ಸೋನಿಯಾ ಬೇಸ್ತು? ಮೋದಿಗೆ ಉಘೇ ಅಂದ ಮತ್ತೋರ್ವ ಕಾಂಗ್ರೆಸ್ ನಾಯಕ
ನವದೆಹಲಿ, ಆ 22: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಶೈಲಿಯನ್ನು ಹೊಗಳುವ ಕಾಂಗ್ರೆಸ್ ನಾಯಕರ ಪಟ್ಟಿ ಬೆಳೆಯುತ್ತಿದೆ. ಬುಧವಾರ ಬಂಧನಕ್ಕೊಳಗಾಗಿದ್ದ ಪಿ ಚಿದಂಬರಂ, ಇದಾದ ನಂತರ, ಶತ್ರುಘ್ನ ಸಿನ್ಹಾ ಕೂಡಾ, ಮೋದಿಯನ್ನು ಹೊಗಳಿದ್ದರು.
ಆ ಪಟ್ಟಿಗೆ ಮತ್ತೋರ್ವ ಹಿರಿಯ ಕಾಂಗ್ರೆಸ್ ನಾಯಕನ ಸೇರ್ಪಡೆಯಾಗಿದೆ. "ಮೋದಿ ಮಾಡುವ ಎಲ್ಲಾ ಕೆಲಸವನ್ನು ಯಾವಾಗಲೂ ದೂರುತ್ತಿದ್ದರೆ ಪ್ರಯೋಜನವಿಲ್ಲ. ಅದರ ಬದಲು ಮೋದಿ ಕೆಲಸದ ಅಧ್ಯಯನ ನಡೆಯಬೇಕಿದೆ" ಎಂದು ಜೈರಾಂ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಪ್ರಧಾನಿ ಮೋದಿಯವರ ಆಡಳಿತದ ಶೈಲಿ ಸಂಪೂರ್ಣ ನಕಾರಾತ್ಮಕವಾಗಿಯೇನೂ ಇಲ್ಲ. ಅವರ ಕೆಲಸವನ್ನು ಗುರುತಿಸದೇ, ಸದಾ ಟೀಕಿಸುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ" ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

" 2014 ರಿಂದ 2019ರ ಅವಧಿಯಲ್ಲಿನ ಮೋದಿಯವರ ಕೆಲಸವನ್ನು ಗುರುತಿಸುವ ಸಮಯ ಇದಾಗಿದೆ, ಶೇಕಡಾ 30ಕ್ಕಿಂತ ಹೆಚ್ಚು ಮತದಾರರ ಆಶೀರ್ವಾದದಿಂದ ಅವರು ಮತ್ತೆ ಅಧಿಕಾರಕ್ಕೆ ಮರಳಿದ್ದಾರೆ" ಎಂದು ಜೈರಾಂ ರಮೇಶ್, ಸೂಕ್ಷ್ಮವಾಗಿ ಕಾಂಗ್ರೆಸ್ ಅವಲೋಕನ ಮಾಡುವುದು ಒಳ್ಳೆಯದು ಎನ್ನುವ ಚಿಂತನೆ ಹೊರಗೆಡವಿದ್ದಾರೆ.
ರಾಜಕೀಯ ವಿಶ್ಲೇಷಕ ಕಪಿಲ್ ಸತೀಶ್ ಕೋಮಿರೆಡ್ಡಿ ಬರೆದ "ಮಾಲೆವೊಲೆಂಟ್ ರಿಪಬ್ಲಿಕ್: ಎ ಶಾರ್ಟ್ ಹಿಸ್ಟರಿ ಆಫ್ ದಿ ನ್ಯೂ ಇಂಡಿಯಾ" ಪುಸ್ತಕವನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಜೈರಾಂ ರಮೇಶ್ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
" ಮೋದಿ ಜನರೊಂದಿಗೆ ಯಾವ ಭಾಷೆಯಲ್ಲಿ ಸಂಪರ್ಕಿಸಬಹುದೋ ಆ ಭಾಷೆಯಲ್ಲಿ ಮಾತನಾಡುತ್ತಾರೆ. ಜನರು ಗುರುತಿಸುವ ಮತ್ತು ಹಿಂದೆ ಮಾಡದಂತಹ ಕೆಲಸಗಳನ್ನು ಅವರು ಮಾಡುತ್ತಿದ್ದಾರೆಂದು ನಾವು ಗುರುತಿಸದೇ ಇದ್ದರೆ, ನಾವು ಈ ವ್ಯಕ್ತಿಯನ್ನು ಎದುರಿಸಲು ಸಾಧ್ಯವಾಗುವುದಿಲ್ಲ"ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಹೇಳಿದ್ದಾರೆ.












Click it and Unblock the Notifications