'ಅಸಾನಿ' ಚಂಡಮಾರುತ: ಐಎಂಡಿ ಎಚ್ಚರಿಕೆ- NDRF ನಿಯೋಜನೆ
ನವದೆಹಲಿ ಮಾರ್ಚ್ 18: ಈ ವರ್ಷದ ಮೊದಲ ಚಂಡಮಾರುತ ಮಾರ್ಚ್ 21 ರ ಸುಮಾರಿಗೆ ಬಂಗಾಳ ಕೊಲ್ಲಿಯಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಚಂಡಮಾರುತವನ್ನು 'ಅಸನಿ' ಎಂದು ಕರೆಯಲಾಗುತ್ತದೆ. ಈ ಹೆಸರನ್ನು ಶ್ರೀಲಂಕಾ ಸೂಚಿಸಿದೆ. ಇದು ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್ ಕಡೆಗೆ ಚಲಿಸಬಹುದು ಎಂದು ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಕಡಿಮೆ ಒತ್ತಡದ ಪ್ರದೇಶ (ಎಲ್ಪಿಎ) ಮಂಗಳವಾರ ರೂಪುಗೊಂಡಿದ್ದು, ಪೂರ್ವ- ಈಶಾನ್ಯ ಭಾಗದತ್ತ ಚಲಿಸುವ ನಿರೀಕ್ಷೆ ಇದೆ. ಶನಿವಾರದ ವೇಳೆಗೆ ಎಲ್ಪಿಎ ದಟ್ಟಗೊಳ್ಳಲಿದೆ. ಇದು ಭಾರತದ ಕರಾವಳಿಯನ್ನು ದಾಟುವ ಸಾಧ್ಯತೆಯಿಲ್ಲ. ಆದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಯನ್ನು ನಿರೀಕ್ಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ವ್ಯವಸ್ಥೆಯು ಮಾರ್ಚ್ 21ರಂದು ಚಂಡಮಾರುತದ ಬಿರುಗಾಳಿಯ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಮಾರ್ಚ್ 22ರವರೆಗೂ ಉತ್ತರ- ವಾಯವ್ಯ ದಿಕ್ಕಿನತ್ತ ಮುಂದುವರಿಯಲಿದೆ. ಇದರಿಂದಾಗಿ ಈಗಾಗಲೇ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗುವ ಚಂಡಮಾರುತವನ್ನು ಅಂಡಮಾನ್ ಮತ್ತು ನಿಕೋಬಾರ್ನ ಕೇಂದ್ರ ಸಚಿವಾಲಯಗಳು/ಏಜೆನ್ಸಿಗಳು ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಪರಿಶೀಲಿಸಿದ್ದಾರೆ ಎಂದು ಗೃಹ ಸಚಿವಾಲಯ ಟ್ವೀಟ್ನಲ್ಲಿ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿನ ಕಡಿಮೆ ಒತ್ತಡದ ಪ್ರದೇಶವು ಮಾರ್ಚ್ 21 ರ ವೇಳೆಗೆ ಸೈಕ್ಲೋನಿಕ್ ಚಂಡಮಾರುತವಾಗಿ ತೀವ್ರಗೊಳ್ಳಬಹುದು ಎಂದು IMD ಹೇಳಿದೆ.
ನಂತರ ಈ ಚಂಡಮಾರುತ ಉತ್ತರ-ಈಶಾನ್ಯ ದಿಕ್ಕಿನತ್ತ ಚಲಿಸಲಿದೆ ಮತ್ತು ಬಾಂಗ್ಲಾದೇಶ ಹಾಗೂ ಪಕ್ಕದ ಉತ್ತರ ಮ್ಯಾನ್ಮಾರ್ ಕರಾವಳಿಗೆ ಮಾರ್ಚ್ 23ರಂದು ತಲುಪಲಿದೆ ಎಂದು ಐಎಂಡಿ (IMD) ತಿಳಿಸಿದೆ. ಬಂಗಾಳ ಕೊಲ್ಲಿಯ ಆಗ್ನೇಯ ಭಾಗ ಮತ್ತು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಗುರುವಾರ ಹಾಗೂ ಶುಕ್ರವಾರ ಸಮುದ್ರ ಪರಿಸ್ಥಿತಿ ಕಠಿಣಗೊಳ್ಳುವ ಸಾಧ್ಯತೆ ಇದೆ.
