ಈ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ : ನಿತೀಶ್ ಕುಮಾರ್
ಪಾಟ್ನಾ, ಜುಲೈ 26: "ಈ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ನಾನು ಸಾಕಷ್ಟು ಪ್ರಯತ್ನಪಟ್ಟೆ. ಪರಿಹಾರ ಕಂಡು ಹುಡುಕಲು ಯತ್ನಿಸಿದೆ. ಆದರೆ ಯಶಸ್ವಿಯಾಗಲಿಲ್ಲ," ಎಂದು ಜೆಡಿಯು ನಾಯಕ, ಬಿಹಾರದ ನಿರ್ಗಮಿತ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
BIG NEWS: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
ರಾಜಭವನದಲ್ಲಿ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿಯವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು ಈ ಮಾತುಗಳನ್ನು ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಆರ್.ಜೆ.ಡಿಯ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ರಾಜೀನಾಮೆ ನೀಡಲು ನಿರಾಕರಿಸಿದ್ದರಿಂದ ಕೊನೆಗೆ ಸ್ವತಃ ನಿತೀಶ್ ಕುಮಾರ್ ಮುಖ್ಯಮಂತ್ರಿ ಹುದ್ದೆ ತೊರೆದಿದ್ದಾರೆ.
ಭಿನ್ನಾಭಿಪ್ರಾಯ ಮರೆತು ಕೈಜೋಡಿಸೋಣ, ನಿತೀಶ್ ಗೆ ಮೋದಿ ಕರೆ
ಅಪನಗದೀಕರಣ ಬೆಂಬಲಿಸಿದ್ದಕ್ಕೂ ಆರೋಪ
"ನಾನು ಅಪನಗದೀಕರಣವನ್ನು ಬೆಂಬಲಿಸಿದೆ. ಈ ಸಂದರ್ಭದಲ್ಲೂ ನನ್ನ ಮೇಲೆ ಹಲವಾರು ಜನರು ಆರೋಪಗಳನ್ನು ಮಾಡಿದರು. ಆದರೆ ನಾನು ಈಗ ಯಾರನ್ನೂ ದೂರಲು ಇಚ್ಛಿಸುವುದಿಲ್ಲ. ನನ್ನನ್ನು ಯಾರದರೂ ದೂರುವುದಿದ್ದರೆ, ದೂರಬಹುದು; ನನ್ನದೇನೂ ಅಭ್ಯಂತರವಿಲ್ಲ," ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಲಾಲೂ, ಕಾಂಗ್ರೆಸ್ ಗೆ ಮಾಹಿತಿ
"ನಾನು ರಾಜೀನಾಮೆ ನೀಡುವ ಮೊದಲು ಲಾಲೂ ಪ್ರಸಾದ್ ಯಾದವ್ ಮತ್ತು ಬಿಹಾರದ ಕಾಂಗ್ರೆಸ್ ಉಸ್ತುವಾರಿ ಸಿಪಿ ಜೋಶಿಯವರಿಗೆ ಮಾಹಿತಿ ನೀಡಿದ್ದೆ," ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
|
ದುರಾಸೆ ಪೂರೈಸಲು ಸಾಧ್ಯವಿಲ್ಲ
"ಭೂಮಿಯ ಮೇಲೆ ಅಗತ್ಯಗಳನ್ನು ಪೂರೈಸಬಹುದು. ಆದರೆ ದುರಾಸೆಗಳನ್ನು ಪೂರೈಸಲಾಗದು," ಎಂದು ಗಾಂಧೀಜಿ ಯಾವತ್ತೂ ಹೇಳುತ್ತಿದ್ದರು ಎಂಬುದಾಗಿ ನಿತೀಶ್ ಕುಮಾರ್ ಹೇಳಿದ್ದು ಪರೋಕ್ಷವಾಗಿ ಲಾಲು ಪ್ರಸಾದ್ ಯಾದವ್ ಗೆ ಟಾಂಗ್ ನೀಡಿದ್ದಾರೆ.
ರಾಜೀನಾಮೆ ಅಂಗೀಕಾರ
"ನನ್ನ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಮತ್ತು ಮುಂದಿನ ಬೆಳವಣಿಗೆಗಳವರೆಗೆ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚಿಸಿದ್ದಾರೆ ," ಎಂದು ನಿತೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಬಿಜೆಪಿ-ಜೆಡಿಯು ಸರಕಾರ?
ಬಿಹಾರದ ವಿಧಾನಸಭೆಯ ಬಲಾಬಲಗಳನ್ನು ನೋಡಿದರೆ ಜೆಡಿಯು ಮತ್ತು ಬಿಜೆಪಿ ಸರಳ ಬಹುಮತದಿಂದ ಅಧಿಕಾರ ನಡೆಸಬಹುದಾಗಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ. ಅತೀ ದೊಡ್ಡ ಪಕ್ಷ ಆರ್.ಜೆ.ಡಿ 80, ಜೆಡಿಯು 71, ಬಿಜೆಪಿ 53, ಕಾಂಗ್ರೆಸ್ 27, ಮತ್ತು ಇತರ ಪಕ್ಷಗಳು 8 ಸ್ಥಾನಗಳನ್ನು ಹೊಂದಿವೆ.
ಬಿಜೆಪಿ + ಜೆಡಿಯು+ಎಲ್ಜೆಪಿ (ಬಿಜೆಪಿ ಮಿತ್ರ ಪಕ್ಷ) = 53+71+2 = 128 ಸ್ಥಾನಗಳಾಗುವುದರಿಂದ ಬಿಜೆಪಿ ಬೆಂಬಲದೊಂದಿಗೆ ಆಡಳಿತ ನಡೆಸುವುದು ಜೆಡಿಯುಗೆ ಕಷ್ಟವಾಗಲಾರದು.
ಆದರೆ, ಆರ್.ಜೆ.ಡಿಗೆ ಈ ಅವಕಾಶವಿಲ್ಲ. ಕಾಂಗ್ರೆಸ್ ಜತೆಗೆ ನಿಂತಿದ್ದರೂ ಇಬ್ಬರ ಒಟ್ಟು ಸ್ಥಾನಗಳು 98 ಆಗಲಿದ್ದು ಬಹುಮತಕ್ಕೆ 26 ಸ್ಥಾನಗಳ ಕೊರತೆಯಾಗಲಿದೆ.