ಕಾವೇರಿ ನೀವೇ ಇಟ್ಕೊಳ್ಳಿ, ಜಯಾಲಲಿತಾ ನಮಗೆ ಕೊಡಿ
ಚೆನ್ನೈ, ಅ 8: ತಮಿಳರ ಅಮ್ಮ ಜಯಲಲಿತಾ ಜೈಲು ಪಾಲಾಗುವುದಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಾರಿ ಸಾರಿ ಸ್ಪಷ್ಟಪಡಿಸಿದರೂ ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ತಮಿಳುನಾಡು ಜನತೆಗೆ ಇಲ್ಲವೇನೋ? ಅಥವಾ ಅರ್ಥವಾಗುವುದು ಅಲ್ಲಿನ ರಾಜಕಾರಣಿಗಳಿಗೆ ಬೇಕಾಗಿಲ್ಲವೇನೋ?
ಜಯಾಗೆ ಜಾಮೀನು ಸಿಗದಿದ್ದರೆ ' ಕನ್ನಡಿಗರ ದಿಗ್ಬಂಧನ ' ಹಾಕುವ ಬ್ಯಾನರುಗಳು ಚೆನ್ನೈನಗರದಲ್ಲಿ ರಾರಾಜಿಸಿ ನಂತರ ಕಣ್ಮರೆಯಾಗಿದ್ದವು. ಈಗ ಇನ್ನೊಂದು ಬ್ಯಾನರುಗಳು ಚೆನ್ನೈ ನಗರದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿದೆ.
ಈ ಬ್ಯಾನರು ನೋಡಿ ನಗಬೇಕೋ, ಅಳಬೇಕೋ, ಜಯಲಲಿತಾ ಮೇಲಿನ ತಮಿಳರ ಪ್ರೀತಿಗೆ ಏನನ್ನ ಬೇಕೋ ಅದು ಅವರವರ ವಿವೇಚನೆಗೆ ಬಿಟ್ಟ ವಿಚಾರ.
ಈ ಬ್ಯಾನರಿನ ಎಡ ತುದಿಯಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಎಂ ಜಿ ರಾಮಚಂದ್ರನ್ ಅವರ ಭಾವಚಿತ್ರವನ್ನು ಮುದ್ರಿಸಲಾಗಿದೆ. (ಜಯಾಗೆ ಬೇಲ್ ಸಿಗದಿದ್ದರೆ ಕನ್ನಡಿಗರ ದಿಗ್ಬಂಧನ)

ಬ್ಯಾನರಿನ ಎಡಕ್ಕೆ ಜಯಾ ಭಾವಚಿತ್ರ, ಬಲದಲ್ಲಿ ಮಗುವೊಂದು ಜೋರಾಗಿ ಅಳುತ್ತಿರುವುದನ್ನು ಕಾಣಬಹುದು. ಮಗು ಅಳುತ್ತಾ ಕರ್ನಾಟಕ ರಾಜ್ಯಕ್ಕೆ ನಿವೇದನೆ ಮಾಡುವ ಹಾಗೇ ' ಕಾವೇರಿ ನೀವೇ ಇಟ್ಟುಕೊಳ್ಳಿ, ನಮಗೆ ಅಮ್ಮನನ್ನು ಕೊಡಿ.. ಅಮ್ಮಾ...' ಎಂದು ಬರೆಯಲಾಗಿದೆ. ಎಐಡಿಎಂಕೆಯ ಸ್ಥಳೀಯ ಮುಖಂಡರ ಹೆಸರಿನಲ್ಲಿ ಈ ಬ್ಯಾನರು ಮುದ್ರಣಗೊಂಡಿದೆ.
ಇದು ತಮಿಳರಿಗೆ ಜಯಲಲಿತಾ ಮೇಲಿರುವ ಪ್ರೇಮಕ್ಕೆ ಇರುವ ಒಂದು ಸಣ್ಣ ಉದಾಹರಣೆ. ಇದು ಅವರ ಕುರುಡು ಪ್ರೇಮವೋ, ಜಾಣ ಕುರುಡುತನವೋ ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಸದ್ಯ 'ಸರ್ವಂ ಅಮ್ಮ ಮಯಂ'. ಶಾಲೆಯಲ್ಲೂ, ಕಚೇರಿಯಲ್ಲೂ, ದಾರಿಯಲ್ಲೂ ಎಲ್ಲಿ ನೋಡಿದರಲ್ಲಿ ಅಮ್ಮ.. ಅಮ್ಮ.
ಈ ಬ್ಯಾನರಿನ ಬಗ್ಗೆ ಡಿಎಂಕೆ ಮುಖಂಡರೊಬ್ಬರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಾವೇರಿ ನದಿಯೇನೂ ಎಐಡಿಎಂಕೆ ಪಕ್ಷದ ಸ್ವತ್ತೇ, ಕಾವೇರಿ ತಮಿಳುನಾಡಿನ ಆಸ್ತಿ, ಕರ್ನಾಟಕಕ್ಕೆ ಬಿಟ್ಟು ಕೊಡಲು ಇವರು ಯಾರು ಎಂದು ಸ್ಥಳೀಯ ಡಿಎಂಕೆ ಮುಖಂಡರೊಬ್ಬರು ಬ್ಯಾನರಿನ ಬಗ್ಗೆ ಕಿಡಿಕಾರಿದ್ದಾರೆ. (ಚಿತ್ರಕೃಪೆ: ದಿ ಹಿಂದೂ)












Click it and Unblock the Notifications