ಭಾರತ್ ಜೋಡೋ ಯಾತ್ರೆ: 100ನೇ ದಿನಕ್ಕೆ ಜೈಪುರದಲ್ಲಿ ಸಂಗೀತ ಸಂಭ್ರಮ
ಜೈಪುರ, ಡಿ. 13: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಇನ್ನೇನು 100 ದಿನಗಳಾಗಲಿವೆ. ಈ ಬೆನ್ನಲ್ಲೆ 100 ದಿನಗಳ ಯಶಸ್ವಿ ಪಾದಯಾತ್ರೆಯನ್ನು ಸಂಭ್ರಮಿಸಲು ಕಾಂಗ್ರೆಸ್ ಶುಕ್ರವಾರ ಜೈಪುರದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಿದೆ.
ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಸುನಿಧಿ ಚೌಹಾಣ್ ಅವರ ನೇರ ಪ್ರದರ್ಶನ ಇರಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಂಗಳವಾರ ತಿಳಿಸಿದ್ದಾರೆ.
ರಾಜಸ್ಥಾನ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ಪ್ರಿಯಾಂಕಾ ಗಾಂಧಿ ಭಾಗಿ
ಸೆಪ್ಟಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಂಚರಿಸಿದೆ. ಯಾತ್ರೆಯು ಫೆಬ್ರವರಿ 2023 ರ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.
'ಭಾರತ್ ಜೋಡೋ ಕನ್ಸರ್ಟ್' ನಲ್ಲಿ ರಾಹುಲ್ ಗಾಂಧಿ
100 ದಿನಗಳ ಯಾತ್ರೆಗೆ ಕಾರಣವಾಗಿರುವ ರಾಹುಲ್ ಗಾಂಧಿ 'ಭಾರತ್ ಜೋಡೋ ಕನ್ಸರ್ಟ್' ನಲ್ಲಿ ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿಗೆ ಅನೇಕ ಕಾಂಗ್ರೆಸ್ ನಾಯಕರು ಸಾಥ್ ನೀಡಲಿದ್ದಾರೆ.
ರಾಹುಲ್ ಗಾಂಧಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ದೌಸಾದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಡಿಸೆಂಬರ್ 16ಕ್ಕೆ ಭಾರತ್ ಜೋಡೋ ಯಾತ್ರೆ 100 ದಿನಗಳನ್ನು ಪೂರೈಸಲಿದ್ದು, ಇದೊಂದು ಮೈಲಿಗಲ್ಲು ಆಗಲಿದೆ ಎಂದು ಜೈರಾಮ್ ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿ.19ರಂದು ಅಲ್ವಾರ್ನಲ್ಲಿ ಬೃಹತ್ ಸಾರ್ವಜನಿಕ ಸಭೆ
ಇನ್ನು, ಡಿಸೆಂಬರ್ 19ರಂದು ಅಲ್ವಾರ್ನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಇದೇ ವೇಳೆ ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿನಲ್ಲಿ ಘರ್ಷಣೆಯ ಕುರಿತು ಹೇಳಿಕೆ ನೀಡಲಿದ್ದಾರೆ. ನಾನು ಈ ಬಗ್ಗೆ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದಿದ್ದಾರೆ.
ರಾಹುಲ್ ಭೇಟಿ ಮಾಡಿದ 30 ದಲಿತ ನಾಯಕರು
ವಿವಿಧ ಸಂಘಟನೆಗಳಿಗೆ ಸಂಬಂಧಿಸಿದ ಸುಮಾರು 30 ದಲಿತ ಹೋರಾಟಗಾರರು ಮಂಗಳವಾರ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಸೋಮವಾರ ಅವರು ವಿವಿಧ ಸಂಘಟನೆಗಳ ಮಹಿಳಾ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ ಎಂದು ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳುಗಳನ್ನು ಬಯಲು ಮಾಡಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ನಮೋ ನಾರಾಯಣ್ ಮೀನಾ ಹೇಳಿದ್ದಾರೆ.
ಜೊತೆಗೆ ಯಾತ್ರೆಯ ವೇಳೆ ಬಂದ ಪ್ರತಿಕ್ರಿಯೆಯನ್ನು ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಕಾಂಗ್ರೆಸ್ನ ರಾಜಸ್ಥಾನ ಘಟಕದ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ ಹೇಳಿದ್ದಾರೆ.
ಪೇರಲ ಕೃಷಿಯಲ್ಲಿ ಮುಂಚೂಣಿಯಲ್ಲಿ ಸವಾಯಿ ಮಾಧೋಪುರದಲ್ಲಿ
ಜೈರಾಮ್ ರಮೇಶ್ ಅವರು ಸವಾಯಿ ಮಾಧೋಪುರದಲ್ಲಿ ಬೆಳೆಯುವ ಪೇರಲದ ರುಚಿಯನ್ನು ಶ್ಲಾಘಿಸಿದ್ದಾರೆ. ಜೊತೆಗೆ ಜಿಲ್ಲೆ ಪೇರಲ ಕೃಷಿಯಲ್ಲಿ ಮುಂಚೂಣಿಯಲ್ಲಿದೆ ಎಂಬುದು ತಿಳಿದು ಆಶ್ಚರ್ಯವಾಯಿತು. ಈ ಪ್ರದೇಶದಲ್ಲಿ ಪೇರಲ ಸಂಸ್ಕರಣಾ ಘಟಕಗಳನ್ನು ಉತ್ತೇಜಿಸಬೇಕು ಎಂದು ಹೇಳಿದ್ದಾರೆ.
ಮಂಗಳವಾರದ ಯಾತ್ರೆಯು ಜೀನಾಪುರದಿಂದ ತನ್ನ ಪ್ರಯಾಣವನ್ನು ಪುನರಾರಂಭಿಸಿದೆ. ಭಾರತ್ ಜೋಡೋ ಯಾತ್ರೆಯು ಪ್ರವೇಶಿಸಿದ ಏಕೈಕ ಕಾಂಗ್ರೆಸ್ ಆಡಳಿತದ ರಾಜ್ಯ ರಾಜಸ್ಥಾನ. ಸೋಮವಾರ ಕಾಂಗ್ರೆಸ್ ಸಮಿತಿಯ ನಾಯಕಿ ಪ್ರಿಯಾಂಕಾ ಗಾಂಧಿ, ಅವರ ಪುತ್ರಿ ಮಿರಾಯಾ ವಾದ್ರಾ, ಪತಿ ರಾಬರ್ಟ್ ವಾದ್ರಾ ಮೊದಲ ಬಾರಿಗೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದರು.
ಭಾರತ್ ಜೋಡೋ ಯಾತ್ರೆ ಡಿಸೆಂಬರ್ 21 ರಂದು ಹರಿಯಾಣವನ್ನು ಪ್ರವೇಶಿಸಲಿದೆ.