ಗುಲಾಂ ನಬಿ ಆಜಾದ್ ಭೇಟಿ ಮಾಡಲು ಕಾರಣ ತಿಳಿಸಿದ ಭೂಪಿಂದರ್ ಹೂಡಾ
ನವದೆಹಲಿ ಸೆಪ್ಟೆಂಬರ್ 01: ಕಾಂಗ್ರೆಸ್ ತೊರೆದಿರುವ ಗುಲಾಂ ನಬಿ ಆಜಾದ್ ಅವರನ್ನು ಭೇಟಿ ಮಾಡಿದ ನಂತರ ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಹೂಡಾ ವಿರುದ್ಧ ಪಕ್ಷದಲ್ಲಿ ಧ್ವನಿ ಏಳಲಾರಂಭಿಸಿದೆ. ಹೂಡಾ ಅವರ ನಡೆಯ ವಿರುದ್ಧ ಹರಿಯಾಣ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೆಲ್ಜಾ ಕುಮಾರ್ ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ಬಿ.ಎಸ್.ಹೂಡಾ ಅವರು ನಬಿ ಅವರನ್ನು ಭೇಟಿ ಮಾಡಿರುವ ಕಾರಣವನ್ನು ನೀಡಿದ್ದಾರೆ. ಗುಲಾಂ ನಬಿ ಆಜಾದ್ ಅವರನ್ನು ಪಕ್ಷ ಬಿಡಲು ಕಾರಣ ಕೇಳಿದ್ದೆವು. ಅವರಿಗೆ ಯಾರ ಮೇಲೂ ಕಹಿ ಇಲ್ಲ ಎಂದು ಹೂಡಾ ಹೇಳಿದ್ದಾರೆ.
ಗುಲಾಂ ನಬಿ ಆಜಾದ್ ಅವರನ್ನು ಭೇಟಿ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ನಾಯಕರು ಭೂಪಿಂದರ್ ಹೂಡಾ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಈ ಕುರಿತು ಇಂದು ಹೂಡಾ ಅವರು, ಆಜಾದ್ ಸಾಹೇಬರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ. ನಾವು ವರ್ಷಗಟ್ಟಲೆ ಒಂದೇ ಪಕ್ಷದಲ್ಲಿದ್ದೇವೆ ಮತ್ತು ನಾವು ಕೆಲವು ಬೇಡಿಕೆಗಳನ್ನು ಸಲ್ಲಿಸಿದ್ದೇವೆ. ಆ ಬೇಡಿಕೆಗಳನ್ನು ಅಂಗೀಕರಿಸಲಾಗಿದ್ದು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಆದಾಗ್ಯೂ, ಅವರು ಪಕ್ಷ ಬಿಡಲು ನಿರ್ಧರಿಸಿದರು. ಅದಕ್ಕೆ ಕಾರಣ ಕೇಳಿದೆವು. ಆದರೆ ಅವರಿಗೆ (ನಬಿ) ಪಕ್ಷದ ಬಗ್ಗೆ ಕಹಿ ಇರಲಿಲ್ಲ ಎಂದು ವಿವರಣೆ ನೀಡಿದ್ದಾರೆ.
ಹೂಡಾ ವಿರುದ್ಧ ಹರಿಹಾಯ್ದ ಕಾಂಗ್ರೆಸ್ನ ಮಾಜಿ ರಾಜ್ಯಾಧ್ಯಕ್ಷೆ ಕುಮಾರಿ ಸೆಲ್ಜಾ ಅವರು ಪಕ್ಷದ ಹರಿಯಾಣ ವ್ಯವಹಾರಗಳ ಉಸ್ತುವಾರಿ ವಿವೇಕ್ ಬನ್ಸಾಲ್ ಅವರಿಗೆ ಪತ್ರ ಬರೆದಿದ್ದಾರೆ. ವಿವೇಕ್ ಬನ್ಸಾಲ್ ಅವರಿಗೆ ಪತ್ರ ಬರೆದಿರುವ ಸೆಲ್ಜಾ, ಗುಲಾಂ ನಬಿ ಆಜಾದ್ ಅವರು ನಿರಂತರವಾಗಿ ಕಾಂಗ್ರೆಸ್ನ ಉನ್ನತ ನಾಯಕತ್ವವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಪ್ರಶ್ನೆಗಳು ಪ್ರತಿದಿನವೂ ಮೂಡುತ್ತಿವೆ. ಭೂಪಿಂದರ್ ಸಿಂಗ್ ಹೂಡಾ ಅಂತಹ (ನಬಿ) ವ್ಯಕ್ತಿಯನ್ನು ಏಕೆ ಭೇಟಿಯಾದರು? ಇದಕ್ಕಾಗಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಬೇಕು ಎಂದಿದ್ದಾರೆ.
