Breaking; ಭಾರತ-ಚೀನಾ ಗಡಿ ಬಳಿ 19 ಕಾರ್ಮಿಕರು ನಾಪತ್ತೆ
ನವದೆಹಲಿ, ಜುಲೈ 19: ಭಾರತ- ಚೀನಾ ವಾಸ್ತವಿಕ ನಿಯಂತ್ರಣ ರೇಖೆಯಿಂದ ಸ್ಪಲ್ಪ ದೂರದಲ್ಲಿನ ಗಡಿ ರಸ್ತೆ ನಿರ್ಮಾಣ ಸ್ಥಳದಿಂದ ಎರಡು ವಾರಗಳ ಹಿಂದೆ 19 ಕಾರ್ಮಿಕರು ನಾಪತ್ತೆಯಾಗಿದ್ದರು. ನಾಪತ್ತೆಯಾದ ಕಾರ್ಮಿಕರ ಗುಂಪನ್ನು ಹುಡುಕಲು ಅರುಣಾಚಲ ಪ್ರದೇಶದ ದೂರದ ಕುರುಂಗ್ ಕುಮೆ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಇದರ ನೆಡುವೆಯೇ ಕುಮೇ ನದಿಯಲ್ಲಿ ಕಾರ್ಮಿಕರೊಬ್ಬರ ಮೃತದೇಹ ಪತ್ತೆಯಾಗಿರುವ ಬಗ್ಗೆ ವರದಿಗಳಿವೆ. ಆದರೆ, ಇದು ಅಧಿಕಾರಿಗಳಿಂದ ದೃಢಪಟ್ಟಿಲ್ಲ. ಈ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ತಂಡಗಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಣೆಯಾಗಿರುವ ಈ 19 ವಲಸೆ ಕಾರ್ಮಿಕರು ಅಸ್ಸಾಂನಿಂದ ಬಂದಿದ್ದರು. ಇವರನ್ನು ಕರೆ ತಂದಿದ್ದ ಗುತ್ತಿಗೆದಾರರ ದೂರಿನ ಪ್ರಕಾರ, ಜುಲೈ 5 ರಂದು ಡಾಮಿನ್ ವೃತ್ತದಲ್ಲಿರುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ರಸ್ತೆ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕರು ತಮ್ಮ ಶಿಬಿರಗಳಿಂದ ಕಾಣೆಯಾಗಿದ್ದಾರೆ.

ಇವರು ಕಳೆದ ವಾರ ಈದ್ ಆಚರಿಸಲು ಅಸ್ಸಾಂನಲ್ಲಿರುವ ತಮ್ಮ ಮನೆಗಳಿಗೆ ತೆರಳಲು ರಜೆ ಕೇಳಿದ್ದರು. ಆದರೆ, ರಜೆ ನೀಡಲು ನಿರಾಕರಿಸಲಾಗಿತ್ತು ಎಂದು ವರದಿಯಾಗಿದೆ. ಜುಲೈ 13 ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ವಾರ ಸಲ್ಲಿಸಿರುವ ನಾಪತ್ತೆ ವರದಿ ಪ್ರಕಾರ, ಕೆಲಸದ ನಿರ್ಮಾಣ ಸ್ಥಳದಿಂದ ಕಾಣೆಯಾಗಿರುವ 19 ಕಟ್ಟಡ ಕಾರ್ಮಿಕರು ಇನ್ನೂ ಪತ್ತೆಯಾಗಿಲ್ಲ. ನದಿ ಪ್ರದೇಶದಲ್ಲಿ ಕಂಡ ಮೃತದೇಹದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಿದೆ. ಅದನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ತಂಡ ಕಳುಹಿಸಿದ್ದೇವೆ.
ನಮ್ಮ ಶೋಧ ಕಾರ್ಯಾಚರಣೆಗಳು ಮುಂದುವರೆದಿದೆ. ನಿರ್ಮಾಣ ಹಂತದಲ್ಲಿರುವ ರಸ್ತೆಯು ಗಡಿ ರಸ್ತೆಯಾಗಿದ್ದು, ಅದು ಡಾಮಿನ್ ವೃತ್ತದಿಂದ ದೂರದ ಗಡಿ ಗ್ರಾಮಗಳಿಗೆ ದಾರಿ ಮಾಡಿಕೊಡುತ್ತದೆ. ಇದು ಅತ್ಯಂತ ನಿರ್ಣಾಯಕ ಆಯಕಟ್ಟಿನ ರಸ್ತೆಯಾಗಿದೆ ಎಂದಿದ್ದಾರೆ ಎಂದು ಎನ್ಡಿಟಿವಿ ಕುರುಂಗ್ ಕುಮೇ ಜಿಲ್ಲೆಯ ಉಪ ಆಯುಕ್ತ ನಿಘೀ ಬೆಂಗಿಯಾ ಅವರನ್ನು ಉಲ್ಲೇಖಿಸಿದೆ.
ಇದರ ಜೊತೆಗೆ ಅಸ್ಸಾಂನಿಂದ ವಲಸೆ ಕಾರ್ಮಿಕರನ್ನು ಕರೆತಂದ ಅಸ್ಸಾಂನ ಲಖಿಂಪುರದ ಉಪ ಗುತ್ತಿಗೆದಾರನ ವಿರುದ್ಧ ಮತ್ತೊಂದು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 19 ಕಾರ್ಮಿಕರು ಅಸ್ಸಾಂನ ಕೊಕ್ರಜಾರ್ ಮತ್ತು ಧುಬ್ರಿ ಗಡಿ ಪ್ರದೇಶದವರು ಎಂಬ ಮಾಹಿತಿ ಇದೆ.












Click it and Unblock the Notifications