ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ, ಮತ್ತೋರ್ವ ಸೈನಿಕ ಬಲಿ
ಶ್ರೀನಗರ, ಫೆಬ್ರವರಿ 12: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಇಲ್ಲಿನ ಕರಣ್ ನಗರದಲ್ಲಿರುವ ಸಿ.ಆರ್.ಪಿ.ಎಫ್ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಭಯೋತ್ಪಾದಕರ ಗುಂಡಿಗೆ ಓರ್ವ ಸಿ.ಆರ್.ಪಿ.ಎಫ್ ಯೋಧ ಬಲಿಯಾಗಿದ್ದಾರೆ.
ಉಗ್ರರು ಮತ್ತು ಸೈನಿಕರ ಜತೆ ಗುಂಡಿನ ಚಕಮಕಿ ನಡೆಯುತ್ತಿದ್ದ ವೇಳೆ ಸಿ.ಆರ್.ಪಿ.ಎಫ್ ಜವಾನರೊಬ್ಬರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಇಂದು ಬೆಳಿಗ್ಗೆ ಸಿ.ಆರ್.ಪಿ.ಎಫ್ ಪ್ರಧಾನ ಕಚೇರಿಗೆ ನುಗ್ಗಲು ಉಗ್ರರಿಬ್ಬರು ಯತ್ನಿಸಿದರು. ಉಗ್ರರ ಯತ್ನವನ್ನು ಸೈನಿಕರು ಹಿಮ್ಮೆಟ್ಟಿಸಿದ್ದು ಉಗ್ರರು ಪಕ್ಕದ ಕಟ್ಟಡದಲ್ಲಿ ಅವಿತುಕೊಂಡಿದ್ದಾರೆ ಎಂದು ಸಿ.ಆರ್.ಪಿ.ಎಫ್ ಐಜಿ ರವಿದೀಪ್ ಸಹಾಯ್ ಹೇಳಿದ್ದಾರೆ.

ಶನಿವಾರ ಮತ್ತು ಭಾನುವಾರ ಸುಂಜ್ವಾನ್ ಸೈನಿಕರ ಕ್ಯಾಂಪ್ ಮೇಲೆ ಜೈಷ್ ಇ ಮಹಮ್ಮದ್ ಉಗ್ರರು ದಾಳಿ ನಡೆಸಿದ ಪರಿಣಾಮ ಐವರು ಸೈನಿಕರು, ಒಬ್ಬರು ನಾಗರಿಕರು ಸಾವನ್ನಪ್ಪಿದ್ದರು. ಘಟನೆಯಲ್ಲಿ ನಾಲ್ವರು ಉಗ್ರರನ್ನೂ ಹೊಡೆದುರುಳಿಸಲಾಗಿತ್ತು.
ಇದೀಗ ಉಗ್ರರು ಮತ್ತೊಂದು ದಾಳಿ ನಡೆಸಿ ಸೈನಿಕರೊಬ್ಬರನ್ನು ಕೊಂದಿದ್ದಾರೆ. ಇಲ್ಲಿ ಇನ್ನೂ ಭಯೋತ್ಪಾದಕರು ಮತ್ತು ಸೈನಿಕರ ಮಧ್ಯೆ ಗುಂಡಿನ ಚಕಮಕಿ ಜಾರಿಯಲ್ಲಿದೆ.












Click it and Unblock the Notifications