ಹಿಜಾಬ್, ಬುರ್ಖಾ ಪುರುಷರ ದಬ್ಬಾಳಿಕೆಯ ಸಂಕೇತ ಅಷ್ಟೇ : ತಸ್ಲೀಮಾ ನಸ್ರೀನ್
ಕರ್ನಾಟಕ ಉಚ್ಚ ನ್ಯಾಯಾಲಯ ಸಮವಸ್ತ್ರ ಪರಿಪಾಠವಿರುವ ಶಾಲಾ/ಕಾಲೇಜುಗಳಲ್ಲಿ ಅಂತಿಮ ಆದೇಶದ ವರೆಗೆ ಹಿಜಾಬ್/ಕೇಸರಿ ಶಲ್ಯ ಧರಿಸಿಕೊಂಡು ಬರುವಂತಿಲ್ಲ ಎನ್ನುವ ಆದೇಶವನ್ನು ನೀಡಿದ್ದರೂ, ಹಿಜಾಬ್ ಧರಿಸಿಕೊಂಡು ಬರುವವರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ.
ಹಿಜಾಬ್ ವಿಚಾರವು ಧಾರ್ಮಿಕ ಮತ್ತು ರಾಜಕೀಯ ಆಯಾಮವನ್ನು ಈಗಾಗಲೇ ಪಡೆದುಕೊಂಡಿರುವುದರಿಂದ ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಈ ವಿಚಾರದಲ್ಲಿ ಹಲವರು ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ.
ಇಸ್ಲಾಂನ ಆದ್ಯತೆಗಳಲ್ಲಿ ಹಿಜಾಬ್ ಪ್ರಮುಖಾಂಶವಲ್ಲ ಎನ್ನುವ ಹೇಳಿಕೆಯನ್ನು ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮದ್ ಖಾನ್ ಹೇಳಿದ್ದಾರೆ. ಇನ್ನು, ಹಿಜಾಬ್ ಮತ್ತು ಬುರ್ಖಾ ಪುರುಷರ ದಬ್ಬಾಳಿಕೆಯ ಸಂಕೇತ ಎಂದು ಬಾಂಗ್ಲಾದ ಲೇಖಕಿ ತಸ್ಲೀಮಾ ನಸ್ರೀನ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಗುರುವಾರವೂ (ಫೆ 17) ಕೂಡಾ ರಾಜ್ಯದ ವಿವಿದ ಭಾಗಗಳ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮುಂದುವರಿದಿದೆ. ಫಸ್ಟ್ ಪೋಸ್ಟ್ ಡಾಟ್ ಕಾಂಗೆ ನೀಡಿದ ಸಂದರ್ಶನದಲ್ಲಿ ಹಿಜಾಬ್, ಬುರ್ಖಾ ವಿಚಾರದಲ್ಲಿ ತಸ್ಲೀಮಾ ಇದೆಲ್ಲಾ ಪುರುಷರ ಶೋಷಣೆಯ ಸಂಕೇತ ಎಂದು ಹೇಳಿದ್ದಾರೆ.

ಬಾಂಗ್ಲಾದ ಲೇಖಕಿ ತಸ್ಲೀಮಾ ನಸ್ರೀನ್ ಅಭಿಪ್ರಾಯ
ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಹಿಜಾಬ್ ಗೊಂದಲದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ ತಸ್ಲೀಮಾ ನಸ್ರೀನ್, "ಹಿಜಾಬ್ ಸಂಸ್ಕೃತಿಯನ್ನು ಏಳನೇ ಶತಮಾನದಲ್ಲಿ ಪರಿಚಯಿಸಲಾಯಿತು, ಇಸ್ಲಾಂನಲ್ಲಿ ಇದಕ್ಕೆ ಅಷ್ಟೇನೂ ಪ್ರಾಮುಖ್ಯತೆಯಿಲ್ಲ. ಏಳನೇ ಶತಮಾನದ ವೇಳೆ, ಸ್ತ್ರೀಯರನ್ನು ಕೇವಲ ಭೋಗದ ವಸ್ತು ಎಂದು ಪರಿಗಣಿಸಲಾಗುತ್ತಿತ್ತು. ಪುರುಷನೊಬ್ಬ ಒಬ್ಬಳು ಸ್ತ್ರೀಯನ್ನು ನೋಡಿದ ಎಂದರೆ ಆತ ಆಕೆಯನ್ನು ಲೈಂಗಿಕ ಸಂಪರ್ಕಕ್ಕೆ ಕರೆದ ಎಂದೇ ಅರ್ಥ. ಹೀಗಾಗಿ ಸಮುದಾಯದ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳಲು, ಮುಖ ಮುಚ್ಚಿ ಓಡಾಡಲು ಹಿಜಾಬ್, ಬುರ್ಖಾಗಳನ್ನು ಬಳಸಲು ಆರಂಭಿಸಿದರು"ಎಂದು ತಸ್ಲೀಮಾ ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯಗೊಳಿಸುವುದರಲ್ಲಿ ತಪ್ಪಿಲ್ಲ
"ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯಗೊಳಿಸುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ವಾದ. ಶಾಲೆ ಮತ್ತು ಕಾಲೇಜಿನ ಆಡಳಿತ ಮಂಡಳಿಗಳು ಧಾರ್ಮಿಕ ಗುರುತನ್ನು ಮನೆಯಲ್ಲಿಯೇ ಇರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚಿಸುವುದರಲ್ಲಿ ತಪ್ಪಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಮತಾಂಧತೆ, ಮೂಲಭೂತವಾದ ಮತ್ತು ಮೂಢನಂಬಿಕೆಗಳಿಗೆ ಸ್ಥಾನ ನೀಡಬಾರದು. ವೈಯಕ್ತಿಕ ಸ್ವಾತಂತ್ರ್ಯ, ಲಿಂಗ ಸಮಾನತೆ, ಉದಾರವಾದ, ಮಾನವತಾವಾದ ಮತ್ತು ವೈಜ್ಞಾನಿಕ ತತ್ವಗಳನ್ನು ಶಾಲೆಗಳಲ್ಲಿ ಕಲಿಸಬೇಕು"ಎನ್ನುವುದು ನನ್ನ ಅಭಿಪ್ರಾಯ ಎಂದು ತಸ್ಲೀಮಾ ನಸ್ರೀನ್ ಹೇಳಿದ್ದಾರೆ.

