ಸುಪ್ರೀಂಕೋರ್ಟ್ ವಿರುದ್ಧ ಟೀಕೆ: ವ್ಯಂಗ್ಯಚಿತ್ರಕಾರ್ತಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಅನುಮತಿ
ನವದೆಹಲಿ, ಡಿಸೆಂಬರ್ 2: ಸುಪ್ರೀಂಕೋರ್ಟ್ ಅನ್ನು ಟೀಕಿಸುವಂತಹ ರೇಖಾಚಿತ್ರ ರಚಿಸಿದ್ದ ವ್ಯಂಗ್ಯಚಿತ್ರಕಾರ್ತಿ ರಚಿತಾ ತನೇಜಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಪ್ರಕ್ರಿಯೆ ಆರಂಭಿಸಲು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅನುಮತಿ ನೀಡಿದ್ದಾರೆ. ರಚಿತಾ ಅವರು ಸರಣಿ ವ್ಯಂಗ್ಯಚಿತ್ರಗಳನ್ನು ಟ್ವೀಟ್ ಮಾಡಿದ್ದರು. ಇವು ದೇಶದ ಸರ್ವೋಚ್ಛ ನ್ಯಾಯಾಲಯದ ವಿರುದ್ಧದ ಸಮಗ್ರ ಚಿತಾವಣೆ ಮತ್ತು ನ್ಯಾಯಾಂಗದ ಮೇಲಿನ ಹಲ್ಲೆ ಮತ್ತು ಅವಮಾನವಾಗಿದೆ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.
'ಸ್ಯಾನಿಟರಿ ಪ್ಯಾನೆಲ್ಸ್' ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ಗಳನ್ನು ಮಾಡಿದ್ದ ರಚಿತಾ, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ್ದನ್ನು ವ್ಯಂಗ್ಯಚಿತ್ರದ ಮೂಲಕ ಟೀಕಿಸಿದ್ದರು. ಒಂದೆಡೆ ಬಿಜೆಪಿ ಇನ್ನೊಂದು ಕಡೆ ಸುಪ್ರೀಂಕೋರ್ಟ್ ಮಧ್ಯೆ ಅರ್ನಬ್ ಗೋಸ್ವಾಮಿ ನಿಂತಿದ್ದು, ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡುವಾಗ ಸುಪ್ರೀಂಕೋರ್ಟ್ ಪಕ್ಷಪಾತಿ ಧೋರಣೆ ಅನುಸರಿಸಿದೆ ಎಂಬ ಅರ್ಥದಲ್ಲಿ ಚಿತ್ರಿಸಿದ್ದರು. ಜತೆಗೆ 'ನನ್ನ ತಂದೆ ಯಾರು ಎಂಬುದು ನಿಮಗೆ ಗೊತ್ತಿಲ್ಲ' ಎಂದು ಅರ್ನಬ್ ಹೇಳುವಂತೆ ಬರೆದಿದ್ದರು.
ಇದರ ವಿರುದ್ಧ ಅಟಾರ್ನಿ ಜನರಲ್ಗೆ ಅರ್ಜಿ ಸಲ್ಲಿಸಿದ್ದ ಕಾನೂನು ವಿದ್ಯಾರ್ಥಿ ಆದಿತ್ಯ ಕಶ್ಯಪ್, ರಚಿತಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಜಾರಿಗೊಳಿಸಲು ಅನುಮತಿ ಕೋರಿದ್ದರು. ರಚಿತಾ ಅವರ ಹಲವು ವ್ಯಂಗ್ಯಚಿತ್ರಗಳ ಸ್ಕ್ರೀನ್ಶಾಟ್ಗಳನ್ನು ನೀಡಿದ್ದ ಕಶ್ಯಪ್, ಈ ಟ್ವೀಟ್ಗಳು ಸುಪ್ರೀಂಕೋರ್ಟ್ನ ಘನತೆಗೆ ಧಕ್ಕೆ ತರುವಂತೆ ಮತ್ತು ನ್ಯಾಯಾಲಯದ ತೀರ್ಪುಗಳ ಹಿಂದೆ ಬೇರೆ ಉದ್ದೇಶಗಳಿರುತ್ತವೆ ಎಂಬ ಅರ್ಥ ಬಿಂಬಿಸುತ್ತವೆ ಎಂದು ಆರೋಪಿಸಿದ್ದರು.

'ಇದರಲ್ಲಿ ಒದಗಿಸಲಾಗಿರುವ ಪ್ರತಿ ಕಾರ್ಟೂನುಗಳೂ ಸುಪ್ರೀಂಕೋರ್ಟ್ನ ನಿಂದನೆ ಮಾಡುತ್ತವೆ ಎನ್ನುವುದು ಮನವರಿಕೆಯಾಗಿದೆ. ಹೀಗಾಗಿ ಅವರ ವಿರುದ್ಧ ಪ್ರಕರಣಕ್ಕೆ ಅನುಮತಿ ನೀಡುತ್ತೇನೆ' ಎಂದು ವೇಣುಗೋಪಾಲ್ ಹೇಳಿದ್ದಾರೆ.












Click it and Unblock the Notifications