ಕಣ್ಣೀರುಕ್ಕಿಸಿತು, ಹೆಮ್ಮೆ ಮೂಡಿಸಿತು ಹುತಾತ್ಮ ಯೋಧನ ತಂಗಿಯ ಮದುವೆ...
ಸಾಲಂಕೃತಳಾಗಿ ವಧು ಹೊರಬರುತ್ತಿದ್ದರೆ ಕಮಾಂಡೋಗಳು ತಮ್ಮ್ ಅಂಗೈಯನ್ನು ಚಾಚಿ ಆಕೆ ತನ್ನ ಪಾದವನ್ನು ತಮ್ಮ ಅಂಗೈಮೇಲೆ ಊರಿ ಹೋಗುವಂತೆ ಹಿಡಿದಿದ್ದಾರೆ... ಅಣ್ಣನ ನೆನಪಲ್ಲಿ ಉಕ್ಕಿಬರುತ್ತಿದ್ದ ಕಣ್ಣೀರನ್ನು ಬಚ್ಚಿಟ್ಟುಕೊಂಡು ಆಕೆ ಒಬ್ಬೊಬ್ಬ ಕಮಾಂಡೋಗಳ ಅಂಗೈ ಮೇಲೆ ಮೃದುವಾಗಿ ತನ್ನ ಪಾದ ಊರಿ ಬರುತ್ತಿದ್ದಾಳೆ.... ಹುತಾತ್ಮ ಯೋಧನ ತಂಗಿಯ ಮದುವೆಯ ಕಣ್ಣೀರುಕ್ಕಿಸುವ ಕತೆ ಇದು...
ಬಡತನದಲ್ಲಿದ್ದ ಹುತಾತ್ಮ ಯೋಧನ ತಂಗಿಯ ಮದುವೆಗೆಂದು ಆತನ ಸಹೋದ್ಯೋಗಿ ಕಮಾಂಡೋಗಳೇ ತಲಾ 500 ರೂ. ನೀಡಿ, 5 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ, ಆಕೆಯ ಮದುವೆ ಮಾಡಿದ ಹೆಮ್ಮೆಯ ಕತೆ ಇದು...
2017 ರ ನವೆಂಬರ್ ತಿಂಗಳಿನಲ್ಲಿ ಬಿಹಾರ ಮೂಲದ ಜ್ಯೋತಿ ಪ್ರಕಾಶ್ ನಿರಾಲಾ ಎಂಬ ಭಾರತೀಯ ವಾಯು ಸೇನೆಯ ಗಾರ್ಡ್ ಕಮಾಂಡೋ ಹುತಾತ್ಮರಾದರು. ಅದಕ್ಕೂ ಮುನ್ನ ಐವರು ಭಯೋತ್ಪಾದಕರನ್ನು ಹತ್ಯೆಗೈದಿದ್ದ ನಿರಾಲಾ ಲಷ್ಕರ್ ಇ ತೊಯಿಬಾ ಭಯೋತ್ಪಾದಕ ಸಂಘಟನೆಯ ಪ್ರಮುಖ ನಾಯಕರನ್ನೇ ಒಬ್ಬಂಟಿಯಾಗಿ ಹೊಡೆದುರುಳಿಸಿದ್ದರು. ಆದರೆ ಇನ್ನೋರ್ವ ಉಗ್ರನನ್ನು ಹೊಡೆದುರುಳಿಸುವ ಸಂದರ್ಭದಲ್ಲಿ ಅವರು ಪ್ರಾಣತ್ಯಾಗ ಮಾಡಿದ್ದರು. ಅವರಿಗೆ ಭಾರತ ಸರ್ಕಾರ 2018 ರ ಜನವರಿಯಲ್ಲಿ ಸೇನೆಯ ಉನ್ನತ ಗೌರವವಾದ ಅಶೋಕ ಚಕ್ರ(ಮರಣೋತ್ತರ)ವನ್ನು ನೀಡಿ ಗೌರವಿಸಿತು.

ಮಾನವೀಯತೆ ಮೆರೆದ ಕಮಾಂಡೋಗಳು
ಅವರ ಬಲಿದಾನ, ಅಶೋಕ ಚಕ್ರದ ಗೌರವ, ಕುಟುಂಬಕ್ಕೆ ಸಾಂತ್ವನ... ಎಲ್ಲವೂ ಮುಗಿದಿದೆ. ಆದರೆ ಕುಟುಂಬದ ಜವಾಬ್ದಾರಿ ಹೊತ್ತಿದ್ದ ನಿರಾಲಾ ಹುತಾತ್ಮರಾದ ನಂತರ ಅವರ ಮನೆಯ ಆರ್ಥಿಕ ಪರಿಸ್ಥಿತಿ ತೀರಾ ಬಿಗುಡಾಯಿಸಿತ್ತು. ವಯಸ್ಸಿಗೆ ಬಂದಿದ್ದ ತಂಗಿಯ ಮದುವೆ ಆಗಿರಲಿಲ್ಲ. ಈ ಎಲ್ಲವುಗಳ ಬಗ್ಗೆ ಅರಿವಿದ್ದ ನಿರಾಲಾ ಅವರ ಆಪ್ತ ಸಹೋದ್ಯೋಗಿಗಳು ಸೇರಿ, ಉಳಿದ ಎಲ್ಲಾ ಕಮಾಂಡೋಗಳ ಬಳಿ 500 ರೂ. ನೀಡುವತೆ ಮನವಿ ಮಾಡಿದರು. ಕಷ್ಟ, ಬಡತನ ಎಂದರೆ ಮಿಡಿವ ಸಾವಿರಾರು ಕಮಾಂಡೋಗಳು ಒಂದು ಕ್ಷಣವೂ ಹಿಂದಡಿ ಇಡದೆ 500 ರೂಪಾಯಿಯನ್ನು ನೀಡಿದರು.

ಟ್ವಿಟ್ಟರ್ ನಲ್ಲಿ ಚಿತ್ರ ವೈರಲ್
ಆಕೆಯ ಮದುವೆ ಇದೀಗ ನೆರವೇರಿದೆ. ಅಂತ ಅಣ್ಣನನ್ನು ಪಡೆದ ತಂಗಿಗೆ ಗೌರವ ಎಂಬಂತೆ ಕಮಾಂಡೋಗಳು ತಮ್ಮ ಅಂಗೈ ಮೇಲೆ ಆಕೆ ಪಾದ ಊರಿ ಮಂಟಪಕ್ಕೆ ತೆರಳುಂತೆ ಅಂಗೈ ಚಾಚಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ಹರ್ಷ್ ಗೋಯೆಂಖಾ ಎಂಬುವವರು ಟ್ವೀಟ್ ಮಾಡಿದ್ದು, ಸಾಕಷ್ಟು ಮೆಚ್ಚುಗೆ ಗಳಿಸಿದೆ.

ಮರೆಯಲಾಗದ ಆ ಘಟನೆ
2017 ರ ನವೆಂಬರ್ 18 ರಂದು ಜಮ್ಮು ಮತ್ತು ಕಾಶ್ಮೀರದ ಬಂಡಿಪೊರದ ಹಾಜಿನ್ ಪ್ರದೇಶದ ಚಂದರ್ ಗೀರ್ ಎಂಬಲ್ಲಿ ಆರು ಭಯೋತ್ಪಾದಕರು ಮನೆಯೊಂದರಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿತ್ತು. ಆ ಕಾರ್ಯಾಚರಣೆಯಲ್ಲಿ ವಾಯುಸೇನೆಯ ಕಮಾಂಡೋ ನಿರಾಲಾ ಅವರು ಸಹ ಇದ್ದರು. ಧೈರ್ಯವಾಗಿ ಭಯೋತ್ಪಾದಕರಿದ್ದ ನೆಯೊಳಗೆ ನುಗ್ಗಿದ್ದ ನಿರಾಳಾ ಐವರು ಉಗ್ರರನ್ನು ಏಕಾಂಗಿಯಾಗಿ ಹೊಡೆದುರುಳಿಸಿದ್ದರು. ಈ ಐವರಲ್ಲಿ ಲಷ್ಕರ್ ಇ ತೊಯಬಾ ಸಂಘಟನೆಯ ಮುಖಂಡ ಝಾಕಿ ಉರ್ ರಹ್ಮಾನ್ ಸಹ ಇದ್ದ. ಆದರೆ ಈ ದಾಳಿಯ ಸಂದರ್ಭದಲ್ಲಿ ಉಗ್ರರು ನಡೆಸಿದ್ದ ಪ್ರತಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಿರಾಲಾ ಹುತಾತ್ಮರಾಗಿದ್ದರು.

ಅಶೋಕ ಚಕ್ರದ ಗೌರವ
ನಿರಾಲಾ ಅವರ ಶೌರ್ಯ ಮತ್ತು ದೇಶಕ್ಕಾಗಿ ಸಮರ್ಪಿಸಿದ ನಿಸ್ವಾರ್ಥ ಸೇವೆ, ಬಲಿದಾನವನ್ನು ಪರಿಗಣಿಸಿ ಅವರಿಗೆ 2018 ರಲ್ಲಿ ಮರಣೋತ್ತರ ಅಶೋಕ ಚಕ್ರದ ಗೌರವವನ್ನು ನೀಡಲಾಯಿತು. ಪತ್ನಿ ಮತ್ತು ನಾಲ್ಕು ವರ್ಷ ಮಗಳನ್ನು ಅಗಲಿರುವ ನಿರಾಲಾ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕುಟುಂಬಕ್ಕೆ 11 ಲಕ್ಷ ರೂ.ಪರಿಹಾರ ಘೋಷಿಸಿದ್ದರು.












Click it and Unblock the Notifications