ಐಶ್ವರ್ಯ ರೈಗೆ ವಿವಾಹ ವಿಚ್ಛೇದನದ ನೋಟಿಸ್ ಕಳಿಸಿದ ತೇಜ್
ಪಾಟ್ನ, ನವೆಂಬರ್ 02: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಸೊಸೆ ಐಶ್ವರ್ಯಾ ರೈಗೆ ಆಘಾತವಾಗಿದೆ. ಐಶ್ವರ್ಯಾ ಅವರಿಗೆ ವಿವಾಹ ವಿಚ್ಛೇದನ ನೀಡಲು ಲಾಲೂ ಪುತ್ರ ತೇಜ್ ಪ್ರತಾಪ್ ಯಾದವ್ ಮುಂದಾಗಿದ್ದಾರೆ.
ಬಿಹಾರದ ಮಾಜಿ ಸಚಿವ, ಆರ್ ಜೆಡಿ ಪಕ್ಷದ ಮುಖಂಡ ತೇಜ್ ಪ್ರತಾಪ್ ಅವರಿಗೆ ಮದುವೆಯಾಗಿ 6 ತಿಂಗಳೊಳಗೆ ಪತ್ನಿ ಐಶ್ವರ್ಯಾ ಜತೆ ಸಂಸಾರ ನಿಭಾಯಿಸುವುದು ಕಷ್ಟವಾಗುತ್ತಿದೆಯಂತೆ. ಹೀಗಾಗಿ, ಅಧಿಕೃತವಾಗಿ ಡಿವೋರ್ಸ್ ಪತ್ರ ಸಿದ್ಧಪಡಿಸಿ, ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದಾರೆ. ಈ ಕುರಿತಂತೆ ಐಶ್ವರ್ಯಾ ಅವರಿಗೆ ನೋಟಿಸ್ ತಲುಪಿದೆ.

ತೇಜ್ ಪ್ರತಾಪ್ ಹಾಗೂ ಐಶ್ವರ್ಯಾ ಅವರು ಮೇ 2018ರಲ್ಲಿ ಮದುವೆಯಾಗಿದ್ದರು. ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಅರ್ಜಿ ಹಾಕಲಾಗಿದೆ. ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ.
ತೇಜ್ ಪ್ರತಾಪ್ ಯಾದವ್ ಅವರ ಪರವಾಗಿ ನಾನು ಅರ್ಜಿ ಹಾಕಿದ್ದೇನೆ. ಈ ಸಮಯಕ್ಕೆ ಬೇರೆ ಏನು ಹೇಳಲು ಸಾಧ್ಯವಿಲ್ಲ ಎಂದು ತೇಜ್ ಪ್ರತಾಪ್ ಅವರ ವಕೀಲ ಯಶವಂತ್ ಕುಮಾರ್ ಶರ್ಮ ಹೇಳಿದ್ದಾರೆ.
ಐಶ್ವರ್ಯಾ ರೈ ಅವರು ಕೂಡಾ ರಾಜಕೀಯ ಕುಟುಂಬದ ಹಿನ್ನಲೆಯುಳ್ಳವರಾಗಿದ್ದಾರೆ. ಅವರ ಅಜ್ಜ ದುರ್ಗಾ ಪ್ರಸಾದ್ ರೈ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಐಶ್ವರ್ಯಾ ಅವರ ತಂದೆ ಚಂದ್ರಿಕಾ ರೈ ಅವರು ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ನಾಯಕ, ಸಚಿವರಾಗಿದ್ದರು.
ಐಶ್ವರ್ಯಾ ಹಾಗೂ ತೇಜ್ ಪ್ರತಾಪ್ ಅವರ ಮದುವೆ ವಿಜೃಂಭಣೆಯಿಂದ ನಡೆದಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಜ್ಯಪಾಲ ಸತ್ಯಪಾಲ್ ಮಲಿಕ್, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.
ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಜೈಲುವಾಸಿಯಾಗಿರುವ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರು ಪೆರೋಲ್ ಪಡೆದುಕೊಂಡು, ಮಗನ ಮದುವೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications