ಬಾಬ್ರಿ ಮಸೀದಿ ಧ್ವಂಸದ 22ನೇ ವಾರ್ಷಿಕೋತ್ಸವ : ದೇಶ ಎಷ್ಟೋ ಮುಂದೆ ಸಾಗಿದೆ
1992ರ ಡಿಸೆಂಬರ್ 6 ಮತ್ತು 2014ರ ಡಿಸೆಂಬರ್ 6ರ ನಡುವೆ ಎಷ್ಟೊಂದು ಬದಲಾವಣೆಯಾಗಿದೆ. ಇದು ಐತಿಹಾಸಿಕ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ ದಿನವೆಂದು ಕಪ್ಪು ಅಕ್ಷರಗಳಲ್ಲಿ ಇತಿಹಾಸದ ಪುಟಗಳಲ್ಲಿ ದಾಖಲಿಸಲಾಗಿದ್ದರೂ, ಭವಿತವ್ಯದ ದೃಷ್ಟಿಯಿಂದ ಮುನ್ನಡೆಯಲೇಬೇಕು.
ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಸಂದರ್ಭದಲ್ಲಿ ಮಂಗಳೂರಿನಲ್ಲಿದ್ದೆ. ನಾನು ಆಗ ತಾನೆ ಶಾಲೆಯನ್ನು ಮುಗಿಸಿದ್ದೆ. ಸುದ್ದಿ ಹಬ್ಬುತ್ತಿದ್ದಂತೆ ಎಲ್ಲೆಡೆ ಹಿಂಸಾಚಾರ ಆರಂಭವಾಗಿ ನಾನು ಮನೆ ತಲುಪುವುದು ಸಾಧ್ಯವೇ ಇಲ್ಲ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. 48 ಗಂಟೆಗಳ ನಂತರ ಹೇಗೋ ರೈಲನ್ನು ಹಿಡಿದುಕೊಂಡು ಸತತ 24 ಗಂಟೆಗಳ ಕಾಲ ಫುಟ್ ಬೋರ್ಡಿನಲ್ಲಿ ನೇತಾಡಿಕೊಂಡು ಬೆಂಗಳೂರು ತಲುಪಿದ್ದೆ.
ಫಾಸ್ಟ್ ಫಾರ್ವರ್ಡ್
ಸರಿಯಾಗಿ ಹದಿನೆಂಟು ವರ್ಷಗಳ ನಂತರ ಲಖನೌ ಹೈಕೋರ್ಟಿನಲ್ಲಿ ನಾನು ನಿಂತಿದ್ದೆ. ಎರಡು ದಶಕಗಳ ನಂತರ ಈ ಪ್ರಕರಣದಲ್ಲಿ ನೀಡಬೇಕಾಗಿದ್ದ ತೀರ್ಪನ್ನು ವರದಿ ಮಾಡಲೆಂದು ನಾನು ಕೋರ್ಟಿನಲ್ಲಿದ್ದದ್ದು ಕಾಕತಾಳೀಯ. ತೀರ್ಪು ಪ್ರಕಟವಾಗುವಾಗ ಹಲವಾರು ನಾಟಕೀಯ ಘಟನೆಗಳು ನಡೆದಿದ್ದವು.
2010ರ ಸೆಪ್ಟೆಂಬರ್ 23ರಂದು ಲಖನೌ ತಲುಪಿದ್ದೆ, ಅಂದೇ ತೀರ್ಪು ಪ್ರಕಟವಾಗುವುದಿತ್ತು. ಇನ್ನೇನು ಅಲಹಾಬಾದ್ ಹೈಕೋರ್ಟ್ನ ಲಖನೌ ಬೆಂಚ್ ತೀರ್ಪು ನೀಡುವುದರಲ್ಲಿತ್ತು, ಅಷ್ಟರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ದಿನವನ್ನು ಮುಂದೂಡಿದೆ ಎಂಬ ಸುದ್ದಿ ಬಂದಿತು. ನಾನು ಅಲ್ಲಿಂದಲೇ ಬೆಂಗಳೂರಿಗೆ ಮರಳಿದೆ.
