ವಿಧಾನಸಭೆ ಉಪ ಚುನಾವಣೆ: 5 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ
ಎಂಟು ರಾಜ್ಯಗಳಲ್ಲಿ ನಡೆದ ಉಪ ಚುನಾವಣೆ ಪೈಕಿ ಐದರಲ್ಲಿ ಗೆಲುವು ಸಾಧಿಸಿದೆ ಬಿಜೆಪಿ. ಆದರೆ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಎರಡೂ ಸ್ಥಾನಗಳಾನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಎಲ್ಲೆಡೆಯ ಫಲಿತಾಂಶದ ವಿವರ ಇಲ್ಲಿದೆ
ಬೆಂಗಳೂರು, ಏಪ್ರಿಲ್ 13: ಉಪಚುನಾವಣೆ ನಡೆದ ಎಂಟು ರಾಜ್ಯಗಳ ಪೈಕಿ ಐದರಲ್ಲಿ ಬಿಜೆಪಿ ಜಯ ಗಳಿಸಿದೆ. ದೆಹಲಿ, ಅಸ್ಸಾಂ, ರಾಜಸ್ತಾನ, ಹಿಮಾಚಲ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಕರ್ನಾಟಕದಲ್ಲಿ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಆತ್ಮವಿಶ್ವಾಸ ಮೂಡಿಸುವಂಥ ಗೆಲುವು ಪಡೆದಿದೆ.
ಇನ್ನು ಪಶ್ಚಿಮ ಬಂಗಾಲದ ಕಾಂತಿ ದಕ್ಷಿಣ್ ನಲ್ಲಿ ಟಿಎಂಸಿ ಮರಳಿ ಗೆಲ್ಲುವಲ್ಲಿ ಸಫಲವಾಗಿದೆ. ಇಲ್ಲಿ ಬಿಜೆಪಿಗೆ ಸೋಲಿನ ಹೊರತಾಗಿ ಸಮಾಧಾನ ಪಡುವ ಅಂಶವಿದೆ. ಏಕೆಂದರೆ ಎಡಪಕ್ಷಗಳು, ಕಾಂಗ್ರೆಸ್ ಗಿಂತ ಹೆಚ್ಚಿನ ಮತಗಳನ್ನು ಬಿಜೆಪಿ ಪಡೆದಿದೆ. ಜಾರ್ಖಂಡ್ ನಲ್ಲಿ ಜೆಎಂಎಂನ ಸಿಮನ್ ಮರಾಂಡಿ ಮೊದಲ ಸುತ್ತಿನ ಮತ ಎಣಿಕೆಯಿಂದ ಮುನ್ನಡೆ ಸಾಧಿಸಿದರು.[ಕಾಂಗ್ರೆಸ್ ಗೆದ್ದಿದ್ದಕ್ಕೆ ದೇವೇಗೌಡರಿಗೆ ಧನ್ಯವಾದ ಹೇಳಿದ ಸಿಎಂ!!]
ಅಂದಹಾಗೆ, ಕರ್ನಾಟಕದಲ್ಲಿ ನಡೆದ ಎರಡು ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಬಹು ಮುಖ್ಯವಾದ ವಿಚಾರವೊಂದನ್ನು ಹೇಳಬೇಕು. ಗೆಲುವಿನ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೆಡಿಎಸ್ ನ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಧನ್ಯವಾದ ಹೇಳಿದ್ದಾರೆ. ಏಕೆ ಗೊತ್ತಾ ಆ ಪಕ್ಷದಿಂದ ಅಭ್ಯರ್ಥಿಯನ್ನು ಹಾಕದಿದ್ದಕ್ಕೆ.
ರಾಜಕಾರಣದಲ್ಲಿ ಯಾರು, ಯಾವಾಗ ಮಿತ್ರರಾಗುತ್ತಾರೋ? ಯಾರು, ಯಾವಾಗ ಶತ್ರುಗಳಾಗುತ್ತಾರೋ ತಿಳಿಯುವುದಿಲ್ಲ.
ಅಸ್ಸಾಂನಲ್ಲಿ 1,371 'ನೋಟಾ'
ಅಸ್ಸಾಂನ ಧೇಮಾಜಿ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ರಣೋಜ್ ಪೆಗು 75,217 ಮತ ಪಡೆದು ವಿಜಯಿಯಾದರು. ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಾಬುಲ್ ಸೋನೋವಾಲ್ ಅವರನ್ನು 9,285 ಮತಗಳ ಅಂತರದಿಂದ ಮಣಿಸಿದರು. ಒಟ್ಟಾರೆ ಮತ ಪ್ರಮಾಣದಲ್ಲಿ ಶೇ 50.13ರಷ್ಟು ವೋಟು ಪಡೆದಿದೆ. 1,371 'ನೋಟಾ' ಮತಗಳು ಅಸ್ಸಾಂನಲ್ಲಿ ಚಲಾವಣೆಯಾಗಿವೆ.
