ನಿರ್ಭಯಾ ಅತ್ಯಾಚಾರ ಸಣ್ಣ ಘಟನೆ: ಜೇಟ್ಲಿ ವಿಷಾದ
ನವದೆಹಲಿ, ಆ. 22 : ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು'ಒಂದು ಚಿಕ್ಕ ಘಟನೆ' ಎಂದಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಹೇಳಿಕಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ನಾನು ಯಾವುದೇ ಉದ್ದೇಶ ಇಟ್ಟುಕೊಂಡು ಅಂಥ ಹೇಳಿಕೆ ನೀಡಲಿಲ್ಲ. ಮಹಿಳೆಯರ ಪರವಾಗಿ ಮತ್ತು ಮಹಿಳಾ ದೌರ್ಜನ್ಯದ ವಿರೋಧವಾಗಿಯೇ ನಮ್ಮ ತತ್ವ ಸಿದ್ಧಾಂತಗಳು ನಡೆದುಕೊಂಡು ಬಂದಿವೆ ಎಂದು ಹೇಳಿದ್ದಾರೆ.

ದೇಶಕ್ಕೆ ಮತ್ತು ಪ್ರವಾಸೋದ್ಯಮಕ್ಕೆ ಅಪಾರ ನಷ್ಟವಾಗಿದ್ದರಿಂದ ನೋವಿನಲ್ಲಿ ಆ ರೀತಿ ಮಾತಾಡಿದ್ದೆ ಹೊರತು ಯಾವುದೇ ದುರುದ್ದೇಶ ಇರಲಿಲ್ಲ. ಇಂಥ ವಿಷಯಗಳಲ್ಲಿ ಬಹಳ ಸೂಕ್ಷ್ಮವಾಗಿ ವರ್ತಿಸಬೇಕಾಗಿತ್ತು. ನಾನೇ ಬಾಯ್ತಪ್ಪಿನಿಂದ ಈ ರೀತಿ ಹೇಳಿದ್ದೇನೆ ಎಂದಿದ್ದಾರೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಜನರು ಸರಿಯಾದ ರೀತಿಯಲ್ಲೇ ಜೇಟ್ಲಿ ಹೇಳಿಕೆಗೆ ತಿರುಗೇಟು ನೀಡಿದ್ದರು.
ಒಂದು ಚಿಕ್ಕ ಅತ್ಯಾಚಾರ ದೇಶದ ಪ್ರವಾಸೋದ್ಯಮಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತದೆ ಎಂಬ ಕಲ್ಪನೆಯೂ ನಮಗಿರಲಿಲ್ಲ ಎಂದು ದೆಹಲಿಯಲ್ಲಿ ಗುರುವಾರ ನಡೆದ ಎಲ್ಲ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ಹೇಳಿದ್ದರು.
ಈ ಬಗ್ಗೆ ಟ್ವಿಟರ್ನಲ್ಲಿ ದಾಳಿ ನಡೆಸಿದ್ದ ನಾಗರಿಕರು, ಜೇಟ್ಲಿ ಹೇಳಿಕೆಯನ್ನು ಖಂಡಿಸಿದ್ದರು. ಜತೆಗೆ ರೇಪ್ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ನಿಹಾಲ್ ಚಂದ್ ಕೂಡಾ ಟೀಕಾ ಪ್ರಹಾರಕ್ಕೆ ಒಳಗಾಗಿದ್ದರು.
ನಿಹಾಲ್ ಚಂದ್ ಮೋದಿ ಸರ್ಕಾರದಲ್ಲಿರಲು ಕಾರಣವೇನೆಂಬುದು ಗೊತ್ತಾಯಿತು, ಭಾರತಕ್ಕೆ ಈಗ ಒಳ್ಳೆ ದಿನ ಬರುತ್ತಿದೆ. ಬಿಜೆಪಿಯವರ ಪ್ರಕಾರ ದೊಡ್ಡ ಘಟನೆ ಅಂದರೆ ಏನು? ಎಂಬ ನೂರಾರು ರೀತಿಯ ಪ್ರಶ್ನೆಗಳು, ಪ್ರತಿಕ್ರಿಯೆಗಳು ಹರಿದಾಡಿದ್ದವು.
ಅಲ್ಲದೇ ನಿರ್ಭಯಾ ಕುಟುಂಬ ಬಿಜೆಪಿ ಪ್ರಕರಣವನ್ನು ಕೇವಲ ಚುನಾವಣೆ ಲಾಭಕ್ಕೆ ಬಳಸಿಕೊಂಡಿತೇ ವಿನಃ ನೈಜ ಕಾಳಜಿ ತೋರಿಸಲಿಲ್ಲ ಎಂದು ಆರೋಪಿಸಿತ್ತು.
ಅರುಣ್ ಜೇಟ್ಲಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ಇನ್ನೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.












Click it and Unblock the Notifications