ಕಂದಹಾರ್ ಮಾದರಿ ಹೈಜಾಕ್ ಬೆದರಿಕೆ, ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್
ನವದೆಹಲಿ, ಫೆಬ್ರವರಿ 24: ಕಂದಹಾರ್ ಶೈಲಿ ವಿಮಾನ ಹೈಜಾಕ್ ನಡೆಸಲು ಉಗ್ರರು ಸಂಚು ರೂಪಿಸುವ ಸುದ್ದಿ ಹೊರಬಿದ್ದಿದೆ. ನವ ದೆಹಲಿಯಿಂದ ಪಾಕಿಸ್ತಾನಕ್ಕೆ ತೆರಳುವ ವಿಮಾನವನ್ನು ಅಪಹರಿಸುವ ಬಗ್ಗೆ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಪುಲ್ವಾಮಾ ಉಗ್ರರ ದಾಳಿ ಬಳಿಕ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಿಧಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.
ಗುಪ್ತಚರ ಇಲಾಖೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ದೇಶದ ಇತರೆ ವಿಮಾನ ನಿಲ್ದಾಣಗಳಿಗೂ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ವಿಮಾನಯಾನ ಭದ್ರತಾ ಪಡೆಯಿಂದ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಕೆಲವು ನಿಯಮಾವಳಿಗಳನ್ನು ಕಠಿಣಗೊಳಿಸುವಂತೆ ಸೂಚನೆ ಸಿಕ್ಕಿದೆ. ಕಾರ್ ಪಾರ್ಕಿಂಗ್, ಟರ್ಮಿನಲ್ ಕಟ್ಟಡ ಪ್ರವೇಶ, ಕಾರ್ಗೋ ವಾಹನ ಪ್ರವೇಶ, ಪ್ರಯಾಣಿಕರ ಆಗಮನ, ನಿರ್ಗಮನ ಗೇಟು ಎಲ್ಲೆಡೆ ಹೆಚ್ಚಿನ ಪ್ರಮಾಣದಲ್ಲಿ ಸಿಸಿಟಿವಿ ಅಳವಡಿಕೆ, ಭದ್ರತಾ ಪಡೆ ಗಸ್ತು ತಿರುಗುವುದು ಹೀಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ಸಿಕ್ಕಿದೆ.

ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ: ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಹೊರಹೋಗುವ ಪ್ರಯಾಣಿಕರು, ವಾಹನಗಳು, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಸಿಐಎಸ್ಎಫ್, ಸಿಆರ್ಪಿಎಫ್ ಸೇರಿದಂತೆ ವಿವಿಧ ಶ್ರೇಣಿಯ ಭದ್ರತಾಧಿಕಾರಿಗಳನ್ನು ಒದಗಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಸಾಮಾನ್ಯ ಪ್ರಯಾಣಿಕರ ಸೋಗಿನಲ್ಲಿ ಉಗ್ರರು ನಿಲ್ದಾಣ ಪ್ರವೇಶಿಸುವ ಸಾಧ್ಯತೆಯಿದೆ. ಭಾರತದಲ್ಲಿರುವ ಕೆಲವು ಉಗ್ರರನ್ನು ಬಿಡುಗಡೆ ಮಾಡಿಕೊಳ್ಳುವ ಉದ್ದೇಶದಿಂದಲೇ ವಿಮಾನ ಅಪಹರಿಸುವ ಸಂಚು ರೂಪಿಸಿದ್ದಾರೆಂಬುದು ಗುಪ್ತಚರ ಇಲಾಖೆಯ ಮಾಹಿತಿ ನೀಡಿದೆ.
ಕರಾವಳಿಯಲ್ಲೂ ಕಟ್ಟೆಚ್ಚರ: ಪೋರಬಂದರಿನ ಬಳಿ ಪಾಕಿಸ್ತಾನಕ್ಕೆ ಸೇರಿದೆ ಎನ್ನಲಾದ ಬೋಟ್ ಅಗ್ನಿಗೆ ಆಹುತಿಯಾದ ಘಟನೆ ನಂತರ ಕರ್ನಾಟಕ ಸೇರಿದಂತೆ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಧ್ವಂಸಗೊಂಡ ಬೋಟ್ ನ ಅವಶೇಷಗಳ ಹುಡುಕಾಟ ಮುಂದುವರೆದಿದೆ. ಶೀಘ್ರದಲ್ಲೆ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಕರಾವಳಿ ಕಾವಲು ಪಡೆ ಅಧಿಕಾರಿಯೊಬ್ಬರು ಹೇಳಿದ್ದಾರೆ.












Click it and Unblock the Notifications