ಕಸ್ಟಡಿಯಲ್ಲಿ ಆರೋಪಿ ಸಾವು: ಸಿಬಿಐ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು
ಕೋಲ್ಕತ್ತಾ, ಡಿ. 14: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಸಿಬಿಐ ಕಸ್ಟಡಿಯಲ್ಲಿದ್ದ ಬೋಗ್ಟುಯಿ ಹಿಂಸಾಚಾರದ ಆರೋಪಿ ಲಾಲನ್ ಶೇಖ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಜ್ಯ ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್ಐಆರ್)ಯಲ್ಲಿ ರಾಜ್ಯ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಕೇಂದ್ರೀಯ ಸಂಸ್ಥೆ ಆರೋಪಗಳನ್ನು "ಆಧಾರರಹಿತ" ಎಂದು ತಿರಸ್ಕರಿಸಿದೆ. ಜೊತೆಗೆ ಎಫ್ಐಆರ್ ಅನ್ನು ಕಲ್ಕತ್ತಾ ಹೈಕೋರ್ಟ್ನಲ್ಲಿ ಪ್ರಶ್ನಿಸಲಿದೆ.
ಪತಿಯಿಂದ ದೂರಾಗಿ ಪ್ರಿಯಕರನ ಜೊತೆಗಿದ್ದ ಯುವತಿ ನಿಗೂಢ ಸಾವು
ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಲಾಲನ್ ಶೇಖ್ ಸೋಮವಾರ ಸಿಬಿಐ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಾಕಪ್ ಚಿತ್ರಹಿಂಸೆ ಆರೋಪದಡಿ ಲಾಲನ್ ಕುಟುಂಬ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಭಾದು ಶೇಖ್ ಅವರ ಹತ್ಯೆಯ ನಂತರ ನಡೆದ ಘಟನೆ ಬೊಗ್ಟುಯಿ ಹಿಂಸಾಚಾರದಲ್ಲಿ ಲಾಲನ್ ಶೇಖ್ ಪ್ರಮುಖ ಆರೋಪಿಯಾಗಿದ್ದರು. ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, ಕಲ್ಕತ್ತಾ ಹೈಕೋರ್ಟ್ನ ಆದೇಶದ ಮೇರೆಗೆ ಸಿಬಿಐ ತನಿಖೆ ನಡೆಸುತ್ತಿದೆ.
ಘಟನೆಯ ಎಂಟು ತಿಂಗಳ ನಂತರ ಡಿಸೆಂಬರ್ 4 ರಂದು ಶೇಖ್ ಅವರನ್ನು ಜಾರ್ಖಂಡ್ನಲ್ಲಿ ಬಂಧಿಸಲಾಯಿತು. ಅಂದಿನಿಂದ ಅವರು ಜಿಲ್ಲೆಯಲ್ಲಿ ಸಿಬಿಐ ಸ್ಥಾಪಿಸಿದ್ದ ತಾತ್ಕಾಲಿಕ ಶಿಬಿರದಲ್ಲಿ ಸಿಬಿಐ ವಶದಲ್ಲಿದ್ದರು. ಆದರೆ, ಸೋಮವಾರ ಕೇಂದ್ರ ಏಜೆನ್ಸಿಯ ಕ್ಯಾಂಪ್ ಕಚೇರಿಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಸಿಬಿಐ ಅಧಿಕಾರಿಗಳು ತನ್ನ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರಕರಣದಲ್ಲಿ ಅವರ ಹೆಸರನ್ನು ತೆಗೆದುಹಾಕಲು 50 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಲಾಲನ್ ಶೇಖ್ ಅವರ ಪತ್ನಿ ಆರೋಪಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಯು ಆಕೆಯ ಆರೋಪಗಳು ಆಧಾರರಹಿ ಎಂದು ತಿರಸ್ಕರಿಸಿದೆ.