ಕೆಲ ದಿನಗಳ ನಂತರ ಹೈಕೋರ್ಟಿನಲ್ಲಿ ತೀರ್ಪು ನೀಡುವ ಹಾದಿಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿತು. ತೀರ್ಪನ್ನು ವರದಿ ಮಾಡಲೆಂದು ಸೆಪ್ಟೆಂಬರ್ 30ರಂದು ನಾನು ಮತ್ತೆ ಲಖನೌನಲ್ಲಿದ್ದೆ. [ಬಾಬ್ರಿ ಮಸೀದಿ ಧ್ವಂಸ ಟೈಮ್ ಲೈನ್]

ಯುದ್ಧಭೂಮಿಯಂತಾಗಿದ್ದ ಲಖನೌ ಬೀದಿ
ಲಖನೌ ಯುದ್ಧ ಭೂಮಿಯಂತೆ ಕಾಣುತ್ತಿತ್ತು. ಹತ್ತು ಸಾವಿರಕ್ಕೂ ಹೆಚ್ಚು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು ನಗರವನ್ನು ಕಟ್ಟೆಚ್ಚರದಿಂದ ಕಾಯುತ್ತಿದ್ದರು. ಮಧ್ಯಾಹ್ನ 2 ಗಂಟೆಗೆ ತೀರ್ಪು ಹೊರಬರುವುದಿತ್ತು ಮತ್ತು ಎಲ್ಲೆಡೆ ಕುದಿಮೌನ ಮನೆಮಾಡಿತ್ತು. ಜಿಲ್ಲಾಡಳಿತದ ಆದೇಶದಂತೆ ಎಲ್ಲ ಅಂಗಡಿ ಮುಂಗಟ್ಟುಗಳು ಕದ ಮುಚ್ಚಿದ್ದವು.
ಹೊಟೇಲಿನಲ್ಲಿ ನನ್ನ ಸಂಗಾತಿ ಪತ್ರಕರ್ತಮಿತ್ರನಿಗೆ ಹೇಳಿದೆ. ನಾವು ಇನ್ನೂ ಮೂರು ಊಟ ಕಟ್ಟಿಸಿಕೊಂಡು ಹೋಗೋಣ. ಏಕೆಂದರೆ, ಎಷ್ಟು ಹೊತ್ತಿಗೆ ಮುಂದಿನ ಊಟಕ್ಕೆ ಹೊರಗೆ ಬರುತ್ತೇವೋ ಗೊತ್ತಿಲ್ಲ. ತೀರ್ಪು ಹೊರಬೀಳುತ್ತಿದ್ದಂತೆ, ಲಖನೌ ಬೀದಿಬೀದಿಗಳು ರಣರಂಗವಾಗುತ್ತದೆ, ಎಲ್ಲೆಡೆ ಹಿಂಸಾಚಾರ ಶುರುವಾಗುತ್ತದೆ ಎಂದು ಮೊದಲೇ ಎಣಿಸಿದ್ದೆವು. [ಮಸೀದಿ ಧ್ವಂಸವಾದಾಗ ಪಿವಿಎನ್ ರಾವ್ ಏನು ಮಾಡುತ್ತಿದ್ದರು]
ಹೈಕೋರ್ಟಿನ ಸುತ್ತ ಪ್ರತಿಬಂಧಕಾಜ್ಞೆ
ಹೈಕೋರ್ಟ್ ಸುತ್ತಮುತ್ತ ಪ್ರತಿಬಂಧಕಾಜ್ಞೆ ಜಾರಿಯಾಗಿತ್ತು. ಕೋರ್ಟಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಪತ್ರಕರ್ತರಿಗೆ ಇರಲು ಅನುಕೂಲ ಮಾಡಿಕೊಟ್ಟಿದ್ದರು. ತೀರ್ಪು ಹೊರಬೀಳುತ್ತಿದ್ದಂತೆ ವಕೀಲರು ಬಂದು ತೀರ್ಪಿನ ಸಾರಾಂಶವನ್ನು ಹೇಳಲಿದ್ದಾರೆ ಎಂದು ನಮಗೆ ತಿಳಿಸಲಾಗಿತ್ತು.
ಹೊರಗಿನ ಪರಿಸ್ಥಿತಿ ಹೇಗಿದೆಯೆಂದು ನಮ್ಮ ಅರಿವಿಗೆ ಬಂದಿತ್ತು. ನಮ್ಮ ಓದುಗರ ಸಂಖ್ಯೆ ಹೆಚ್ಚುತ್ತದೆ ಎಂದು ತಿಳಿದಿದ್ದರೂ ನಮಗೆ ಹಿಂಸಾಚಾರವಾಗುವುದು ಬೇಡವಾಗಿತ್ತು. ಬಾಬ್ರಿ ಮಸೀದಿ ಧ್ವಂಸವಾದ ದಿನ ನಡೆದ ಘಟನೆಗಳನ್ನು ನಾವು ಮೆಲುಕು ಹಾಕುತ್ತಿದ್ದೆವು. ತೀರ್ಪು ಯಾರ ಕಡೆ ಆದರೂ, ಒಬ್ಬರಿಗೆ ಅಸಮಾಧಾನವಾಗುವುದು ಖಚಿತ ಮತ್ತು ಹಿಂಸಾಚಾರ ಭುಗಿಲೇಳುವುದು ಖಂಡಿತ ಎಂದು ನಮಗೆ ತಿಳಿದಿತ್ತು.
