ಯಾಚರಣೆಗೆ 130 ಲಕ್ಷ ರೂಪಾಯಿ ಪರಿಹಾರ ಪ್ಯಾಕೇಜ್ ನೀಡಿದೆ.












Click it and Unblock the Notifications