ಅಯೋಧ್ಯೆ ರಾಮಮಂದಿರ ಕಾಮಗಾರಿ ಶೇ 50ರಷ್ಟು ಪೂರ್ಣಗೊಂಡಿದೆ: ಸಿಎಂ ಯೋಗಿ
ಜೈಪುರ ಅಕ್ಟೋಬರ್ 7: ಉತ್ತರಪ್ರದೇಶ ಅಯೋಧ್ಯೆ ರಾಮಮಂದಿರ ಕಾಮಗಾರಿ ಶೇ 50ರಷ್ಟು ಪೂರ್ಣಗೊಂಡಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ರಾಜಸ್ಥಾನದ ಪಂಚಖಂಡ ಪೀಠದಲ್ಲಿ ಗುರುವಾರ (ಅಕ್ಟೋಬರ್ 6) ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಶೇಕಡಾ 50 ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಹೇಳಿದರು.
"ಮಹಾತ್ಮ ರಾಮಚಂದ್ರ ವೀರ್ ಮಹಾರಾಜ್ ಮತ್ತು ಸ್ವಾಮಿ ಆಚಾರ್ಯ ಧರ್ಮೇಂದ್ರ ಮಹಾರಾಜ್ ಅವರು ದೇಶಕ್ಕೆ ನಿಸ್ವಾರ್ಥವಾಗಿ ಕೊಡುಗೆ ನೀಡಿದ್ದಾರೆ. ಸಾರ್ವಜನಿಕ ಸಹಭಾಗಿತ್ವವನ್ನು ಖಾತ್ರಿಪಡಿಸುವಲ್ಲಿ ಪೀಠವು ನಿರ್ಣಾಯಕ ಪಾತ್ರವನ್ನು ವಹಿಸಿದೆ. ದೇಶದ ಕಲ್ಯಾಣಕ್ಕಾಗಿ ಸಂತರ ನೇತೃತ್ವದಲ್ಲಿ ವಿವಿಧ ಅಭಿಯಾನಗಳು ನಡೆಯುತ್ತಿವೆ. ಎಲ್ಲಾ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿಗಳಲ್ಲಿ 'ಪಂಚಖಂಡ ಪೀಠ' ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತದೆ'' ಎಂದು ಅವರು ಹೇಳಿದರು.
'ಸಂತ ಸಮಾಗಮ'ವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ, "ಭಾರತದ ಸನಾತನ ಧರ್ಮವು ನಮ್ಮ 'ಗೋ ಮಾತೆಯ' (ಗೋವುಗಳ) ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ" ಎಂದು ಹೇಳಿದರು. 1949ರಲ್ಲಿ ಆಂದೋಲನ ಆರಂಭವಾದ ರಾಮಮಂದಿರದ ಕನಸನ್ನು ನನಸು ಮಾಡಲು ಸಮರ್ಪಿತ ಪ್ರಯತ್ನಗಳು ನಡೆದವು. ಪರಿಣಾಮವಾಗಿ ಇಂದು ಆಚಾರ್ಯ ಯವರ ಕನಸಾಗಿದ್ದ ರಾಮಮಂದಿರದ ಕಾಮಗಾರಿ ಶೇ.50ಕ್ಕೂ ಹೆಚ್ಚು ಪೂರ್ಣಗೊಂಡಿದೆ. ಆಚಾರ್ಯ ಅವರು ಪ್ರಾಮಾಣಿಕವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದರಿಂದಾಗಿ ಹಿಂದೂ ಸಮುದಾಯವು ಅವರ ಬಗ್ಗೆ ಗೌರವವನ್ನು ಇಟ್ಟುಕೊಂಡಿದೆ.
Over 50% of the work on the Ram Mandir has neared completion, said Uttar Pradesh CM Yogi Adityanath at an event in Rajasthan: CMO
— ANI UP/Uttarakhand (@ANINewsUP) October 6, 2022
(file photo) pic.twitter.com/3RwzD7z8gQ
2025ರ ಒಳಗೆ ಸಾರ್ವಜನಿಕರ ದರ್ಶನಕ್ಕೆ ರಾಮಮಂದಿರ
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾನ ದರ್ಶನವು 2023ರ ಡಿಸೆಂಬರ್ ಒಳಗಾಗಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ರಾಮ ಮಂದಿರ ಸಂಕೀರ್ಣದ ನಿರ್ಮಾಣ 2025ರ ಒಳಗಾಗಿ ಮುಕ್ತಾಯಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಆದರೆ ರಾಮಮಂದಿರ ನಿರ್ಮಾಣ ವೇಗವಾಗಿ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದು 2025ರ ಒಳಗಾಗಿ ಸಾರ್ವಜನಿಕರ ದರ್ಶನಕ್ಕೆ ಸಿಗುವ ಸಾಧ್ಯತೆ ಇದೆ.