ರಾಜಸ್ತಾನದಲ್ಲಿ ಬಿಜೆಪಿಗೆ ದೊಡ್ಡ ಗೆಲುವು
ರಾಜಸ್ತಾನದ ಧೋಲ್ ಪುರ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ರಾಣಿ ಕುಷವಾ 29,605 ಮತಗಳಿಂದ ಜಯಿಸಿದ್ದಾರೆ. ಶೋಭಾ 61,707 ಮತ ಗಳಿಸಿದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬನ್ವಾರಿ ಲಾಲ್ ಶರ್ಮಾ 32,102 ಮತ ಗಳಿಸಿದ್ದಾರೆ. ಒಟ್ಟಾರೆ ಚಲಾವಣೆಯಾದ ಮತಗಳಲ್ಲಿ ಬಿಜೆಪಿ ಶೇ 64.16ರಷ್ಟು ಗಳಿಸಿದೆ. 559 ಮಂದಿ 'ನೋಟಾ' ಚಲಾಯಿಸಿದ್ದಾರೆ.
ಕರ್ನಾಟಕದಲ್ಲಿ ಎರಡೂ ಸ್ಥಾನಗಳನ್ನು ಮರಳಿ ತೆಕ್ಕೆಗೆ ತೆಗೆದುಕೊಂಡ ಕಾಂಗ್ರೆಸ್
ಆಡಳಿತಾರೂಢ ಕಾಂಗ್ರೆಸ್ ಕರ್ನಾಟಕದಲ್ಲಿ ಎರಡೂ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್ 10,877 ಹಾಗೂ ನಂಜನಗೂಡಲ್ಲಿ ಕಳಲೆ ಕೇಶವ ಮೂರ್ತಿ 21,334 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಗುಂಡ್ಲುಪೇಟೆಯ ಬಿಜೆಪಿ ಅಭ್ಯರ್ಥಿ 79,383 ಹಾಗೂ ನಂಜನಗೂಡು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ 64,878 ಮತ ಗಳಿಸಿದರು,
ಹಿಮಾಚಲ ಪ್ರದೇಶದಲ್ಲೂ ಕೇಸರಿ ಧ್ವಜ
ಹಿಮಾಚಲ ಪ್ರದೇಶದ ಭೋರಂಜ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಅನಿಲ್ ಧಿಮನ್ 8,290 ಮತಗಳ ಅಂತರದಿಂದ ಸುಲಭ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್ ನ ಪರಿಮಳಾ ದೇವಿ 16,144 ಮತ ಪಡೆಯಲು ಸಾಧ್ಯವಾಗಿದೆ. 263 ನೋಟಾ ಮತಗಳು ಚಲಾವಣೆಯಾಗಿವೆ.
ಪಶ್ಚಿಮ ಬಂಗಾಲದಲ್ಲಿ ಮಮತಾ ಗೆಲುವು
ನಿರೀಕ್ಷೆಯಂತೆಯೇ ಪಶ್ಚಿಮ ಬಂಗಾಲದ ಕಾಂತಿ ದಕ್ಷಿಣ್ ಕ್ಷೇತ್ರದಲ್ಲಿ ಟಿಎಂಸಿಯ ಚಂದ್ರಿಮಾ ಭಟ್ಟಾಚಾರ್ಯ 42,526 ಮತಗಳ ಅಂತರದಿಂದ ಜಯ ಗಳಿಸಿದೆ. ಇಲ್ಲಿ ಬಿಜೆಪಿಯು ಎಡಪಕ್ಷಗಳು ಹಾಗೂ ಕಾಂಗ್ರೆಸ್ ಗಿಂತ ಹೆಚ್ಚಿನ ಮತಗಳನ್ನು ಪಡೆದಿದೆ. ಟಿಎಂಸಿ ಗೆಲುವು ಇಲ್ಲಿ ಖಾತ್ರಿಯಾಗಿದ್ದರೂ ಬಿಜೆಪಿ ಸ್ವಲ್ಪ ಮಟ್ಟಿಗೆ ಹೋರಾಟ ನೀಡಿತು. 1,241 ನೋಟಾ ಚಲಾವಣೆಯಾದವು.
ರಜೌರಿ ಗಾರ್ಡನ್ ನಲ್ಲಿ ಎಎಪಿಗೆ ಸೋಲು
ಆಡಳಿತಾರೂಢ ಆಮ್ ಆದ್ಮಿ ಪಕ್ಷವು ದೆಹಲಿಯ ರಜೌರಿ ಗಾರ್ಡನ್ ಉಪ ಚುನಾವಣೆಯಲ್ಲಿ ಸೋತಿದೆ. ಬಿಜೆಪಿ ಗೆಲುವಿನೆಡೆಗೆ ಹೆಜ್ಜೆ ಹಾಕಿದ್ದರೆ, ಕಾಂಗ್ರೆಸ್ ಹಿನ್ನಡೆ ಹಾಗೂ ಆಪ್ ಮೂರನೇ ಸ್ಥಾನದಲ್ಲಿತ್ತು. ಬಿಜೆಪಿ-ಶಿರೋಮಣಿ ಅಕಾಲಿ ದಳದ ಮಂಜಿಂದರ್ ಸಿಂಗ್ ಸಿರ್ಸಾ 14,652 ಮತಗಳ ಅಂತರದಿಂದ ಜಯ ಗಳಿಸಿದರೆ, ಆಪ್ ಅಭ್ಯರ್ಥಿ 10,243 ಮತ ಗಳಿಸಲಷ್ಟೇ ಸಾಧ್ಯವಾಯಿತು. 641 ಮಂದಿ ನೋಟಾ ಚಲಾಯಿಸಿದ್ದಾರೆ.