2ನೇ ದಿನಕ್ಕೆ ಕಾಲಿಟ್ಟ ಭಾರತ್ ಬಂದ್: ಬ್ಯಾಂಕಿಂಗ್ ಸೇವೆ ಅಲಭ್ಯ
ಹೊಸದಿಲ್ಲಿ ಮಾರ್ಚ್ 29: ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರ (ಭಾರತ್ ಬಂದ್) ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸಾರಿಗೆ, ವಿದ್ಯುತ್ ಸೇವೆಗಳು ಮತ್ತು ಬ್ಯಾಂಕಿಂಗ್ ವಲಯ ಸೇರಿದಂತೆ ಹಲವು ಸೇವೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಕರೆ ನೀಡಲಾಗುತ್ತಿರುವ ಮೊದಲ ಪ್ರಮುಖ ಮುಷ್ಕರ ಇದಾಗಿದೆ. ಮುಷ್ಕರದ ಮೊದಲ ದಿನ ಕೇರಳದಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು ಮುಚ್ಚಿದ್ದವು. ಕೆಲವೆಡೆ ಖಾಸಗಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಕೇರಳ ಮತ್ತು ಪಶ್ಚಿಮ ಬಂಗಾಳ ಜನರ ಓಡಾಟವಿಲ್ಲದೆ ಖಾಲಿ ಬೀದಿಗಳು ಕಂಡುಬಂದವು. ಜೊತೆಗೆ ಬಂಗಾಳದಲ್ಲಿ ಕೆಲ ಬೀದಿಗಳಲ್ಲಿ ಪ್ರದರ್ಶನಗಳನ್ನ ಮಾಡಲಾಯಿತು. ಮಾತ್ರವಲ್ಲದೆ ಸೋಮವಾರ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಂಡಿದ್ದವು. ಜಾದವ್ಪುರದಲ್ಲಿ ಪ್ರತಿಭಟನಾಕಾರರು ರೈಲುಗಳನ್ನು ತಡೆದು ಕೇಂದ್ರದ ಕಾರ್ಮಿಕ ನೀತಿಗಳನ್ನು ವಿರೋಧಿಸಿದರು.
ಸರ್ಕಾರದ ನೀತಿಗಳನ್ನು ವಿರೋಧಿಸಿ (ಮಾರ್ಚ್ 28 ಮತ್ತು 29) ನಡೆಯುವ ಮುಷ್ಕರದಲ್ಲಿ ದೇಶಾದ್ಯಂತ 20 ಕೋಟಿಗೂ ಹೆಚ್ಚು ಕಾರ್ಮಿಕರು ಔಪಚಾರಿಕ ಮತ್ತು ಅನೌಪಚಾರಿಕವಾಗಿ ಭಾಗವಹಿಸಿದ್ದಾರೆ ಎಂದು ಆಲ್ ಇಂಡಿಯನ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರ್ಜೀತ್ ಕೌರ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಪ್ರಾದೇಶಿಕ ಮತ್ತು ರಾಜ್ಯ ಪೊಲೀಸರಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದೇ ಇರಲು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.

ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ವಿದ್ಯುತ್ ಸಚಿವಾಲಯದಿಂದ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ವಿದ್ಯುತ್ ಅಧಿಕಾರಿಗಳಿಗೆ ಸಲಹೆಯನ್ನು ನೀಡಲಾಗಿದೆ. ಸಂಬಂಧಪಟ್ಟ ಎಲ್ಲರಿಗೂ ತಮ್ಮ ಪ್ರಾದೇಶಿಕ ನೆಟ್ವರ್ಕ್/ನಿಯಂತ್ರಣ ಪ್ರದೇಶದಲ್ಲಿ ಮೇಲ್ವಿಚಾರಣೆಯನ್ನು ಮಾಡಲು ಸಲಹೆ ನೀಡಲಾಗಿದೆ ಮತ್ತು ಯಾವುದೇ ಅನಿಶ್ಚಿತತೆಯ ಸಂದರ್ಭದಲ್ಲಿ ಸಂಬಂಧಪಟ್ಟ SLDC/ RLDC ಮತ್ತು NLDC ಗೆ ವರದಿ ಮಾಡಬೇಕು ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ. ಆಸ್ಪತ್ರೆಗಳು, ರಕ್ಷಣೆ, ರೈಲ್ವೇ ಮುಂತಾದ ಅಗತ್ಯ ಸೇವೆಗಳಿಗೆ ವಿದ್ಯುತ್ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ವಿದ್ಯುತ್ ಸಚಿವಾಲಯ ತಮ್ಮ ಸಿಬ್ಬಂದಿಗಳಿಗೆ ಎಚ್ಚರ ವಹಿಸಲು ಸಲಹೆ ನೀಡಿದೆ.












Click it and Unblock the Notifications