ಭಾರತದ ಅತಿ ದೊಡ್ಡ ರಸ್ತೆ ಸುರಂಗ ಮಾರ್ಗದ ಬಗ್ಗೆ ನಿಮಗೇನು ಗೊತ್ತು?
ಜಮ್ಮು ಕಾಶ್ಮೀರದ ಚೆನಾನಿ ಮತ್ತು ನಾಶ್ರಿ ಮಧ್ಯೆ 3,720 ಕೋಟಿ ವೆಚ್ಚದಲ್ಲಿ ರಸ್ತೆ ಸುರಂಗ ಮಾರ್ಗ ನಿರ್ಮಾಣವಾಗಿದ್ದು, ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ. ದೇಶದ ಅತಿ ದೊಡ್ಡ ರಸ್ತೆ ಸುರಂಗ ಮಾರ್ಗ ಎಂಬ ಅಗ್ಗಳಿಕೆಯ ಈ ಯೋಜನೆ ವಿವರ ಇಲ್ಲಿದೆ
ಶ್ರೀನಗರ್, ಮಾರ್ಚ್ 21: ಭಾರತದ ಅತಿ ದೊಡ್ಡ ರಸ್ತೆ ಸುರಂಗ ಮಾರ್ಗ ಜಮ್ಮು-ಶ್ರೀನಗರದ ಹೆದ್ದಾರಿಯ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ. ಸದ್ಯದಲ್ಲಿಯೇ ಈ ರಸ್ತೆಯು ಸಂಚಾರಕ್ಕೂ ಮುಕ್ತವಾಗಲಿದೆ. 9.2 ಕಿಲೋಮೀಟರ್ ಉದ್ದದ ನಾಲ್ಕು ಪಥ ಸುರಂಗ ಮಾರ್ಗದ ರಸ್ತೆ ಇದಾಗಿದ್ದು, ಚೆನಾನಿ ಮತ್ತು ನಾಶ್ರಿ ಮಧ್ಯೆ ನಿರ್ಮಿಸಲಾಗಿದೆ.
ಚತುಷ್ಪಥ ಹೆದ್ದಾರಿ ನಿರ್ಮಾಣದ ಭಾಗವಾಗಿ ಈ ಯೋಜನೆ ಪೂರ್ಣಗೊಂಡಿದೆ. ಸುರಂಗ ಮಾರ್ಗವು ಮೇ 23, 2011ರಲ್ಲಿ ಕೆಳ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಆರಂಭವಾಗಿತ್ತು. ನಿರ್ಮಾಣಕ್ಕಾಗಿ 3,720 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. ಈ ಸುರಂಗ ಮಾರ್ಗವು 1,200 ಮೀಟರ್ ಎತ್ತರದಲ್ಲಿದ್ದು, ವಿಶ್ವದರ್ಜೆಯ "ಇಂಟಿಗ್ರೇಟಡ್ ಟನಲ್ ಕಂಟ್ರೋಲ್ ಸಿಸ್ಟಮ್" ಅಳವಡಿಸಲಾಗಿದೆ.[19 ರಾಜ್ಯ ಹೆದ್ದಾರಿಗಳಲ್ಲಿ ನೂತನ ಟೋಲ್: ರಾಜ್ಯ ಸರ್ಕಾರ ಅಂಕಿತ]
ಇದರಿಂದ ಗಾಳಿ, ಬೆಂಕಿ ನಿಯಂತ್ರಣ, ಸಂವಹನ ಹಾಗೂ ಎಲೆಕ್ಟ್ರಿಕಲ್ ವ್ಯವಸ್ಥೆ ತಾನಾಗಿಯೇ ಕೆಲಸ ಮಾಡುತ್ತವೆ. ಅಂದಹಾಗೆ ಈ ಸುರಂಗ ಮಾರ್ಗ ನಿರ್ಮಾಣದಿಂದ ಕಣಿವೆ ರಾಜ್ಯದ ಎರಡು ರಾಜಧಾನಿಗಳ ಮಧ್ಯದ ಪ್ರಯಾಣದ ಅವಧಿ ಎರಡೂವರೆ ಗಂಟೆ ಕಡಿಮೆ ಆಗಲಿದೆ. ಚೆನಾನಿ ಮತ್ತು ನಾಶ್ರಿ ಮಧ್ಯೆ ಈ ಹಿಂದೆ 41 ಕಿಮೀ ದೂರವಿತ್ತು. ಸುರಂಗ ನಿರ್ಮಾಣದಿಂದ ಅದು 10.9 ಕಿಲೋಮೀಟರ್ ಗೆ ಇಳಿದಿದೆ.

