ಬಜರಂಗ ಬಲಿ ಸಹಾಯ ಮಾಡದ ಕಾರಣ ಬಿಜೆಪಿ ರಾಜಕೀಯಕ್ಕೆ ಔರಂಗಜೇಬ್, ಟಿಪ್ಪು ಬೇಕಾಗಿತ್ತು: ಸಂಜಯ್ ರಾವತ್
ಮುಂಬೈ, ಜೂನ್. 08: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 'ಬಜರಂಗ ಬಲಿ' ಸಹಾಯ ಮಾಡಲಿಲ್ಲ, ಆದ್ದರಿಂದ ಪಕ್ಷವು ಈಗ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅವರಂತಹ ಐತಿಹಾಸಿಕ ವ್ಯಕ್ತಿಗಳನ್ನು ಅವಲಂಬಿಸಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಗುರುವಾರ ಔರಂಗಬಾದ್ನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನ ಪಕ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಸಂಜಯ್ ರಾವತ್, ಮಹಾರಾಷ್ಟ್ರದಲ್ಲಿ ಇತ್ತೀಚಿನ ಕೋಮುಗಲಭೆ ಘಟನೆಗಳಿಗೆ ಬಿಜೆಪಿಯನ್ನು ದೂಷಿಸಿದ್ದಾರೆ. "ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿ ಮಹಾರಾಷ್ಟ್ರದಲ್ಲಿದೆ. ಔರಂಗಜೇಬನನ್ನು ಇಲ್ಲಿಯೇ ಸಮಾಧಿ ಮಾಡಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಸಮಾಧಿ ಮಹಾರಾಷ್ಟ್ರದಲ್ಲಿದೆ. ಆದರೆ, ಅವರನ್ನು ಕೊಲ್ಲಾಪುರ, ಸಂಗಮ್ನೇರ್ ಅಥವಾ ಬೇರೆಡೆ ಏಕೆ ಮತ್ತೆ ಜೀವಂತವಿರಿಸಲಾಗುತ್ತಿದೆ..?" ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
"ಬಿಜೆಪಿಗೆ ತನ್ನ ರಾಜಕೀಯಕ್ಕಾಗಿ ಔರಂಗಜೇಬ್ ಅವರ ಅಗತ್ಯವಿದೆ. ಇದಕ್ಕೆ ಕಾರಣ ಕರ್ನಾಟಕದಲ್ಲಿ ಬಜರಂಗ ಬಲಿ ಅವರಿಗೆ ಸಹಾಯ ಮಾಡಲಿಲ್ಲ. ನಂತರ ಅವರು ಔರಂಗಜೇಬ್, ಟಿಪ್ಪು ಸುಲ್ತಾನ್, ಬಹದ್ದೂರ್ ಶಾ ಜಾಫರ್, ಅಫ್ಜಲ್ ಖಾನ್ ಅವರನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರ ಹಿಂದುತ್ವವು ಈ ಖಾನ್ಗಳ ಮೇಲೆ ಅವಲಂಬಿತವಾಗಿದೆ" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಜತೆ ಭಿನ್ನಾಭಿಪ್ರಾಯವಿಲ್ಲ: ಅಮಿತ್ ಶಾ ಭೇಟಿ ಬಳಿಕ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆ
ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬುಧವಾರ ಬಲಪಂಥೀಯ ಸಂಘಟನೆಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಕೆಲವು ವ್ಯಕ್ತಿಗಳು ಟಿಪ್ಪು ಸುಲ್ತಾನ್ ಅವರ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದ ಸ್ಟೇಟಸ್ಗಳಲ್ಲಿ 'ಆಕ್ಷೇಪಾರ್ಹ' ಆಡಿಯೊ ಕ್ಲಿಪ್ ಬಳಸಿದ್ದರು, ಇದೆ ಕಾರಣಕ್ಕೆ ರಾಜ್ಯದ ಹಲವೆಡೆ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ.
ಅಹಮದ್ನಗರ ಜಿಲ್ಲೆಯ ಸಂಗಮ್ನೇರ್ನಲ್ಲಿ, ಮೆರವಣಿಗೆಯೊಂದರಲ್ಲಿ ಔರಂಗಜೇಬ್ನ ಚಿತ್ರಗಳನ್ನು ಹೊತ್ತೊಯ್ದ ಆರೋಪದ ಮೇಲೆ ಕೆಲವು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊಲ್ಲಾಪುರದಲ್ಲಿ ನಡೆದ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿರುವ ಹೆಚ್ಚಿನ ಜನರು ನಗರದ ಹೊರಗಿನವರು ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.
ಹಿಂಸಾತ್ಮಕ ಘಟನೆಗಳ ಸಂಬಂಧ ಕೊಲ್ಲಾಪುರದ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್ ಮಾತನಾಡಿ, "ಸಾಮಾಜಿಕ ಮಾಧ್ಯಮಗಳ ಪೋಸ್ಟ್ನಿಂದ ಕೆಲವು ಸಂಘಟನೆಗಳು ಕೊಲ್ಹಾಪುರ ಬಂದ್ಗೆ ಕರೆ ನೀಡಿದ್ದವು. ಈ ಸಂಘಟನೆಗಳ ಸದಸ್ಯರು ಇಂದು ಶಿವಾಜಿ ಚೌಕ್ನಲ್ಲಿ ಜಮಾಯಿಸಿದರೆ ಕೆಲವರು ಕಲ್ಲು ತೂರಾಟ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರ ಮೇಲೆ ಮಾಡುವಂತೆ ಒತ್ತಡ ಉಂಟಾಗಿತ್ತು" ಎಂದಿದ್ದಾರೆ.