ಹಿಜಬ್, ನಿಖಾಬ್ ಅಥವಾ ಬುರ್ಕಾ ದಬ್ಬಾಳಿಕೆಯ ಸಂಕೇತ
"ಮಹಿಳೆಯರನ್ನು ನೋಡಿದರೆ ಪುರುಷರಿಗೆ ಲೈಂಗಿಕ ಪ್ರಚೋದನೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಹಿಜಬ್ ಪರಿಚಯಿಸಲಾಗಿತ್ತು. ಇದು 21 ನೇ ಶತಮಾನ, ಆಧುನಿಕ ಸಮಾಜ. ಮಹಿಳೆಯರು ಪುರುಷರೊಂದಿಗೆ ಸಮಾನರು ಎಂಬುದನ್ನು ನಾವು ಕಲಿತಿದ್ದೇವೆ. ಆದುದರಿಂದ ಹಿಜಬ್, ನಿಖಾಬ್ ಅಥವಾ ಬುರ್ಖಾ ದಬ್ಬಾಳಿಕೆಯ ಸಂಕೇತಗಳಾಗಿವೆ" ಎಂದು ತಸ್ಲೀಮಾ ನಸ್ರೀನ್ ಹೇಳಿದ್ದಾರೆ.

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್
"ಸಂಪೂರ್ಣ ಅಜ್ಞಾನದ ಪರಿಣಾಮವೇ ಹಿಜಾಬ್ ವಿವಾದ. ಕುರಾನ್ನ ಮೊದಲ ಪದ ಓದಿ, ಮನುಷ್ಯನು ದೇವರ ಹೆಸರನ್ನು ಓದಲು ಮಾತ್ರ ಪ್ರಚೋದಿಸುವುದಿಲ್ಲ. ಸಂಬಂಧಿತ ಭಾಗಗಳನ್ನು ಉಲ್ಲೇಖಿಸಿ, ಪ್ರಾಣಿಗಳು, ನಕ್ಷತ್ರಗಳು ಮತ್ತು ಬಾಹ್ಯಾಕಾಶದ ಬಗ್ಗೆ ಯೋಚಿಸಲು ಮನುಷ್ಯನನ್ನು ಕೇಳಲಾಗಿದೆ. ಜ್ಞಾನದ ಹುಡುಕಾಟದಲ್ಲಿ ಅಗತ್ಯವಿದ್ದರೆ ಚೀನಾಕ್ಕೆ ಹೋಗುವಂತೆ ಹೇಳಲಾಗಿದೆ. ಕಲಿಮಾ ಮೂಲಕ ನಂಬಿಕೆಯ ದೃಢೀಕರಣ, ನಿಯಮಿತ ಮಧ್ಯಂತರದಲ್ಲಿ ಪ್ರಾರ್ಥನೆ ಸಲ್ಲಿಸುವುದು, ರಂಜಾನ್ ಸಮಯದಲ್ಲಿ ಉಪವಾಸ, ನಿಭಾಯಿಸಬಲ್ಲವರಿಗೆ ದಾನ ಮತ್ತು ಹಜ್ ಯಾತ್ರೆ" ಇದು ಇಸ್ಲಾಂ ಧರ್ಮದಲ್ಲಿ ಮುಖ್ಯ ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.












Click it and Unblock the Notifications