♦ Fishermen are advised not to venture into southeast Bay of Bengal during 19th to 21st March and into Andaman Sea and along & off Andaman and Nicobar Islands during 19th to 22nd March.
— India Meteorological Department (@Indiametdept) March 16, 2022
ಪೋರ್ಟ್ ಬ್ಲೇರ್ನಲ್ಲಿ NDRF ತಂಡ ನಿಯೋಜನೆ
ಈ ಚಂಡಮಾರುತವನ್ನು ಎದುರಿಸಲು ಸನ್ನದ್ಧತೆಯ ಬಗ್ಗೆ ಮಾಹಿತಿ ನೀಡಿದ ಸಚುವಾಕಯ, ಪೋರ್ಟ್ ಬ್ಲೇರ್ನಲ್ಲಿ ಎನ್ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದೆ. ಹೆಚ್ಚುವರಿ ತಂಡಗಳು ಸಿದ್ಧವಾಗಿದ್ದು, ಅಗತ್ಯವಿದ್ದರೆ ಅವರನ್ನು ಏರ್ ಲಿಫ್ಟ್ ಮಾಡಲಾಗುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ಆಡಳಿತ ಜನರ ಸುರಕ್ಷತೆ ಮತ್ತು ಮೂಲಸೌಕರ್ಯ ಮರುಸ್ಥಾಪನೆಗಾಗಿ ತುರ್ತು ಸರಬರಾಜು ಮತ್ತು ಕ್ರಮಗಳ ಸಾಕಷ್ಟು ದಾಸ್ತಾನುಗಳೊಂದಿಗೆ ಸಿದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮೀನುಗಾರರಿಗೆ ಸೂಚನೆ
ಮೀನುಗಾರರಿಗೆ ಸಮುದ್ರದಿಂದ ದೂರ ಉಳಿಯುವಂತೆ ಮೀನು ಹಿಡಿಯದಂತೆ ಸೂಚನೆ ನೀಡಲಾಗಿದೆ. ಇದಲ್ಲದೇ ಪ್ರವಾಸಿಗರಿಗೆ ಸಮುದ್ರ ತೀರ ಪ್ರದೇಶಗಳಿಗೆ ಭೇಟಿಗೆ ಅವಕಾಶ ಇಡದಂತೆ ಸೂಚನೆ ನೀಡಲಾಗಿದೆ. ಮೀನುಗಾರರು ಆದಷ್ಟು ಬೇಗ ಸಮುದ್ರದಿಂದ ವಾಪಸಾಗುವಂತೆ ಸೂಚಿಸಲಾಗಿದೆ. ಇದರೊಂದಿಗೆ, ಇದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಅನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಅಗತ್ಯವಿದ್ದರೆ ಅವರ ಸಹಾಯವನ್ನು ತೆಗೆದುಕೊಳ್ಳಲಾಗುವುದು. ಭಾನುವಾರ ಗಾಳಿಯ ವೇಗ ಗಂಟೆಗೆ 70 ರಿಂದ 80 ಕಿಮೀ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ, ಮರುದಿನ ಗಂಟೆಗೆ 90 ಕಿಮೀ ತಲುಪಬಹುದು ಎಂದು ಹೇಳಿದೆ.
ದಕ್ಷಿಣ ಬಂಗಾಳ ಕೊಲ್ಲಿಯ ಕೇಂದ್ರ ಭಾಗಗಳು ಮತ್ತು ಪಕ್ಕದ ಸಮಭಾಜಕ ಹಿಂದೂ ಮಹಾಸಾಗರದಲ್ಲಿ ಬುಧವಾರ ಹಾಗೂ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರ ಭಾಗದಲ್ಲಿ ಗುರುವಾರ ಮತ್ತು ಶುಕ್ರವಾರ ಮೀನುಗಾರಿಕೆಗೆ ಇಳಿಯದಂತೆ ಹವಾಮಾನ ಇಲಾಖೆಯು ಮೀನುಗಾರರಿಗೆ ಸೂಚನೆ ನೀಡಿದೆ. ಜತೆಗೆ ಶನಿವಾರ ಮತ್ತು ಮಂಗಳವಾರದ ನಡುವೆ ಅಂಡಮಾನ್ ಸಮುದ್ರ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉದ್ದಕ್ಕೂ ಮೀನುಗಾರಿಕೆ ನಡೆಸದಂತೆ ಕೂಡ ಸಲಹೆ ಕೊಟ್ಟಿದೆ.












Click it and Unblock the Notifications