ನಿರುದ್ಯೋಗಿಗಳಾಗುವುದಕ್ಕಿಂತ 'ಪಕೋಡ' ಮಾರುವುದು ಲೇಸು: ಅಮಿತ್ ಶಾ
ನವದೆಹಲಿ, ಫೆಬ್ರವರಿ 5: ಸದಸ್ಯರಾಗಿ ಆಯ್ಕೆಯಾದ ಬಳಿಕ ಇಂದು ರಾಜ್ಯಸಭೆಯಲ್ಲಿ ಮೊದಲ ಭಾಷಣ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಧಾನಿ 'ಪಕೋಡಾ' ಹೇಳಿಕೆಯನ್ನು ಸಮರ್ಥಿಸಿಕೊಂಡರು. ನಿರುದ್ಯೋಗಿಗಳಾಗುವುದಕ್ಕಿಂತ ಪಕೋಡ ಮಾರುವುದು ಲೇಸು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಪತಿ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸುವ ವೇಳೆ ಅವರು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪಕೋಡಾ ವ್ಯಂಗ್ಯಕ್ಕೆ ತಿರುಗೇಟು ನೀಡಿದರು.
"ಪಕೋಡ ಮಾರುವವರು ಸ್ವ ಉದ್ಯೋಗಿಗಳು. ಅವರನ್ನು ನೀವು ಬಿಕ್ಷುಕರ ಜತೆ ಹೋಲಿಕೆ ಮಾಡಲು ಸಾಧ್ಯವಿದೆಯೇ," ಎಂದು ಪ್ರಶ್ನಿಸಿದ್ದಲ್ಲದೆ, "ಚಾಯ್ ವಾಲಾರ ಮಗ ಇವತ್ತು ದೇಶದ ಪ್ರಧಾನಿಯಾಗಿದ್ದಾರೆ," ಎಂದು ಹೇಳಿದರು.

ತಮ್ಮ ದೀರ್ಘ ಒಂದು ಗಂಟೆಯ ಭಾಷಣದಲ್ಲಿ ಶಾ, "ದೇಶದಲ್ಲಿ ನಿರುದ್ಯೋಗವಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದು ಸಮಸ್ಯೆ. ಆದರೆ ನೀವು (ಕಾಂಗ್ರೆಸ್) ದೇಶವನ್ನು ಹಲವು ವರ್ಷಗಳ ಕಾಲ ಆಳಿದ್ದೀರಿ. ನಾವು ಅಧಿಕಾರದಲ್ಲಿದ್ದದ್ದು ಕೇವಲ 8 ವರ್ಷ (ವಾಜಪೇಯಿ ಅವಧಿ ಸೇರಿ) ಮಾತ್ರ," ಎಂದು ಕಿಡಿಕಾರಿದರು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಪಕೋಡ ಮಾರುವವನು ಕೂಡ ಉದ್ಯೋಗಸ್ಥ ಎಂದು ಹೇಳಿಕೆ ನೀಡಿದ್ದರು.
ಇನ್ನು ಸರಕು ಮತ್ತು ಸೇವಾ ತೆರಿಗೆಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದಿದ್ದ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ ನಡೆಸಿದರು. "ಡಕಾಯಿತನದ ಜತೆ ಗಬ್ಬರ್ ಸಿಂಗ್ ಟ್ಯಾಕ್ಸ್ ಹೋಲಿಕೆ ಮಾಡಲಾಗಿದೆ," ಎಂದು ಹೇಳಿದ ಶಾ, "ಇದು (ಜಿಎಸ್ಟಿ) ಡಕಾಯಿತಿಯಾ? ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದವರು ಇದನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ? ಇದು ಡಕಾಯಿತಿಯಲ್ಲ. ಬಡವರು, ವಿಧವೆಯರು ಸೇರಿದಂತೆ ಹಲವು ಸೇವೆಗಳಿಗೆ ಸಬ್ಸಿಡಿಗಳನ್ನು ಪಾವತಿ ಮಾಡಲು ಸಂಗ್ರಹಿಸುವ ಆದಾಯ," ಎಂದಿದ್ದಾರೆ.












Click it and Unblock the Notifications