ನರೇಂದ್ರ ಮೋದಿ ಹಸಿರು ನಿಶಾನೆ
ಮಾರ್ಚ್ ತಿಂಗಳ ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಈ ರಸ್ತೆಯ ಸಂಚಾರಕ್ಕೆ ಹಸಿರು ನಿಶಾನೆ ತೋರುತ್ತಾರೆ. ಈ ಸುರಂಗ ಮಾರ್ಗದಲ್ಲಿ ಪ್ರಯಾಣ ಆರಂಭವಾದರೆ ರಾಷ್ಟ್ರೀಯ ಹೆದ್ದಾರಿ 1A ಸಂಚಾರ ದಟ್ಟಣೆ ಕಡಿಮೆ ಆಗುತ್ತದೆ. ಅಷ್ಟೇ ಅಲ್ಲ, ಪಟ್ನಿಟಾಪ್ ನಲ್ಲಿ ಹಿಮಕುಸಿತದಿಂದ ಎದುರಾಗುತ್ತಿದ್ದ ತೊಂದರೆಯೂ ಕೊನೆಯಾಗಲಿದೆ.

124 ಸಿಸಿಟಿವಿ ಕ್ಯಾಮೆರಾ
ಸುರಂಗ ಮಾರ್ಗದ ನಿರ್ವಹಣೆಗೆ ಒಂದು ನಿಯಂತ್ರಣ ಕೊಠಡಿ ಇರಲಿದೆ. ಪ್ರತಿ 75 ಮೀಟರ್ ಗೆ ಒಂದರಂತೆ 124 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನು ದಿನದ 24 ಗಂಟೆಯೂ ಸುರಂಗದೊಳಗೆ ವಿದ್ಯುತ್ ದೀಪಗಳು ಹೊತ್ತಿರುತ್ತವೆ. ತುರ್ತು ಸಂದರ್ಭದಲ್ಲಿ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.

ಗರಿಷ್ಠ ವೇಗ 50 ಕಿಮೀ
ಅಗ್ನಿ ಅವಘಡ ಸಂಭವಿಸಿದರೆ ತಕ್ಷಣ ನಿಯಂತ್ರಣಕ್ಕೆ ತರಲು, ಗಾಳಿಯಾಡಲು ಅನುಕೂಲ ಇದೆ. ಇನ್ನೊಂದು ಮಾತು ಈ ಸುರಂಗ ಮಾರ್ಗದಲ್ಲಿ ಗರಿಷ್ಠ ವೇಗ 50 ಕಿಮೀ ನಿಗದಿ ಮಾಡಲಿದ್ದಾರೆ. ಜತೆಗೆ ವಾಹನದ ಲೋ ಬೀಮ್ ಬೆಳಕು ಬಳಸುವಂತೆ ತಿಳಿಸಲಾಗುತ್ತದೆ. ಶೀಘ್ರವಾಗಿ ಬೆಂಕಿ ಹಬ್ಬುವಂಥ ವಸ್ತುಗಳನ್ನು ಸಾಗಿಸುವ ಕಂಟೇನರ್ ಗಳಿಗೆ ಈ ಸುರಂಗ ಮಾರ್ಗದಲ್ಲಿ ಪ್ರವೇಶ ಇರುವುದಿಲ್ಲ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಹಸ್ತಾಂತರ
ಈ ರಸ್ತೆ ಮಾರ್ಗದಲ್ಲಿ ಸಂಚರಿಸುವಾಗ ಬಿಎಸ್ ಎನ್ ಎಲ್, ಏರ್ ಟೆಲ್, ಐಡಿಯಾ ಮೊಬೈಲ್ ಸಂಪರ್ಕ ಹಾಗೂ 92.7 ಎಫ್ಎಂ ರೇಡಿಯೋ ಕೆಲಸ ಮಾಡುತ್ತವೆ. ಈ ಯೋಜನೆಯನ್ನು ಪೂರ್ಣಗೊಳಿಸಿರುವುದು ಐಎಲ್ ಅಂಡ್ ಎಫ್ ಎಸ್ ಕಂಪೆನಿಯವರು. ಉದ್ಘಾಟನೆ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಹಸ್ತಾಂತರ ಮಾಡುತ್ತಾರೆ.

