ಗಡಿಯಲ್ಲಿ ಹೈ ಅಲರ್ಟ್ : ಶಸ್ತ್ರಸನ್ನದ್ಧವಾಗಿದೆ ಭಾರತೀಯ ಸೇನೆ
ನವದೆಹಲಿ, ಅಕ್ಟೋಬರ್, 11 : ಪಾಕಿಸ್ತಾನದ ವಿರುದ್ಧ ಭಾರತ ಸೇನೆ ಸರ್ಜಿಕಲ್ ದಾಳಿ ನಡೆಸಿದಾಗಿನಿಂದ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಸಂದರ್ಭದಲ್ಲಿ ಪಾಕಿಸ್ತಾನದಿಂದ ದಾಳಿ ಬರುವ ಸಾಧ್ಯತೆ ಇದ್ದು, ಭಾರತೀಯ ಸೈನಿಕರು ಶಸ್ತ್ರ ಸನ್ನದ್ಧಗಿದ್ದಾರೆ.
ಭಾರತ ಸರ್ಕಾರವೂ ಸಂಪೂರ್ಣ ಸೇನೆಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದು, 'ಪಾಕಿಸ್ತಾನ ಸೈನಿಕರು ದಾಳಿ ಮಾಡಿದ್ದಲ್ಲಿ ನೀವು ಕೂಡ ಪ್ರತಿ ದಾಳಿ ಮಾಡಿ' ಎಂಬ ನಿರ್ದೇಶನವನ್ನೂ ನೀಡಿದೆ. ಸರ್ಕಾರದ ಈ ಬೆಂಬಲ ಸೈನಿಕರಲ್ಲಿ ಮತ್ತಷ್ಟು ಬಲ ತುಂಬಿದೆ.['ಸರ್ಜಿಕಲ್ ಆಪರೇಷನ್' ಅಂದರೆ ಏನು ಗೊತ್ತಾ?]
"ಗಡಿರೇಖೆಯಲ್ಲಿ ಭಾರತೀಯ ಸೈನಿಕರ ಹೋರಾಟವನ್ನು ಶ್ಲಾಘಿಸಿ ಇಡೀ ದೇಶವೆ ಮಾತನಾಡಿಕೊಳ್ಳುತ್ತಿದೆ. ಇದರಿಂದ ಇಡೀ ದೇಶವೆ ಸೈನಿಕರ ಬೆಂಬಲಕ್ಕಿದೆ ಎಂಬುದು ಸೈನಿಕರ ಸಂತಸವನ್ನು ದ್ವಿಗುಣಗೊಳಿಸಿದೆ" ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
''ದಾಳಿಗೆ ಪ್ರತಿದಾಳಿ ಎಂಬಂತೆ ದ್ವೇಷ ಸಾಧಿಸಬೇಕೆಂಬ ಬಯಕೆ ಭಾರತಕ್ಕಿಲ್ಲ. ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿದರೆ ಪ್ರತಿದಾಳಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ" ಎಂದು ಅವರು ಹೇಳಿದ್ದಾರೆ. [ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಹೇಗೆ? 10 ಬೆಳವಣಿಗೆಗಳು]
"ಗಡಿಯಲ್ಲಿ ವಿಷಮ ಪರಿಸ್ಥಿತಿ ಇದೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಹೀಗಾಗಿ ನಮ್ಮ ಸೈನಿಕರು ಎಂತಹ ಪರಿಸ್ಥಿತಿಯನ್ನು ಸಹ ಎದುರಿಸಲು ಶಸ್ತ್ರ ಸನ್ನದ್ಧರಾಗಿದ್ದಾರೆ. ಪಾಕಿಸ್ತಾನ ಯುದ್ಧಕ್ಕೆ ಪ್ರಚೋದನೆ ನೀಡಿದ್ದಲ್ಲಿ ನಮ್ಮ ಸೈನಿಕರೂ ಸಹ ತಕ್ಕ ಪ್ರತ್ಯುತ್ತರ ನೀಡಬಲ್ಲದು ಎಂದು ಅವರು ತಿಳಿಸಿದ್ದಾರೆ.