Rain Alert: ಸೈಕ್ಲೋನ್ ಮಿಚಾಂಗ್ ಅಬ್ಬರ: ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ
ಸೈಕ್ಲೋನ್ ಮಿಚಾಂಗ್ ಅಬ್ಬರದಿಂದ ಚೆನ್ನೈನಲ್ಲಿ ಸುರಿದ ಭಾರಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 7 ಸಾವನ್ನಪ್ಪಿದ್ದು, ಒಂಬತ್ತು ಜಿಲ್ಲೆಗಳಲ್ಲಿ 61,600ಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಸ್ಟಾಲಿನ್ ಮಾಹಿತಿ ನೀಡಿದ್ದಾರೆ.
ಚೆನ್ನೈ ಬಳಿಕ ಮಿಚಾಂಗ್ ಚಂಡಮಾರುತ ಆಂಧ್ರ ಪ್ರದೇಶದ ಬಾಪಟ್ಲಾ ಜಿಲ್ಲೆಗೆ ಅಪ್ಪಳಿಸಿದ್ದು, ಭಾರೀ ಮಳೆ ಮತ್ತು ಅತಿವೇಗದ ಗಾಳಿಯು ಬಾಪಟ್ಲಾ ಪಟ್ಟಣ ಮತ್ತು ಹತ್ತಿರದ ಹಳ್ಳಿಗಳನ್ನು ನೆಲಸಮಗೊಳಿಸಿದೆ.

ಮರಗಳು ಮತ್ತು ವಿದ್ಯುತ್ ಕಂಬಗಳನ್ನು ನೆಲಸಮಗೊಳಿಸಿದ್ದರಿಂದ ಮಂಗಳವಾರ ದಕ್ಷಿಣ ಆಂಧ್ರಪ್ರದೇಶ ಕರಾವಳಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ತೀವ್ರ ಚಂಡಮಾರುತವು ಮಧ್ಯಾಹ್ನದಿಂದ 2.30 ಗಂಟೆಯವರೆಗೆ ಅಬ್ಬರಿಸಿದೆ. ಗಂಟೆಗೆ 90-100 ಕಿ.ಮೀ. ಗರಿಷ್ಠ ನಿರಂತರ ಗಾಳಿಯ ವೇಗದೊಂದಿಗೆ ಬಾಪಟ್ಲಾದ ದಕ್ಷಿಣಕ್ಕೆ ಹತ್ತಿರದಲ್ಲಿದೆ.
ಮೂವರು ಸಾವು
ಮಳೆ ಸಂಬಂಧಿತ ಘಟನೆಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಏಲೂರು ಜಿಲ್ಲೆಯಲ್ಲಿ ಪೌಲ್ಟ್ರಿ ಘಟಕದ ಒಂದು ಭಾಗ ಕುಸಿದು ಇಬ್ಬರು ಸಾವನ್ನಪ್ಪಿದರೆ, ಕಡಪದಲ್ಲಿ ಎಪಿಎಸ್ಪಿ ಬೆಟಾಲಿಯನ್ನ ಕಾನ್ಸ್ಟೆಬಲ್ ಸಿದ್ದವಟಂ ಅರಣ್ಯ ವ್ಯಾಪ್ತಿಯಲ್ಲಿ ಮೋಟಾರ್ ಸೈಕಲ್ನಲ್ಲಿ ಹೋಗುತ್ತಿದ್ದಾಗ ಮರವೊಂದು ಬಿದ್ದು ಸಾವನ್ನಪ್ಪಿದ್ದಾರೆ.
"ಚಂಡಮಾರುತವು ಉತ್ತರದ ಕಡೆಗೆ ಚಲಿಸುತ್ತಿದೆ ಮತ್ತು ಮುಂದಿನ ಕೆಲವು ಗಂಟೆಗಳಲ್ಲಿ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಭಾರೀ ಮಳೆ ಮುಂದುವರಿಯುತ್ತದೆ" ಎಂದು ಎಪಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಪಿಎಸ್ಡಿಎಂಎ) ತಿಳಿಸಿದೆ.
ಎನ್ಡಿಆರ್ ಎಫ್ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪುದುಚೇರಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು 29 ತಂಡಗಳನ್ನು ನಿಯೋಜಿಸಿದೆ.
ಕತ್ತಲೆಯಲ್ಲಿ ಮುಳುಗಿದ ಬಾಪಟ್ಲಾ
ವೇಗದ ಗಾಳಿ ತಡರಾತ್ರಿಯವರೆಗೂ ಮುಂದುವರಿದಿದ್ದು, ಬಾಪಟ್ಲಾ ಜಿಲ್ಲೆ ಕತ್ತಲೆಯಲ್ಲಿ ಮುಳುಗಿದೆ
ಡಿಸೆಂಬರ್ 6 ರ ಮಧ್ಯಾಹ್ನ ಮಿಚಾಂಗ್ ಚಂಡಮಾರುತವು ಬಾಪಟ್ಲಾ ಜಿಲ್ಲೆಯ ಸೂರ್ಯಲಂಕಾದಂತಹ ಕರಾವಳಿ ಗ್ರಾಮಗಳ ಮೂಲಕ ಹಾದುಹೋಯಿತು, ನಿರ್ಜನ ರಸ್ತೆಗಳಲ್ಲಿ ಛಾವಣಿಯ ಶೀಟ್ಗಳ, ಕಲ್ನಾರು ಮತ್ತು ಓವರ್ಹೆಡ್ ಟ್ಯಾಂಕ್ಗಳಿಂದ ಮುಚ್ಚಿದ ಮನೆಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ.
ವಿದ್ಯುತ್ ಇಲ್ಲದ ಕಾರಣ ಬಹುತೇಕ ಜಿಲ್ಲೆ ಕತ್ತಲಲ್ಲಿ ಮುಳುಗಿದ್ದು, ಮೊಬೈಲ್ ನೆಟ್ ವರ್ಕ್ ಇಲ್ಲದ ಕಾರಣ ಬಾಪಟ್ಲಾ ಜಿಲ್ಲೆಗೆ ಸಂಪರ್ಕ ಕಡಿತಗೊಂಡಿದೆ. ಬಾಪಟ್ಲ ಬಳಿಯ ಕಡಲತೀರಕ್ಕೆ ಚಂಡಮಾರುತ ಅಪ್ಪಳಿಸುವ ಮುನ್ನ ಮತ್ತು ನಂತರ ಚೇಬ್ರೋಲು, ಪೊನ್ನೂರು, ಗೋಪಾಪುರಂ ಮತ್ತಿತರ ಕಡೆಗಳಲ್ಲಿ ಬಹುತೇಕ ಎಲ್ಲ ರಸ್ತೆಗಳು ನಿರ್ಜನವಾಗಿದ್ದವು. ಅನೇಕ ಮೀನುಗಾರರ ಕುಟುಂಬಗಳನ್ನು ಪರಿಹಾರ ಶಿಬಿರಗಳು ಮತ್ತು ಸೈಕ್ಲೋನ್ ಶೆಲ್ಟರ್ಗಳಿಗೆ ಸ್ಥಳಾಂತರಿಸಲಾಗಿದೆ.
ತೆಲಂಗಾಣದಲ್ಲಿ ಕೂಡ ಮುನ್ನೆಚ್ಚರಿಕೆ
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಕಾಂಗ್ರೆಸ್ನ ತೆಲಂಗಾಣ ಘಟಕದ ಮುಖ್ಯಸ್ಥ ಎ ರೇವಂತ್ ರೆಡ್ಡಿ, ರಾಜ್ಯದ ವಿವಿಧ ಜಿಲ್ಲೆಗಳ ಮೇಲೆ ಮಿಚಾಂಗ್ ಚಂಡಮಾರುತದ ಪ್ರಭಾವದ ಬಗ್ಗೆ ಐಎಂಡಿ ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಜಾಗರೂಕರಾಗಿರಬೇಕು ಎಂದು ಹೇಳಿದರು.
ಭತ್ತದ ಬೆಳೆ ಹಾನಿಯಾಗದಂತೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ರೇವಂತ್ ರೆಡ್ಡಿ ಹೇಳಿದ್ದಾರೆ.












Click it and Unblock the Notifications