27 ಲಕ್ಷ ರುಪಾಯಿಯಷ್ಟು ಇಂಧನ ಉಳಿತಾಯ
ಈ ಮಾರ್ಗದಲ್ಲಿ ಎಲ್ಲ ಋತುಗಳಲ್ಲೂ ಸಂಚರಿಸಬಹುದು. ಜಮ್ಮು ಮತ್ತು ಶ್ರೀನಗರ್ ಮಧ್ಯೆ ಸಂಚರಿಸುವವರಿಗೆ ತುಂಬ ಅನುಕೂಲವಾಗಿದೆ. ಈ ಯೋಜನೆಯಿಂದ ದಿನಕ್ಕೆ 27 ಲಕ್ಷ ರುಪಾಯಿಯಷ್ಟು ಇಂಧನ ಉಳಿತಾಯವಾಗಲಿದೆ. ಇಂಥ ಯೋಜನೆಗಳಿಂದ ಪರಿಸರಕ್ಕೆ ಹಾನಿ ಆಗುವ ಸಾಧ್ಯತೆ ಹೆಚ್ಚು. ಆದರೆ ಪಟ್ನಿಟಾಪ್ ಪ್ರದೇಶದ ಸೂಕ್ಷ್ಮ ಪರಿಸರ, ಕಾಡುಗಳನ್ನು ಹಾಗೇ ಉಳಿಸಲಾಗಿದೆ.

ಎರಡು ಸಾವಿರ ಮಂದಿಗೆ ಉದ್ಯೋಗ
ಈ ಕೆಲಸದಲ್ಲಿ ಮತ್ತೊಂದು ಒಳ್ಳೆ ಕೆಲಸ ಕೂಡ ಆಗಿದೆ. ಜಮ್ಮು-ಕಾಶ್ಮೀರದ ಎರಡು ಸಾವಿರ ಮಂದಿಗೆ ಉದ್ಯೋಗ ಸಿಕ್ಕಿದೆ. ಈ ಯೋಜನೆಯಲ್ಲಿ ಕೆಲಸ ಮಾಡಿದವರ ಪೈಕಿ ಶೇ 94 ಮಂದಿ ಕಣಿವೆ ರಾಜ್ಯದವರು. ಸಣ್ಣ ಗಾತ್ರದ ವಾಹನಗಳಿಗೆ ಒಂದು ಕಡೆ ಪ್ರಯಾಣಕ್ಕೆ 55, ಎರಡೂ ಕಡೆಗಾದರೆ 85, ಇಡೀ ತಿಂಗಳ ಪ್ರಯಾಣಕ್ಕೆ 1870 ರುಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಲಿದ್ದಾರೆ.

ಪ್ರವೇಶ ಶುಲ್ಕ ನಿಗದಿ
ಇನ್ನು ಮಿನಿ ಬಸ್ಸಿನಂಥ ವಾಹನಗಳಿಗೆ ಒಂದು ಕಡೆಯ ಪ್ರಯಾಣಕ್ಕೆ 90, ಎರಡೂ ಕಡೆಯದಾದರೆ 135, ಬಸ್ಸು, ಟ್ರಕ್ ಗಳಿಗಾದರೆ ಒಂದು ಕಡೆ ಪ್ರಯಾಣಕ್ಕಾದರೆ 190, ಎರಡೂ ಕಡೆಯದಾದರೆ 285 ರುಪಾಯಿ ಶುಲ್ಕ ನಿಗದಿ ಮಾಡಲಾಗಿದೆ.












Click it and Unblock the Notifications