ಆಂಧ್ರಪ್ರದೇಶದ ಜನರು ಸಿಎಂ ಜಗನ್ ಮೋಹನ್ ರೆಡ್ಡಿ ಗುಲಾಮರಲ್ಲ ಎಂದ ಪವನ್ ಕಲ್ಯಾಣ್
ಅಮರಾವತಿ, ಜೂನ್. 26 : ಜನಸೇನಾ ಪಕ್ಷದ (ಜೆಎಸ್ಪಿ) ಅಧ್ಯಕ್ಷ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದ ಜನರು ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಗುಲಾಮರಲ್ಲ ಎಂದು ಕಿಡಿಕಾರಿದ್ದಾರೆ. ಕೋನಸೀಮಾ ಜಿಲ್ಲೆಯಲ್ಲಿ ತಮ್ಮ ವಾರಾಹಿ ಯಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಇತ್ತೀಚಿನ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) ಆಕಾಂಕ್ಷಿಗಳು ಕಣದಿಂದ ಹಿಂದೆ ಸರಿಯುವಂತೆ ಬೆದರಿಕೆ ಹಾಕುವ ವಾತಾವರಣವನ್ನು ಸೃಷ್ಟಿಸಿದೆ. ಆದರೆ, ಪ್ರಜಾಪ್ರಭುತ್ವದಲ್ಲಿ ಜನರು ಗುಲಾಮರಲ್ಲ ಎಂಬುದನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಿಳಿದಿರಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ವ್ಯಕ್ತಿಯಾಗಿ, ನಾನು ನಿಮ್ಮನ್ನು ( ಜಗನ್ ಮೋಹನ್ ರೆಡ್ಡಿ) ದ್ವೇಷಿಸುವುದಿಲ್ಲ. ನೀವು ಉತ್ತಮ ಆಡಳಿತ ನಡೆಸಿ ಜನರ ಮನ ಗೆಲ್ಲುತ್ತೀರಿ. ಶಾಂತಿಯುತ ಗೋದಾವರಿ ಭಾಗದ ಪುಲಿವೆಂದುಲಿನಲ್ಲಿ ರಾಜಕೀಯವನ್ನು ಜಾರಿಗೆ ತರಲು ಪ್ರಯತ್ನಿಸಿದರೆ, ನಮ್ಮ ಕ್ರಾಂತಿಕಾರಿ ಸಿದ್ಧಾಂತದೊಂದಿಗೆ ಪ್ರತೀಕಾರ ತೀರಿಸಲಾಗುವುದು" ಎಂದು ಪವನ್ ಕಲ್ಯಾಣ್ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಒಂದು ಸಮುದಾಯದ ಬೆಂಬಲ ಗಳಿಸಲು ಕ್ಷುಲ್ಲಕ ರಾಜಕೀಯ ಮಾಡುವ ಬದಲು ಸಮುದಾಯಗಳನ್ನು ಒಗ್ಗೂಡಿಸಲು ಬದ್ಧ ಎಂದು ಜೆಎಸ್ಪಿ ಮುಖ್ಯಸ್ಥ ಪವನ್ ಕಲ್ಯಾಣ್ ಹೇಳಿದಾರೆ.
ಈ ಪ್ರದೇಶದಲ್ಲಿ ತೈಲ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಶೋಷಣೆ ಕುರಿತು ಮಾತನಾಡಿರುವ ಪವನ್ ಕಲ್ಯಾಣ್ ಅವರು. ಸ್ಥಳೀಯರಿಗೆ 70% ಉದ್ಯೋಗಗಳನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ನೀತಿಯಿದ್ದರೂ ಗೋದಾವರಿ ಪ್ರದೇಶದ (ಕೃಷ್ಣಾ ಗೋದಾವರಿ ಜಲಾನಯನ ಪ್ರದೇಶ) ತೈಲ ಮತ್ತು ನೈಸರ್ಗಿಕ ಅನಿಲ ಕಂಪನಿಗಳಲ್ಲಿ ಪ್ರದೇಶದ ನಿವಾಸಿಗಳಿಗೆ ಉದ್ಯೋಗವನ್ನು ಒದಗಿಸಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
"ಒಎನ್ಜಿಸಿ, ರಿಲಯನ್ಸ್, ಗೇಲ್ ಮತ್ತು ವೇದಾಂತ ಕಂಪನಿಗಳು ನಮ್ಮ ಪ್ರದೇಶದಲ್ಲಿ (ಕೆಜಿ ಬೇಸಿನ್) ತೈಲ ಮತ್ತು ನೈಸರ್ಗಿಕ ಅನಿಲ ಸಂಪನ್ಮೂಲಗಳನ್ನು ಅನ್ವೇಷಿಸುತ್ತಿವೆ. ಕಳಪೆ ಕೌಶಲ್ಯವನ್ನು ಉಲ್ಲೇಖಿಸಿ ಈ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸುತ್ತೇನೆ. ಜನಸೇನಾ ಪಕ್ಷವು ಅಧಿಕಾರಕ್ಕೆ ಬಂದರೆ ಕೌಶಲ್ಯಾಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ನಾವು ಪ್ರಧಾನಿಗೆ ಮನವಿ ಮಾಡುತ್ತೇವೆ" ಎಂದು ಪವನ್ ಕಲ್ಯಾಣ್ ಭರವಸೆ ನೀಡಿದ್ದಾರೆ.
ಗೋದಾವರಿ ಜಲಾನಯನ ಪ್ರದೇಶವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಸಾಮರ್ಥ್ಯವಿದೆ ಎಂದು ಪವನ್ ಕಲ್ಯಾಣ್ ಪುನರುಚ್ಚರಿಸಿದ್ದು, ಇದರಿಂದ ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಯಾಗುತ್ತವೆ ಎಂದಿದ್ದಾರೆ.
ರಾಜ್ಯದಲ್ಲಿ ವಾರಾಹಿ ಯಾತ್ರೆ ನಡೆಸುತ್ತಿರುವ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್, 2024 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯಾಗಿ ಉಳಿಸಿಕೊಳ್ಳಲಾಗುವುದು. ರಾಜಧಾನಿ ಅಮರಾವತಿಗಾಗಿ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟ ಕನಿಷ್ಠ 185 ರೈತರು ವೈಎಸ್ಆರ್ಸಿಪಿ ಸರ್ಕಾರದ ನಂತರವೂ ಸಂಕಷ್ಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು ಸ್ಥಾಪಿಸುವ ಸರ್ಕಾರದ ಕ್ರಮಗಳಿಗೆ ಟಕ್ಕರ್ ನೀಡಿದ್ದಾರೆ.












Click it and Unblock the Notifications