ದಲಿತರ ಪ್ರತಿಭಟನೆಯಿಂದ ಬಿಜೆಪಿಯಲ್ಲಿ ನಡುಕ: ಮಾಯಾವತಿ
ಲಖನೌ (ಉತ್ತರ ಪ್ರದೇಶ), ಏಪ್ರಿಲ್ 08: ಇತ್ತೀಚೆಗೆ ನಡೆದ ಭಾರತ್ ಬಂದ್ ಪ್ರತಿಭಟನೆ, ಆಡಳಿತಾರೂಢ ಬಿಜೆಪಿಯಲ್ಲಿ ಭೀತಿ ಮೂಡಿಸಿದೆ ಎಂದು ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಭಾನುವಾರ ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಸದಸ್ಯರು ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದರು.
'ಭಾರತ್ ಬಂದ್ ವ್ಯಾಪಕವಾಗಿ ಯಶಸ್ವಿಯಾಗಿದೆ. ಇದು ಬಿಜೆಪಿಯಲ್ಲಿ ಮತ್ತು ದಲಿತರ ಮೇಲೆ ದೌರ್ಜನ್ಯ ಆರಂಭಿಸಿದ್ದ ಬಿಜೆಪಿ ಆಡಳಿತದ ರಾಜ್ಯಗಳ ಪಕ್ಷದ ಮುಖಂಡರಲ್ಲಿ ನಡುಕ ಮೂಡಿಸಿದೆ. ಅನೇಕ ದಲಿತರು ಮತ್ತು ಅವರ ಕುಟುಂಬದ ಸದಸ್ಯರನ್ನು ಬಂಧಿಸಲಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.

ಆತ್ಮಗೌರವವುಳ್ಳ ಯಾವುದೇ ದಲಿತರು ಸಂಸತ್ತಿನಲ್ಲಿರುವ ಸ್ವಾರ್ಥಿಗಳಾದ ಬಿಜೆಪಿ ದಲಿತ ಸದಸ್ಯರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.
ಆದರೆ, ಪ್ರತಿಭಟನೆ ವೇಳೆ ನಡೆದ ಹಿಂಸಾಚಾರವನ್ನು ಅವರು ಇದೇ ಸಂದರ್ಭದಲ್ಲಿ ಖಂಡಿಸಿದ್ದಾರೆ. ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಕೆಲವು ಬದಲಾವಣೆ ತರಬೇಕು ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್, ಈ ಕಾಯ್ದೆಯಡಿ ದೂರು ದಾಖಲಿಸಿದ ತಕ್ಷಣ ಆರೋಪಿಯನ್ನು ಬಂಧಿಸುವಂತಿಲ್ಲ ಎಂದು ಕಳೆದ ಮಾರ್ಚ್ನಲ್ಲಿ ಆದೇಶ ನೀಡಿತ್ತು.












Click it and Unblock the Notifications