ಹೆಚ್ಚುತ್ತಿರುವ ಎಟಿಎಂ ದರೋಡೆ ಪ್ರಕರಣ: ಕೇಂದ್ರದ ಮಹತ್ವದ ನಿರ್ಧಾರ
ನವದೆಹಲಿ, ಡಿ 15 (ಪಿಟಿಐ): ಎಟಿಎಂ ಮತ್ತು ಎಟಿಎಂಗೆ ಹಣ ತುಂಬಿಸುವ ವಾಹನಗಳ ಮೇಲೆ ನಡೆಯುತ್ತಿರುವ ದರೋಡೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಲು ಕೇಂದ್ರ ಹಣಕಾಸು ಸಚಿವಾಲಯ ಮುಂದಾಗಿದೆ.
ರಾತ್ರಿ ಒಂಬತ್ತು ಗಂಟೆಯ ನಂತರ ಎಟಿಎಂಗಳಿಗೆ ಹಣ ಲೋಡ್ ಮಾಡದೇ ಇರಲು ಸರಕಾರೀ ಸ್ವಾಮ್ಯದ ಮತ್ತು ಖಾಸಗಿ ವಲಯದ ಬ್ಯಾಂಕುಗಳಿಗೆ ಕೇಂದ್ರ ಸರಕಾರ ಸೂಚಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೊತೆಗೆ, ಎಟಿಎಂಗೆ ಹಣ ತುಂಬಿಸುವ ಜವಾಬ್ದಾರಿ ವಹಿಸಿಕೊಂಡಿರುವ ಖಾಸಗಿ ಸಂಸ್ಥೆಗಳು, ಮಧ್ಯಾಹ್ನದೊಳಗೆ ಹಣವನ್ನು ಬ್ಯಾಂಕಿನಿಂದ ಪಡೆಯುವಂತೆ ಸೂಚಿಸುವ ನಿರ್ಧಾರಕ್ಕೆ ಬಂದಿದ್ದು, ರಿಸರ್ವ್ ಬ್ಯಾಂಕ್ ಮೂಲಕ ಈ ಪ್ರಸ್ತಾವನೆ ಸಲ್ಲಿಸಲು ಕೇಂದ್ರ ನಿರ್ಧರಿಸಿದೆ.

ಗ್ರಾಮೀಣ ಭಾಗದ ಎಟಿಎಂಗಳಿಗೆ ಸಂಜೆ ಆರು ಗಂಟೆಯೊಳಗೆ , ನಕ್ಲಲ್ ಪೀಡಿತ ಪ್ರದೇಶಗಳಲ್ಲಿನ ಎಟಿಎಂಗಳಿಗೆ ಅಪರಾಹ್ನ ನಾಲ್ಕು ಗಂಟೆಗೊಳಗೆ ಹಣ ತುಂಬಿಸುವ ಗಡುವು ನೀಡುವುದು. ಹಣ ತುಂಬಿಸಲು ಸಾಗುವ ವ್ಯಾನುಗಳಲ್ಲಿ ಸಿಸಿಟಿವಿ ಮತ್ತು ಜಿಪಿಎಸ್ ಕಡ್ಡಾಯವಾಗಿ ಅಳವಡಿಸುವುದು, ಒಂದು ಟ್ರಿಪ್ಪಿಗೆ ಐದು ಕೋಟಿಯ ಮೇಲೆ ನಗದು ನೀಡಬಾರದು ಎನ್ನುವ ನಿರ್ಬಂಧನೆ ಹೇರುವ ಅಂಶಗಳೂ ಪ್ರಸ್ತಾವನೆಯಲ್ಲಿದೆ.
ಬಂದೂಕು ಲೈಸೆನ್ಸ್ ಹೊಂದಿರುವ ಇಬ್ಬರು ಭದ್ರತಾ ಸಿಬ್ಬಂದಿಗಳು ವ್ಯಾನಿನಲ್ಲಿ ಇರುವುದು ಕಡ್ದಾಯ, ಜೊತೆಗೆ ಎಮರ್ಜೆನ್ಸಿಯಲ್ಲಿ ವ್ಯಾನ್ ಚಲಾವಣೆಯ ಅನುಭವ ಇರುವವರನ್ನು ಈ ಕೆಲಸಕ್ಕೆ ನೇಮಿಸುವಂತೆ ಸೂಚಿಸುವ ಅಂಶವೂ ಪ್ರಸ್ತಾವನೆಯಲ್ಲಿದೆ.
ಸುರಕ್ಷತೆಯ ದೃಷ್ಟಿಂದ ಕೇಂದ್ರ ಗೃಹ ಇಲಾಖೆ ಅನುಮೋದನೆ ನೀಡಿರುವ ಹೊಸ ನಿಯಮಗಳ ಅನ್ವಯ ಮೇಲಿನ ಎಲ್ಲಾ ಬದಲಾವಣೆ ಜಾರಿಗೆ ತರುವುದು ಅತ್ಯವಶ್ಯಕ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಸುಮಾರು ಎಂಟು ಸಾವಿರ ಎಟಿಎಂಗೆ ಹಣ ತುಂಬಿಸುವ ಸಂಸ್ಥೆಗಳು ಪ್ರತೀ ದಿನ ಹದಿನೈದು ಸಾವಿರ ಕೋಟಿಗಿಂತಲೂ ಅಧಿಕ ಹಣವನ್ನು ಬ್ಯಾಂಕ್, ಎಟಿಎಂ, ಕರೆನ್ಸಿ ಚೆಸ್ಟಿಗೆ ಸಾಗಿಸುತ್ತಿವೆ.












Click it and Unblock the Notifications