ಜನವರಿ 27ರವರೆಗೆ ಭಾರತ್ ಜೋಡೋ ಯಾತ್ರೆ ಸ್ಥಗಿತ
ನವದೆಹಲಿ, ಜನವರಿ 25: ಸತತ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ರಾಂಬನ್ ಬಳಿ ಬುಧವಾರ ಸ್ಥಗಿತಗೊಳಿಸಲಾಗಿದೆ.
ಈ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಭೂಕುಸಿತದಿಂದಾಗಿ ರಾಂಬನ್ ಮತ್ತು ಬನಿಹಾಲ್ನಲ್ಲಿನ ನಡೆಯಲಿದ್ದ ಭಾರತ್ ಜೋಡೋ ಯಾತ್ರೆಯ ಮಧ್ಯಾಹ್ನದ ಹಂತವನ್ನು ರದ್ದುಗೊಳಿಸಲಾಗಿದೆ. ನಾಳೆ ವಿಶ್ರಾಂತಿ ದಿನವಾಗಿದ್ದು, ಜನವರಿ 27 ರಂದು ಬೆಳಿಗ್ಗೆ 8 ಗಂಟೆಗೆ ಯಾತ್ರೆ ಪುನರಾರಂಭವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಭಾರೀ ಭದ್ರತೆಯಡಿಯಲ್ಲಿ ರಾಂಬನ್ನಿಂದ ಕಾಲ್ನಡಿಗೆಯಲ್ಲಿ ಬನಿಹಾಲ್ ಕಡೆಗೆ ರಾಹುಲ್ ಯಾತ್ರೆ ಆರಂಭವಾಗುತ್ತಿದ್ದಂತೆ ಮಳೆಯ ನಡುವೆ ಜಾಕೆಟ್ ಧರಿಸಿ ಕಾಣಿಸಿಕೊಂಡಿದ್ದರು. ಯಾತ್ರೆಯು ಇಂದು ಸಂಜೆ ಹೆದ್ದಾರಿ ಪಟ್ಟಣವಾದ ಬನಿಹಾಲ್ಗೆ ತಲುಪಲು ನಿರ್ಧರಿಸಲಾಗಿತ್ತು. ಅಲ್ಲದೆ ಜನವರಿ 30ರಂದು ಶ್ರೀನಗರದ ಶೇರ್-ಎ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ತ್ರಿವರ್ಣವನ್ನು ಹಾರಿಸುವುದರೊಂದಿಗೆ ಮುಕ್ತಾಯಗೊಳ್ಳಲಿತ್ತು.

ಶ್ರೀನಗರದಲ್ಲಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು 22 ವಿರೋಧ ಪಕ್ಷಗಳ ನಾಯಕರಿಗೆ ಕಾಂಗ್ರೆಸ್ ಈಗಾಗಲೇ ಆಹ್ವಾನ ನೀಡಿದೆ. ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮತ್ತು ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಲಖನ್ಪುರದಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡರೆ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಅವರ ಮಗಳು ಸಹ ಕಾಶ್ಮೀರವನ್ನು ಪ್ರವೇಶಿಸಿದಾಗ ಯಾತ್ರೆಗೆ ಸೇರಲು ನಿರ್ಧರಿಸಲಾಗಿದೆ.

ಬುಧವಾರ ಬೆಳಿಗ್ಗೆ ಭಾರೀ ಮಳೆಯಿಂದಾಗಿ ರಾಂಬನ್ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ದಪ್ಪನಾದ ಕಲ್ಲುಗಳು ಉರುಳಿಬಿದ್ದ ನಂತರ ಟ್ರಕ್ ಚಾಲಕ ಸಾವನ್ನಪ್ಪಿದರು. ಅಲ್ಲದೆ ಇಬ್ಬರು ಗಾಯಗೊಂಡ ನಂತರ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಚ್ಚಲಾಯಿತು. ಯಾತ್ರೆಯ ಅಂತಿಮ ಸ್ಥಳ ಎಸ್ಕೆ ಕ್ರಿಕೆಟ್ ಸ್ಟೇಡಿಯಂ. ಈ ಹಿಂದೆ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಮತ್ತು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಗಳನ್ನು ಆಯೋಜಿಸಿದೆ.












Click it and Unblock the Notifications