ಅರಾವಳಿ ಪರ್ವತ ಜನಾಂದೋಲನಕ್ಕೆ ಜಯ: ಹೊಸ ಗಣಿಗಾರಿಕೆ ಇಲ್ಲ ಎಂದ ಕೇಂದ್ರ ಸರ್ಕಾರ
ನವ ದೆಹಲಿ: ದೇಶದಲ್ಲಿ ಈಚೆಗೆ ಭಾರೀ ಸದ್ದು ಮಾಡಿದ್ದ ಹಾಗೂ ಜನಾಂದೋಲನಕ್ಕೆ ಕಾರಣವಾಗಿದ್ದ ಅರಾವಳಿ ಗಣಿಗಾರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಕೊನೆಗೂ ಜನರ ಆಂದೋಲನಕ್ಕೆ ಮಣಿದಿದೆ. ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ನಾಲ್ಕು ರಾಜ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದಂತಹ ಅರಾವಳಿ ಗಣಿಗಾರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ರಾಜಸ್ಥಾನದ ಅರಾವಳಿ ಭಾಗದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರದಲ್ಲಿ ದೇಶದಾದ್ಯಂತ ಭಾರೀ ಆಂದೋಲನಗಳು ಶುರುವಾಗಿದ್ದವು. ಕೊನೆಗೂ ಜನರ ಆಂದೋಲನಕ್ಕೆ ಮಣಿದಿರುವ ಕೇಂದ್ರ ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಅರಾವಳಿಯಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೇಂದ್ರ ಸರ್ಕಾರವು ಆದೇಶ ಮಾಡಿದ್ದು, ಇದು ನಿಜಕ್ಕೂ ಜನರ ಜಯ ಎಂದೇ ಪರಿಗಣಿಸಲಾಗುತ್ತಿದೆ. ಸುಸ್ಥಿರ ಗಣಿಗಾರಿಕೆಗಾಗಿ ಸಮಗ್ರ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸುವ ವರೆಗೆ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ಸುಪ್ರೀಂ ಕೋರ್ಟ್ ಸ್ಥಗಿತಗೊಳಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಆದೇಶವನ್ನು ಹೊರಡಿಸಲಾಗಿದೆ.

ರಾಜ್ಯಗಳಿಗೆ ಸಂದೇಶ
ಇನ್ನು ಅರಾವಳಿ ಪರ್ವತ ಶ್ರೇಣಿಯಲ್ಲಿ ಹೊಸದಾಗಿ ಗಣಿಗಾರಿಕೆ ನಡೆಸಬಾರದು ಎನ್ನುವ ಮಹತ್ವದ ಆದೇಶವನ್ನು ಇದೀಗ ಮಾಡಲಾಗಿದೆ. ಅಕ್ರಮ ಗಣಿಗಾರಿಕೆಯಿಂದ ದೆಹಲಿಯಿಂದ ಗುಜರಾತ್ ವರೆಗಿನ ಸಂಪೂರ್ಣ ಅರಾವಳಿ ಪರ್ವತ ಶ್ರೇಣಿಯ ಸಂರಕ್ಷಣೆ ಹಾಗೂ ರಕ್ಷಣೆಯ ಪ್ರಮುಖ ಹೆಜ್ಜೆ ಇರಿಸಲಾಗಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC) ಅರಾವಳಿಯಲ್ಲಿ ಯಾವುದೇ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿದೆ. ಈ ಸಂಬಂಧ ಈ ಭಾಗದ ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ಇನ್ನು ಅರಾವಳಿ ಪರ್ವತ ಶ್ರೇಣಿಯಲ್ಲಿ ಹೊಸ ಗಣಿಗಾರಿಕೆ ನಿಷೇಧವು ಸಂಪೂರ್ಣ ಅರಾವಳಿ ಭೂದೃಶ್ಯದಾದ್ಯಂತ ಏಕರೂಪವಾಗಿ ಅನ್ವಯವಾಗಲಿದೆ. ಈ ವ್ಯಾಪ್ತಿಯ ಸಮಗ್ರತೆಯನ್ನು ಕಾಪಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಕೇಂದ್ರ ಸರ್ಕಾರವು ಹೇಳಿದೆ.
ಅಲ್ಲದೇ ಗುಜರಾತಿನಿಂದ ರಾಷ್ಟ್ರೀಯ ರಾಜಧಾನಿ ಪ್ರದೇಶ / ದೆಹಲಿ ಮತ್ತು ಎನ್ಸಿಆರ್ ವಿಸ್ತರಿಸಿರುವ ನಿರಂತರ ಭೂವೈಜ್ಞಾನಿಕ ಪರ್ವತವಾಗಿ ಅರಾವಳಿಗಳನ್ನು ಸಂರಕ್ಷಿಸಲು ಮತ್ತು ಎಲ್ಲಾ ಅನಿಯಂತ್ರಿತ ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಲು ನಿರ್ದೇಶನ ನೀಡಿರುವುದಾಗಿ ತಿಳಿಸಲಾಗಿದೆ.
ದೇಶದಾದ್ಯಂತ ಭಾರೀ ಹೋರಾಟ
ಇನ್ನು ಈಚೆಗೆ ಅರಾವಳಿ ಪರ್ವತ ಶ್ರೇಣಿಯಲ್ಲಿ ಹೊಸ ಗಣಿಗಾರಿಕೆ ಪ್ರಾರಂಭ ಮಾಡುವ ನಿರ್ಧಾರ ಹಾಗೂ ಕೇಂದ್ರ ಸರ್ಕಾರವು ಪರ್ವತಗಳಿಗೆ ಈಚೆಗೆ ನೀಡಿದ್ದ ವ್ಯಾಖ್ಯಾನವು ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ರಾಜಸ್ಥಾನ ಸೇರಿದಂತೆ ದೇಶದಾದ್ಯಂತ ಪರಿಸರ ಪ್ರೇಮಿಗಳು ಸೇರಿದಂತೆ ಹಲವರು ಈ ನಿರ್ಧಾರವನ್ನು ವಿರೋಧಿಸಿ, ಬೀದಿಗೆ ಇಳಿದು ಪ್ರತಿಭಟನೆ ಮಾಡಿದ್ದರು.
ದೆಹಲಿ ಸೇರಿದಂತೆ ಈಗಾಗಲೇ ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ವಾಯುಮಾಲಿನ್ಯ ಮಿತಿ ಮೀರಿದೆ. ದೆಹಲಿ ಮತ್ತು ಎನ್ಸಿಆರ್ನಲ್ಲಿ ಜನ ಉಸಿರಾಡುವುದಕ್ಕೂ ಸಮಸ್ಯೆ ಎದುರಿಸುತ್ತಿದ್ದಾರೆ. ಈ ರೀತಿ ಇರುವಾಗ ಪರಿಸರ ಸಂರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಅರಾವಳಿ ಭಾಗದ ಹೊಸ ಗಣಿಗಾರಿಕೆಯು ಉತ್ತರ ಭಾರತ ಶೇ 25% ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿರೋಧ ವ್ಯಕ್ತವಾಗಿತ್ತು.












Click it and Unblock the Notifications