ಬೀದಿ ಕಾಮಣ್ಣರ ಬೆಂಡೆತ್ತುವ ಕಾರ್ಯಾಚರಣೆ ಶುರು ಮಾಡಿದ ಉ.ಪ್ರ ಪೊಲೀಸರು
ಲಖನೌ, ಮಾರ್ಚ್ 21: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆದ ತಕ್ಷಣವೇ ಚುನಾವಣೆ ಪ್ರಚಾರದ ವೇಳೆ ನೀಡಿದ್ದ ಭರವಸೆಗಳನ್ನೆಲ್ಲ ಈಡೇರಿಸುವ ಹುಕಿಯಲ್ಲಿ ತತ್ ಕ್ಷಣದ ಆದೇಶಗಳನ್ನು ಹೊರಡಿಸಿದರು. ಅಗ ಆತ ಭಾರೀ ಸುದ್ದಿಯಾದರು. ಈಗ ನೋಡಿ, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ತಮ್ಮ ಭರವಸೆ ಈಡೇರಿಸಲು ನಿರ್ಧರಿಸಿದಂತಿದೆ.
ರಸ್ತೆಯಲ್ಲಿ ಚುಡಾಯಿಸುವವರು, ರೋದನೆ ಕೊಡುವವರ ಹೆಡೆಮುರಿ ಕಟ್ತೀವಿ ಎಂದು ಬಿಜೆಪಿ ಭಾಷೆ ಕೊಟ್ಟಿತ್ತು. ಮಂಗಳವಾರ ಉತ್ತರಪ್ರದೇಶದ ಹಜ್ರತ್ ಗಂಜ್ ನಲ್ಲಿರುವ ಕಾಲೇಜಿನ ಹೊರಗೆ ಹೆಣ್ಣುಮಕ್ಕನ್ನು ಚುಡಾಯಿಸುತ್ತಿದ್ದ ಮೂವರು ಬೀದಿ ಕಾಮಣ್ಣರನ್ನು ಪೊಲೀಸರು ಬಂಧಿಸಿದ್ದಾರೆ.[ರಾಮಾಯಣ ಮ್ಯೂಸಿಯಂಗೆ ಇದ್ದ ಅಡಚಣೆ ನಿವಾರಿಸಿದ ಯೋಗಿ]

ಉತ್ತರಪ್ರದೇಶ ಪೊಲೀಸರು ರೋಡ್ ರೋಮಿಯೋಗಳ ಮೇಲೆ ಮುಗಿಬಿದ್ದಿದ್ದಾರೆ. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಪೊಲೀಸ್ ಮಹಾನಿರ್ದೇಶಕ ಜಾವೇದ್ ಅಹ್ಮದ್ ಸೂಚನೆ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳಿಗೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ ಎಂದು ಅಹ್ಮದ್ ಖಡಕ್ ಸೂಚನೆ ನೀಡಿದ್ದಾರೆ.
ಎಲ್ಲೆಲ್ಲಿ ಮಹಿಳೆಯರಿಗೆ ಹಿಂಸೆ ನೀಡುವ ಪ್ರದೇಶ ಎಂಬ ಹಣೆಪಟ್ಟಿ ಇದೆಯೋ ಅಲ್ಲೆಲ್ಲ ಮಹಿಳಾ ಪೊಲೀಸ್ ಅಧಿಕಾರಿಯೂ ಸೇರಿದಂತೆ ತಂಡಗಳನ್ನು ಗಸ್ತಿಗೆ ಹಾಕಲಾಗಿದೆ. ಅಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿರುವ ಡಿಜಿಪಿ ಅಹ್ಮದ್, ಕ್ರಿಮಿನಲ್ ಗಳ ಮೇಲೆ ಮುಲಾಜು ನೋಡದೆ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದ್ದಾರೆ.[ಸಂಸದನಾಗಿ ಯೋಗಿ ಮಾಡಿದ ಕೊನೆಯ ಹೃದಯಂಗಮ ಭಾಷಣ]
ಸಾರ್ವಜನಿಕರಿಗೆ ಎಲ್ಲ ಸಮಯದಲ್ಲೂ ಪೊಲೀಸರು ಸಂಪರ್ಕಕ್ಕೆ ಸಿಗಬೇಕು. ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ಕೋಮು ಸೌಹಾರ್ದಕ್ಕೆ ಭಂಗ ಬರದಂತೆ ಎಚ್ಚರ ವಹಿಸಬೇಕು ಎಂದು ಕೂಡ ಸಂದೇಶ ರವಾನಿಸಲಾಗಿದೆ.












Click it and Unblock the Notifications