ಎಲ್ಲ ಬಲಿಷ್ಠ ಜಾತಿಗಳು ಒಗ್ಗಟ್ಟಾಗಿವೆ: ಸಾತ್ವಿಕ ಸಿಟ್ಟು ಹೊರ ಹಾಕಿದ ಮಲ್ಲಿಕಾರ್ಜುನ ಖರ್ಗೆ
ನವದೆಹಲಿ, ಡಿಸೆಂಬರ್ 12: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲ ಬಲಿಷ್ಠ ಜಾತಿಗಳು ಒಗ್ಗಟ್ಟಾಗಿದ್ದು, ಜಾತಿ ಗಣತಿ ವಿರುದ್ಧ ನಿಂತಿವೆ ಎಂದು ಎಂದು ತಮ್ಮ ಸಾತ್ವಿಕ ಸಿಟ್ಟು ಹೊರ ಹಾಕಿದ್ದಾರೆ.
ಕರ್ನಾಟಕದ ಜಾತಿ ಗಣತಿ ವರದಿ ಬಿಡುಗಡೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿರೋಧಿಸುತ್ತಿದ್ದಾರೆ. ಬಿಜೆಪಿಯವರು ವಿರೋಧಿಸುತ್ತಿದ್ದೀರಿ. ಬಲಿಷ್ಠ ಜಾತಿ ಜನರೆಲ್ಲಾ ಈ ವಿಚಾರದಲ್ಲಿ ಒಗ್ಗಟ್ಟಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಹೇಳಿದರು.

ಜಾತಿ ಜನಗಣತಿ ಕುರಿತು ರಾಜ್ಯ ಸರ್ಕಾರದೊಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಬಿಜೆಪಿ ಸದಸ್ಯರು ಪ್ರಶ್ನಿಸಿದಾಗ ಮಾತನಾಡಿದ ಖರ್ಗೆ ಅವರು, ಡಿ.ಕೆ. ಶಿವಕುಮಾರ್ ಅವರ ನಿಲುವನ್ನು ಬಹಿರಂಗವಾಗಿಯೇ ಟೀಕಿಸಿದರು. ಎಲ್ಲ ಬಲಿಷ್ಠ ಜಾತಿಗಳ ಜನರು ಈ ಬಗ್ಗೆ ಒಗ್ಗಟ್ಟಾಗಿದ್ದಾರೆ ಎಂದು ಆರೋಪಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಬಿಜೆಪಿಯ ಹಿರಿಯ ಸಂಸದ ಸುಶೀಲ್ ಕುಮಾರ್ ಮೋದಿ ಅವರು ಮಾತನಾಡಿ, ಹಿಂದುಳಿದ ಸಮುದಾಯಗಳ (ಒಬಿಸಿ) ಬಗ್ಗೆ ಕಾಂಗ್ರೆಸ್ ತೋರಿಸುವ ಪ್ರೀತಿ ಒಂದು ಪ್ರಹಸನ ಎಂದು ಹೇಳಿದರು. ಜಾತಿ ಜನಗಣತಿ ವಿಚಾರದಲ್ಲಿ ಶಿವಕುಮಾರ್ ಅವರ ನಿಲುವನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.
'ನಿಮ್ಮ ಸರ್ಕಾರ ಜಾತಿ ಸಮೀಕ್ಷೆ ವರದಿಯನ್ನು ಯಾವಾಗ ಬಹಿರಂಗ ಪಡಿಸುತ್ತದೆ ಎಂಬುದನ್ನು ಖರ್ಗೆಯೇ ಹೇಳಬೇಕು. ವರದಿಯನ್ನು ಸಾರ್ವಜನಿಕಗೊಳಿಸುವುದರ ವಿರುದ್ಧದ ಮನವಿಗೆ ಉಪಮುಖ್ಯಮಂತ್ರಿ ಸಹಿ ಹಾಕಿದ್ದಾರೆ' ಎಂದು ಪ್ರಧಾನಿ ಮೋದಿ ಹೇಳಿದರು.
ಬಳಿಕ 'ಉಪ ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ಶಾಸಕರು ಮತ್ತು ವೀರಶೈವ ಮಹಾಸಭಾದ ಮುಖಂಡರು ಇದನ್ನು ವಿರೋಧಿಸಿದ್ದಾರೆ' ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಆಗ ಎದ್ದು ನಿಂತು ಪ್ರತಿಕ್ರಿಯಿಸಿದ ಖರ್ಗೆ, 'ಶಿವಕುಮಾರ್ ಮತ್ತು ಬಿಜೆಪಿ ಜಾತಿ ಗಣತಿ ವರದಿಗೆ ವಿರುದ್ಧವಾಗಿದೆ. ಅವರೂ ವಿರೋಧಿಸುತ್ತಿದ್ದಾರೆ, ನೀವೂ ವಿರೋಧಿಸುತ್ತಿದ್ದೀರಿ. ಈ ವಿಷಯದಲ್ಲಿ ಇಬ್ಬರೂ ಒಂದೇ. ಇದು ಜಾತಿಯ ಲಕ್ಷಣ. ಬಲಿಷ್ಠ ಜಾತಿಯ ಜನರು ಆಂತರಿಕವಾಗಿ ಒಗ್ಗಟ್ಟಾಗುತ್ತಾರೆ ಎಂದರು.












Click it and Unblock the Notifications