ತೀರ್ಪು ಪ್ರಕಟವಾದ ಆಕ್ಷಣ
ಸರಿಯಾಗಿ ಮಧ್ಯಾಹ್ನ 2.30ಕ್ಕೆ ತೀರ್ಪು ಹೊರಬಿದ್ದಿದೆಯೆಂದು ನಮಗೆ ತಿಳಿಯಿತು. ತೀರ್ಪು ಯಾರ ಪರವಾಗಿದೆಯೋ ಎಂದು ಎಲ್ಲರೂ ಅಸಹನೆಯಿಂದ ಸುದ್ದಿಗಾಗಿ ಕಾಯುತ್ತಿದ್ದೆವು. ಕೆಲವು ವಕೀಲರು ವಿಜಯದ ಸಂಕೇತ ತೋರಿಸುತ್ತ ನಮ್ಮತ್ತು ಓಡೋಡಿ ಬರುತ್ತಿರುವುದು ಕಂಡಿತು. ಅವರು ವಿಶ್ವ ಹಿಂದೂ ಪರಿಷತ್ ಪರ ವಕೀಲರು. "ತೀರ್ಪು ನಮ್ಮ ಪರವಾಗಿ ಆಗಿದೆ" ಎಂದು ಘೋಷಣೆ ಕೂಗುತ್ತಲೆ ಓಡೋಡಿ ಬಂದರು. ಆಗ ಮುಂದೇನು ನಡೆಯುತ್ತದೋ ಎಂಬುದರ ಬಗ್ಗೆ ಯಾರ ಮನದಲ್ಲೂ ಸುಳಿದಿರಲಿಲ್ಲ. ಎಲ್ಲರೂ ಸುದ್ದಿಯನ್ನು ತೆಗೆದುಕೊಳ್ಳುವತ್ತ ಗಮನ ಹರಿಸಿದ್ದೆವು.
ಏನೋ ಅವಘಡ ಸಂಭವಿಸುತ್ತದೆ ಎಂದು ನಾನು ತಿಳಿದಿದ್ದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಎಲ್ಲೆಡೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಪರಿಸ್ಥಿತಿ ಸಹಜವಾಗಿತ್ತು. ನೋಡಲು ಹಿತಕರವಾಗಿಯೂ ಇತ್ತು. 1992ರ ಆ ಘಟನೆ ನನ್ನ ಮನದಲ್ಲಿ ರೈಲಿನಷ್ಟೇ ವೇಗವಾಗಿ ಹಾಯ್ದು ಮರೆಯಾಯಿತು. ಒಂದೇ ಒಂದು ಅಹಿತಕರ ಘಟನೆ ನಡೆದಿರುವುದು ನಮ್ಮೆಲ್ಲರ ಗಮನಕ್ಕೆ ಬಂದಿತ್ತು. ಆಗಲೇ ನಾನು ಅಂದುಕೊಂಡೆ. ದೇಶ ಸಾಕಷ್ಟು ಮುಂದೆ ಸಾಗಿದೆ.
ಕೇಸಿನ ಬಗ್ಗೆ ವಕೀಲರು ಸಾಕಷ್ಟು ಹೇಳುತ್ತಿದ್ದರೂ, ಸಾಮಾನ್ಯ ಜನರಿಗೆ ಅದರಲ್ಲಿ ಉತ್ಸಾಹವೇ ಇರಲಿಲ್ಲ. ಎರಡೂ ಕೋಮಿನ ಜನರು, ಇದು ಮುಗಿದುಹೋದ ಘಟನೆ ಎಂಬಂತೆ ತಮ್ಮಷ್ಟಕ್ಕೆ ತಾವು ಅಡ್ಡಾಡುತ್ತಿದ್ದರು. ದೇಶದಲ್ಲಿ ಏಷ್ಟೋ ವಿಷಯಗಳು ಚಿಂತನೆಗೆ ಕಾರಣವಾಗಿರುವಾಗ ಬಾಬ್ರಿ ಮಸೀದಿ ಧ್ವಂಸ ಅಷ್ಟು ಗಹನವಾಗಿ ಕಾಡುತ್ತಲೇ ಇರಲಿಲ್ಲ. ಹಿಂಸಾಚಾರ ಜನರಿಗೂ ಬೇಡವಾಗಿತ್ತು. ನಾನು ನನ್ನ ಸ್ನೇಹಿತ ಪತ್ರಕರ್ತನಿಗೆ ಹೇಳಿದೆ "ನಡಿ ಹೊರಗೆ ಹೋಟೇಲಿಗೆ ಊಟಕ್ಕೆ ಹೋಗೋಣ!"












Click it and Unblock the Notifications