ಅಕ್ರಮ ಮದ್ರಸಾ ಮೇಲೆ ಕಣ್ಣಿಡಲು ಐಬಿಗೆ ಸೂಚನೆ
ಬರ್ದ್ವಾನ್ ಸೇರಿದಂತೆ ಅನೇಕ ಸ್ಫೋಟ ಪ್ರಕರಣಗಳಲ್ಲಿ ಅಕ್ರಮ ಮದ್ರಸಾಗಳ ಪಾತ್ರ ಸಾಬೀತಾಗಿದೆ. ಇಲ್ಲಿಯೇ ಭಯೋತ್ಪಾದನೆಯ ಬೀಜ ಬಿತ್ತಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೇಶದ ಎಲ್ಲ ಅಕ್ರಮ ಮದ್ರಸಾಗಳ ಕುರಿತು ಸಮೀಕ್ಷೆ ನಡೆಸಿ ವರದಿ ನೀಡಬೇಕೆಂದು ಕೇಂದ್ರ ಸರ್ಕಾರ ಇಂಟೆಲಿಜೆನ್ಸ್ ಬ್ಯೂರೋ (ಐಬಿ)ಗೆ ಸೂಚಿಸಿದೆ.
ಮದ್ರಸಾ ಆರಂಭಿಸಲು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿ ಪಡೆದ ಮದ್ರಸಾಗಳ ನಿರ್ವಹಣೆಗೆ ಸರ್ಕಾರ ಸಹಾಯಧನವನ್ನೂ ನೀಡುತ್ತದೆ. ಆದರೆ, ಅನುಮತಿ ಪಡೆಯದೆ ಆರಂಭವಾಗುವ ಮದ್ರಸಾಗಳು ನಂತರ ಸಹಾಯಧನವೂ ಇಲ್ಲದೆ ಮುನ್ನಡೆಸಲ್ಪಡುತ್ತಿವೆ. ಆದ್ದರಿಂದಲೇ ಇಲ್ಲಿ ಗುಪ್ತವಾಗಿ ಬೇರೆಯದೇ ಚಟುವಟಿಕೆಗಳು ನಡೆಯುತ್ತಿವೆ ಎಂಬ ಅನುಮಾನ ವ್ಯಕ್ತವಾಗಿದೆ.

ಅಕ್ರಮ ಮದ್ರಸಾ ನಡೆಸಲು ಬರುತ್ತೆ ವಿದೇಶಿ ನಿಧಿ
ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ನೀಡಿರುವ ಇಂಟೆಲಿಜೆನ್ಸ್ ಬ್ಯೂರೋ, ಅಕ್ರಮ ಮದ್ರಸಾಗಳ ನಿರ್ವಹಣೆಗೆ ವಿದೇಶಗಳಿಂದ ಹಣ ಬರುತ್ತಿವೆ ಎಂದು ತಿಳಿಸಿದೆ. [ಮದ್ರಸಾ ಎಂದರೇನು? #banmadrasa ಏಕೆ?]
ಹಲವು ವರ್ಷಗಳಿಂದ ಅನೇಕ ದೇಶಗಳು ಪರೋಕ್ಷವಾಗಿ ಅಕ್ರಮ ಮದ್ರಸಾಗಳಿಗೆ ಆರ್ಥಿಕ ಸಹಾಯ ನೀಡಿವೆ. ಇಂತಹ ಮದ್ರಸಾಗಳು ಭಯೋತ್ಪಾದಕರ ಶಿಬಿರಗಳಂತಾಗಿವೆ ಎಂದು ಐಬಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ. [ಸ್ಫೋಟ ಆರೋಪಿಗೆ ಆಶ್ರಯ: ದೆಹಲಿ ಪೇದೆ ವಿಚಾರಣೆ]
ಮದ್ರಸಾಗಳ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹಲವು ಅಕ್ರಮ ಮದ್ರಸಾಗಳಿದ್ದು, ಅವು ಭಯೋತ್ಪಾದನೆಗೆ ಸಹಕರಿಸುತ್ತಿವೆ ಎಂಬುದು ಬರ್ದ್ವಾನ್ ಸ್ಫೋಟ ಪ್ರಕರಣದಲ್ಲಿ ಸಾಬೀತಾಗಿದೆ. ಈ ಮದ್ರಸಾಗಳಲ್ಲಿ ಆಧುನಿಕ ಶಿಕ್ಷಣವನ್ನು ಅಳವಡಿಸಲಾಗಿದೆಯೇ ಎಂಬುದರ ಕುರಿತು ಸಮೀಕ್ಷೆ ನಡೆಸಲಾಗುತ್ತದೆ.
ದೇಶದ ಎಲ್ಲ ಮದ್ರಸಾಗಳನ್ನೂ ಸಮೀಕ್ಷೆಗೊಳಪಡಿಸಲಾಗುವುದು. ಅಕ್ರಮವಾಗಿ ನಡೆಯುತ್ತಿರುವುದನ್ನು ಮುಚ್ಚಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.












Click it and Unblock the Notifications