ನಾಯಕತ್ವವನ್ನು ದೂಷಿಸಿ ಪಕ್ಷ ತೊರೆದಿರುವ ನಬಿ ಅವರನ್ನು ಹೂಡಾ ಭೇಟಿಯಾಗುತ್ತಿದ್ದಾರೆ. ನಬಿ ನಮ್ಮ ನಾಯಕರ ಮೇಲೆ ವೈಯಕ್ತಿಕ ಟೀಕೆಗಳನ್ನು ಮಾಡಿರುವುದು ಪಕ್ಷದ ಮೇಲೆ ಪರಿಣಾಮ ಬೀರಿದೆ ಎಂದು ಸೆಲ್ಜಾ ಹೇಳಿದರು.ಕಾರ್ಯಕರ್ತರು ನಿರಾಶೆಗೊಂಡಿದ್ದಾರೆ. ನಬಿ ಅವರ ಬೇಟಿ ಕಾರ್ಯಕರ್ತರನ್ನು ಗೊಂದಲಗೊಳಿಸುತ್ತದೆ. ಅವರು (ಆಜಾದ್) ಒಂದು ಮಾರ್ಗವನ್ನು ಆರಿಸಿಕೊಂಡರು ಮತ್ತು ಪಕ್ಷವನ್ನು ತೊರೆದರು. ಆ ವ್ಯಕ್ತಿ ಪಕ್ಷವನ್ನು ತೊರೆದು ತಮ್ಮದೇ ಆದ ಪಕ್ಷವನ್ನು ರಚಿಸುವುದಾಗಿ ಘೋಷಿಸಿದಾಗ, ಇವರು (ಹೂಡಾ) ಆಜಾದ್ ಅವರ ಮನೆಗೆ ಹೋಗುವುದರಲ್ಲಿ ಏನು ಅರ್ಥವಿದೆ? ಎಂದು ಕೇಳಿದ್ದಾರೆ.
ತಾವು ಹೂಡಾ ಅವರ ಕಟ್ಟಾ ವಿರೋಧಿ ಎಂದು ಪರಿಗಣಿಸಲ್ಪಟ್ಟಿರುವ ಸೆಲ್ಜಾ, ಹರಿಯಾಣದ ಮಾಜಿ ಮುಖ್ಯಮಂತ್ರಿಗೆ ರಾಜ್ಯದ ವ್ಯವಹಾರಗಳ ನಿರ್ವಹಣೆಯಲ್ಲಿ ಮುಕ್ತ ಹಸ್ತ ನೀಡಿದ್ದರೂ ಸಹ ಇಂತಹ ಚಟುವಟಿಕೆಯನ್ನು ಸಹಿಸುವುದಿಲ್ಲ ಎಂದು ಪಕ್ಷದ ಹೈಕಮಾಂಡ್ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಎರಡು ದಿನಗಳ ಹಿಂದೆ ಭೂಪಿಂದರ್ ಸಿಂಗ್ ಹೂಡಾ, ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚವಾಣ್ ಗುಲಾಂ ನಬಿ ಆಜಾದ್ ಅವರನ್ನು ದೆಹಲಿಯಲ್ಲಿ ಭೇಟಿಯಾದರು. ಈ ಮೂವರು ನಾಯಕರು ಕಾಂಗ್ರೆಸ್ ನಾಯಕತ್ವದ ವಿರುದ್ಧ ಧ್ವನಿ ಎತ್ತಿರುವ ಪಕ್ಷದ ಜಿ-23 ಗುಂಪಿನೊಂದಿಗೆ ಸಂಬಂಧ ಹೊಂದಿದ್ದಾರೆ.