ರಾಜಸ್ಥಾನದ ಗುಲಾಬಿ ಮರಳುಗಲ್ಲು ಬಳಕೆ
ಈಗಾಗಲೇ ಸ್ತಂಭ ನಿರ್ಮಾಣವಾಗಿದ್ದು, ಆ ಕಾಮಗಾರಿ ವೇಗವಾಗಿ ಪ್ರಗತಿಯಲ್ಲಿದೆ. ನಾವು ಏಕಕಾಲದಲ್ಲಿ 'ಗರ್ಭ ಗೃಹ' ಅಥವಾ ಗರ್ಭಗುಡಿ ಪ್ರದೇಶದಿಂದ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ. ದೇವಾಲಯದ ಗೋಡೆಗಳಿಗೆ ರಾಜಸ್ಥಾನದ ಗುಲಾಬಿ ಮರಳುಗಲ್ಲನ್ನು ಬಳಸಲಾಗುತ್ತಿದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್ನಿಂದ ನೇಮಕಗೊಂಡ 5 ಮೇಲ್ವಿಚಾರಣಾ ಮುಖ್ಯ ಎಂಜಿನಿಯರ್ಗಳಲ್ಲಿ ಒಬ್ಬರಾದ ಜಗದೀಶ್ ಎಂದು ಮಾಹಿತಿ ನೀಡಿದ್ದಾರೆ.
ಬಿಜೆಪಿ ರಾಜಕೀಯ ಲಾಭ ಪಡೆಯುವ ನಿರೀಕ್ಷೆ
ಈ ವರ್ಷದ ಜೂನ್ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ಗರ್ಭ ಗೃಹ' ಅಥವಾ ದೇವಾಲಯದ ಗರ್ಭಗುಡಿಯ ಅಡಿಪಾಯವನ್ನು ಹಾಕುವ ಸಮಾರಂಭದಲ್ಲಿ ಮೊದಲ ಕೆತ್ತನೆಯ ಕಲ್ಲನ್ನು ಇರಿಸುವ ಮೂಲಕ ಭಾಗವಹಿಸಿದ್ದರು. ನಿರ್ಣಾಯಕ 2024ರ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಗರ್ಭಗುಡಿ ಭಕ್ತರಿಗೆ ತೆರೆಯುತ್ತದೆ. ಅಲ್ಲಿ ಬಿಜೆಪಿ ರಾಜಕೀಯ ಲಾಭವನ್ನು ನಿರೀಕ್ಷಿಸುತ್ತದೆ ಎನ್ನಲಾಗಿದೆ. ಇದಕ್ಕೆ 500 ವರ್ಷಗಳ ಕಾಲ ಹೋರಾಟವಿತ್ತು. ಆ ಹೋರಾಟ ಈಗ ಮುಕ್ತಾಯದತ್ತ ಸಾಗುತ್ತಿದೆ. ಇದು ಪ್ರತಿ ಭಾರತೀಯನ ಹೆಮ್ಮೆಯ ಕ್ಷಣ. ಆಕ್ರಮಣಕಾರರು ನಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡಿದರು. ಆದರೆ ಅಂತಿಮವಾಗಿ ಭಾರತ ಗೆದ್ದಿದೆ ಎಂದು ಮುಖ್ಯಮಂತ್ರಿ ಯೋಗಿ ಹೇಳಿದ್ದರು.
ದೇವಾಲಯ ರಚನೆ ಹೀಗಿರಲಿದೆ
ದೇವಾಲಯದ ನಿರ್ಮಾಣದ ಉಸ್ತುವಾರಿ ಹೊತ್ತ ರಾಮಜನ್ಮಭೂಮಿ ಟ್ರಸ್ಟ್ ಪ್ರಕಾರ ರಾಜಸ್ಥಾನದ ಮಕ್ರಾನಾ ಬೆಟ್ಟಗಳಿಂದ ಬಿಳಿ ಅಮೃತಶಿಲೆಗಳನ್ನು ಗರ್ಭಗುಡಿಯಲ್ಲಿ ಬಳಸಲಾಗುವುದು ಎಂದು ಹೇಳಿದೆ. ದೇವಾಲಯದ ಯೋಜನೆಗೆ 8 ರಿಂದ 9 ಲಕ್ಷ ಕ್ಯೂಬಿಕ್ ಅಡಿ ಕೆತ್ತಿದ ಮರಳುಗಲ್ಲು, 6.37 ಲಕ್ಷ ಕ್ಯೂಬಿಕ್ ಅಡಿ ಕೆತ್ತಿದ ಗ್ರಾನೈಟ್, 4.70 ಲಕ್ಷ ಕ್ಯೂಬಿಕ್ ಅಡಿ ಕೆತ್ತಿದ ಗುಲಾಬಿ ಮರಳುಗಲ್ಲು ಮತ್ತು 13,300 ಕ್ಯೂಬಿಕ್ ಅಡಿ ಮಕ್ರಾನ ಬಿಳಿ ಕೆತ್ತಿದ ಅಮೃತಶಿಲೆಯನ್ನು ದೇವಾಲಯದ ಯೋಜನೆಗೆ ಬಳಸಲಾಗುವುದು ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.