ವೇಗ ಪಡೆದುಕೊಂಡ ಅಯೋಧ್ಯಾ ರಾಮಮಂದಿರ ನಿರ್ಮಾಣ ಕಾಮಗಾರಿ: 1,600 ಕೆಲಸಗಾರರು, 24×7 ಕೆಲಸ!
ಅಯೋಧ್ಯೆ, ಜುಲೈ. 10: 2024 ರ ಜನವರಿಯಲ್ಲಿ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾಗಲಿದೆ ಎಂದು ಈ ಹಿಂದೆ ಹಲವು ಬಾರಿ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ನಾಯಕರು ಹೇಳಿದ್ದಾರೆ. ಹೀಗಾಗಿಯೇ ದೇಗುಲವನ್ನು ಆದಷ್ಟು ಬೇಗ ಭಕ್ತರಿಗಾಗಿ ತೆರೆಯಲು ದೇವಾಲಯ ಕಾಮಗಾರಿ ಕೆಲಸವನ್ನು ತೀವ್ರಗೊಳಿಸಲಾಗುತ್ತಿದೆ.
ಇತ್ತೀಚಿನ ವಾರಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ಕಾಮಗಾರಿ ವೇಗವಾಗಿ ಸಾಗುತ್ತಿದೆ. ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯ ಮೇಲ್ವಿಚಾರಣೆಗಾಗಿ ಸರ್ಕಾರವು ಸ್ಥಾಪಿಸಿದ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ (SRJTK) ಆಡಳಿತವು ದೇವಾಲಯ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರ ಸಂಖ್ಯೆಯನ್ನು 550 ರಿಂದ 1,600 ಕ್ಕೆ ಹೆಚ್ಚಿಸಿದೆ.

ಈ ಹಿಂದೆ 18 ಗಂಟೆಗಳ ಪಾಳಿಯಲ್ಲಿ ನಡೆಯುತ್ತಿದ್ದ ಕೆಲಸ ಈಗ ಹಗಲು-ರಾತ್ರಿ ನಡೆಯುತ್ತಿದೆ. ಮುಂದಿನ ವರ್ಷ ಜನವರಿಯಲ್ಲಿ 'ಪ್ರಾಣ ಪ್ರತಿಷ್ಠಾ' (ದೇವತೆಯ ಪ್ರತಿಷ್ಠಾಪನೆಯ ಸಮಾರಂಭ) ವನ್ನು ಮಾಡಲು ಭಗವಾನ್ ರಾಮನ ವಿಗ್ರಹವನ್ನು ಸ್ಥಾಪಿಸುವ ಗರ್ಭಗುಡಿಯ ಸಂಕೀರ್ಣದ ನೆಲ ಮಹಡಿಯಲ್ಲಿ ನೆಲಹಾಸು ಮತ್ತು ವಿದ್ಯುತ್ ಕೆಲಸಗಳು ಮಾತ್ರ ಬಾಕಿ ಉಳಿದಿವೆ.
ದೇವಸ್ಥಾನದ ನೆಲ ಮತ್ತು ಮೊದಲ ಮಹಡಿಗಳೆರಡನ್ನೂ ಜನವರಿ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಯೋಜನಾ ವ್ಯವಸ್ಥಾಪಕ ಜಗದೀಶ್ ಅಫಲೆ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಉಲ್ಲೇಖಿಸಿದೆ.
"ಸದ್ಯ, ಡಿಸೆಂಬರ್ನೊಳಗೆ ನೆಲಮಹಡಿಯನ್ನು ಪೂರ್ಣಗೊಳಿಸಿ 'ಪ್ರಾಣ ಪ್ರತಿಷ್ಠಾ'ಕ್ಕೆ ಸಿದ್ಧಗೊಳಿಸುವುದು ನಮ್ಮ ಆದ್ಯತೆಯಾಗಿದೆ. ಮೊದಲ ಅಂತಸ್ತಿನ ಕಾಮಗಾರಿಯೂ ಜುಲೈ 1 ರಂದು ಆರಂಭವಾಗಿದ್ದು, ಸ್ಲ್ಯಾಬ್ಗಳು ಮತ್ತು ಪಿಲ್ಲರ್ಗಳು ಸೇರಿದಂತೆ ಅದರ ಪ್ರಮುಖ ರಚನೆಗಳು ಜನವರಿ ವೇಳೆಗೆ ಪೂರ್ಣಗೊಳ್ಳಲಿದ್ದು, ಭಕ್ತರು ದೇಗುಲಕ್ಕೆ ಭೇಟಿ ನೀಡಬಹುದಾಗಿದೆ. ಆದರೆ ಮಾರ್ಚ್ 2024 ರವರೆಗೆ ಮೊದಲ ಮಹಡಿಯ ಕೆಲಸ ಪೂರ್ಣಗೊಳ್ಳುವುದಿಲ್ಲ" ಎಂದು ಹೇಳಿದ್ದಾರೆ.

"ಮೂರು ಅಂತಸ್ತಿನ ಕಟ್ಟಡ ಮತ್ತು 'ಪರ್ಕೋಟಾ' (ಸಂಕೀರ್ಣದ ಹೊರ ಗೋಡೆ) ಪೂರ್ಣಗೊಳಿಸಲು ಸುಮಾರು ಒಂದೂವರೆ ವರ್ಷ ತೆಗೆದುಕೊಳ್ಳುತ್ತದೆ. ಮಳೆಯು ಕೆಲವೊಮ್ಮೆ 'ಪಾರ್ಕೋಟಾ' ಕಾಮಗಾರಿಗೆ ಅಡ್ಡಿಪಡಿಸುತ್ತಿದೆ. ಆದರೆ ಮಳೆ ಬಂದರೂ ಮನೆಯೊಳಗಿನ ಕೆಲಸಗಳು ಚಾಲ್ತಿಯಲ್ಲಿದೆ. 24 ಗಂಟೆಯೂ ನಡೆಯುತ್ತಿರುವುದರಿಂದ ಕಾಮಗಾರಿ ವೇಗ ಪಡೆದುಕೊಂಡಿದೆ. ಅಯೋಧ್ಯೆಯ ಹೊರಗಿನ ಎಂಜಿನಿಯರ್ಗಳು, ಮೇಲ್ವಿಚಾರಣಾ ಸಿಬ್ಬಂದಿ ಮತ್ತು ದಿನಗೂಲಿಗಳು ಸೇರಿದಂತೆ ಸುಮಾರು 1,200 ಕಾರ್ಮಿಕರು ಸಂಕೀರ್ಣದಲ್ಲಿ ಕೆಲಸ ಮಾಡುತ್ತಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications