ನಿಮ್ಮ ಮುತ್ತಾತ ಆಗಲೇ ಬೈ ಬೈ ಅಸ್ಸಾಂ ಎಂದಾಗಿತ್ತು: ರಾಹುಲ್ಗೆ ಅಮಿತ್ ಶಾ ವ್ಯಂಗ್ಯ
ನವದೆಹಲಿ, ಅಕ್ಟೋಬರ್ 20: ಭಾರತವು ಚೀನಾ ಜತೆಗಿನ ಗಡಿ ಯುದ್ಧದಲ್ಲಿ 1962ರಲ್ಲಿ ಹೆಕ್ಟೇರ್ಗಟ್ಟಲೆ ಭೂಮಿ ಕಳೆದುಕೊಂಡಾಗ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ತಮ್ಮದೇ ಸಲಹೆಗಳನ್ನು ಕೇಳಿಕೊಳ್ಳಬೇಕಿತ್ತು ಎಂದು ಗೃಹ ಸಚಿವ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ಪೂರ್ವ ಲಡಾಖ್ನಲ್ಲಿ ನಡೆಯುತ್ತಿರುವ ಭಾರತ-ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಹರಿಯಾಣದಲ್ಲಿ ಅ. 7ರಂದು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾ ಸಭೆ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಪ್ರತಿಯಾಗಿ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.
ಅಧಿಕಾರದಲ್ಲಿದ್ದಿದ್ದರೆ 15 ನಿಮಿಷದಲ್ಲಿ ಚೀನಾವನ್ನು ಹೊರ ಹಾಕುತ್ತಿದ್ದೆವು: ರಾಹುಲ್ ಗಾಂಧಿ
ತಾವು ಅಧಿಕಾರದಲ್ಲಿ ಇದ್ದಿದ್ದರೆ ಚೀನಾವನ್ನು ಭಾರತದ ಗಡಿಯಿಂದಷ್ಟೇ ಅಲ್ಲ, ಇನ್ನೂ ನೂರು ಕಿಮೀ ದೂರದವರೆಗೆ ಕೇಬಲ 15 ನಿಮಿಷದಲ್ಲಿ ಹೊರದಬ್ಬುತ್ತಿದ್ದೆವು. ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಕೂಡಲೇ ಈ ಕೆಲಸ ಮಾಡುತ್ತದೆ. ಆದರೆ ನಾಲ್ಕೈದು ತಿಂಗಳಿನಿಂದ ಚೀನಾ ಸೈನಿಕರು ಭಾರತದ ಭಾಗಗಳನ್ನು ಆಕ್ರಮಿಸಿದ್ದರೂ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.
ನರೇಂದ್ರ ಮೋದಿ ಅವರ ಸರ್ಕಾರವು ಭಾರತವನ್ನು ದುರ್ಬಲಗೊಳಿಸಿದೆ. ಹೀಗಾಗಿ ಚೀನಾವು ಭಾರತಕ್ಕೆ ಪ್ರವೇಶಿಸಿ ನಮ್ಮ ಸೈನಿಕರನ್ನು ಕೊಲ್ಲುವಷ್ಟು ಧೈರ್ಯ ತೋರಿಸುತ್ತಿದೆ ಎಂದು ಹೇಳಿದ್ದರು. ಮುಂದೆ ಓದಿ.
ಆಗ ಮಾಡಿದ್ದರೆ ಇಷ್ಟೆಲ್ಲ ಹೋಗುತ್ತಿರಲಿಲ್ಲ
ಝೀ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, '15 ನಿಮಿಷದಲ್ಲಿ ಶತ್ರು ಸೈನಿಕರನ್ನು ಹೊರದಬ್ಬುವ ಸೂತ್ರವನ್ನು 1962ರಲ್ಲಿಯೇ ಅನ್ವಯಿಸಬಹುದಾಗಿತ್ತು. ಆಗಲೇ ಅವರು ಆ ರೀತಿ ಮಾಡಿದ್ದರೆ ಭಾರತವು ತನ್ನ ಹೆಕ್ಟೇರ್ಗಟ್ಟಲೆ ಭೂಮಿ ಕಳೆದುಕೊಳ್ಳುತ್ತಿರಲಿಲ್ಲ' ಎಂದು ಲೇವಡಿ ಮಾಡಿದರು..
ನಿಮ್ಮ ಮುತ್ತಾತ ಇದ್ದಾಗಲೇ ಕಳೆದುಕೊಂಡಿದ್ದೆವು
'ಆಗಿನ ಪ್ರಧಾನಿ ಆಕಾಶವಾಣಿಯಲ್ಲಿ ಆಗಲೇ ಬೈ ಬೈ ಅಸ್ಸಾಂ ಎಂದು ಹೇಳಿಯಾಗಿತ್ತು. ಈ ವಿಚಾರದಲ್ಲಿ ಕಾಂಗ್ರೆಸ್ ನಮಗೆ ಹೇಗೆ ಬುದ್ಧಿಮಾತು ಹೇಳಲು ಬರುತ್ತದೆ? ನಿಮ್ಮ ಮುತ್ತಾತ ಅಧಿಕಾರದಲ್ಲಿದ್ದಾಗ ಚೀನಾದ ಸರ್ಕಾರಕ್ಕೆ ನಮ್ಮ ಪ್ರದೇಶಗಳನ್ನು ಕಳೆದುಕೊಂಡಿದ್ದೆವು' ಎಂದು ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಅಷ್ಟು ಗುಣಮಟ್ಟದ ಡ್ರಗ್ಸ್ ನಿಮಗೆಲ್ಲಿ ಸಿಗುತ್ತದೆ?: ರಾಹುಲ್ ಗಾಂಧಿಗೆ ಸಚಿವನ ಪ್ರಶ್ನೆ
ಬಿಹಾರ ರೆಜಿಮೆಂಟ್ ಶ್ಲಾಘನೆ
ಜೂನ್ 15ರಂದು ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನೀ ಸೈನಿಕರನ್ನು ಹಿಮ್ಮೆಟ್ಟಿಸಿದ ಬಿಹಾರ ರೆಜಿಮೆಂಟ್ ಅನ್ನು ಶ್ಲಾಘಿಸಿದ ಅಮಿತ್ ಶಾ, '16 ಬಿಹಾರ ರೆಜಿಮೆಂಟ್ನ ಸೈನಿಕರ ಬಗ್ಗೆ ಅಪಾರ ಹೆಮ್ಮೆ ಇದೆ. ನಮ್ಮ ಅಧಿಕಾರಾವಧಿಯಲ್ಲಾದರೂ ನಾವು ನಮ್ಮ ನಿಲುವಿಗೆ ಬದ್ಧರಾಗಿ ಧೈರ್ಯದಿಂದ ಹೋರಾಡಿದ್ದೇವೆ. ಈ ಸೈನಿಕರು ಅತ್ಯಂತ ಕಠೋರ ಹವಾಮಾನ ಪರಿಸ್ಥಿತಿಯನ್ನು ಎದುರಿಸಿ ನಮ್ಮ ದೇಶವನ್ನು ರಕ್ಷಿಸಿದ್ದಾರೆ' ಎಂದು ಹೇಳಿದರು.
ಮಾತುಕತೆ ಪರಿಹಾರದ ಭರವಸೆ
ಚೀನಾ-ಭಾರತ ಗಡಿ ಸಂಘರ್ಷವನ್ನು ಮಾತುಕತೆಯ ಮೂಲಕ ಬಗೆಹರಿಸುವ ಅನೇಕ ಪ್ರಯತ್ನಗಳು ನಡೆದರೂ ಅವು ಸಫಲವಾಗಿಲ್ಲ. ಎರಡೂ ದೇಶಗಳು ಗಡಿಯಲ್ಲಿನ ತಮ್ಮ ಪಡೆಗಳನ್ನು ವಾಪಸ್ ಕರೆಯಿಸಿಕೊಳ್ಳಲು ಮುಂದಾಗಿಲ್ಲ. ಆದರೂ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆಗಳ ಮೂಲಕ ಈ ವಿವಾದಕ್ಕೆ ಅಂತಿಮ ಪರಿಹಾರ ಸಿಗಬಹುದು ಎಂದು ಅಮಿತ್ ಶಾ ಭರವಸೆ ವ್ಯಕ್ತಪಡಿಸಿದರು.
ಪ್ರಧಾನಿಗೆ ವಿಮಾನ, ಯೋಧರಿಗೆ ಬುಲೆಟ್ ಪ್ರೂಫ್ ರಹಿತ ವಾಹನ ಕುರಿತು ರಾಹುಲ್ ಮಾತು