ಮಾರನ್ ಗೆ ಮತ್ತೆ ಹಿನ್ನಡೆ, ಸುಪ್ರೀಂಗೆ 'ಇಡಿ' ಮೇಲ್ಮನವಿ
ಟೆಲಿಕಾಂ ಹಗರಣಕ್ಕೆ ಸಂಬಂಧಿಸಿದಂತೆ ದಯಾನಿಧಿ ಮಾರನ್ ಸೇರಿದಂತೆ ಎಲ್ಲಾ 6 ಮಂದಿಗೆ ವಿಶೇಷ ಸಿಬಿಐ ನ್ಯಾಯಾಲಯ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ.
ನವದೆಹಲಿ, ಫೆಬ್ರವರಿ 03: ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದ ಆರೋಪದಲ್ಲಿ ಸಿಲುಕಿದ್ದ ಮಾಜಿ ದೂರಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್ ಸೇರಿದಂತೆ ಎಲ್ಲಾ 6 ಮಂದಿಗೆ ವಿಶೇಷ ನ್ಯಾಯಾಲಯದಿಂದ ಗುರುವಾರ ಬಿಗ್ ರಿಲೀಫ್ ಸಿಕ್ಕಿತ್ತು. ಆದರೆ, ವಿಶೇಷ ಸಿಬಿಐ ನ್ಯಾಯಾಲಯ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿರುವ ಆಸ್ತಿಗಳನ್ನು ಮಾರನ್ ಸಹೋದರರಿಗೆ ಹಿಂದಿರುಗಿಸಬಾರದು ಎಂದು ಜಾರಿ ನಿರ್ದೇಶನಾಲಯ ತನ್ನ ಅರ್ಜಿಯಲ್ಲಿ ತಿಳಿಸಿದೆ. ಈ ಅರ್ಜಿ ವಿಚಾರಣೆಯನ್ನು ಫೆಬ್ರವರಿ 8 ರಂದು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ.

ಮಾರನ್ ಸಹೋದರರ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳು ಇಲ್ಲ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಒ.ಪಿ.ಸೈನಿ ತಿಳಿಸಿದ್ದರು ಮತ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿ ಮಾರನ್ ಸಹೋದರರ ಸಹಿತ ಎಲ್ಲಾ ಆರೋಪಿಗಳನ್ನೂ ಖುಲಾಸೆ ಗೊಳಿಸಿದ್ದರು.[ಮ್ಯಾಕ್ಸಿಸ್ ಸಂಸ್ಥೆಗೆ ನಿರ್ಬಂಧ ಹೇರಿದ ಸುಪ್ರೀಂಕೋರ್ಟ್]
ಯುಪಿಎ ಆಡಳಿತಾವಧಿಯಲ್ಲಿ ದಯಾನಿಧಿ ಮಾರನ್ ಟೆಲಿಕಾಂ ಸಚಿವರಾಗಿದ್ದಾಗ ಏರ್ ಸೆಲ್ ಕಂಪನಿಯನ್ನು ಮಲೇಷ್ಯಾದ ಮ್ಯಾಕ್ಸಿಸ್ ಕಂಪನಿ ವಿಲೀನಗೊಳಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಿತ್ತು. ಈ ಸಂಬಂಧ ಮಾರನ್ 742.58 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ಚಾರ್ಜ್ ಶೀಟ್ ಹಾಕಿವೆ.
ಈ ಪ್ರಕರಣದಲ್ಲಿ ಕಲಾನಿಧಿ ಮಾರನ್ ಪತ್ನಿ ಕಾವೇರಿ, ಸೌತ್ ಏಷ್ಯಾ ಎಫ್ ಎಂ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಕೆ ಷಣ್ಮುಗಂ, ಸನ್ ಡೈರೆಕ್ಟ್ ಪ್ರೈ ಲಿಮಿಟೆಡ್ ವಿರುದ್ಧ ಮನಿ ಲಾಂಡ್ರಿಂಗ್ ಕಾಯ್ದೆ ಉಲ್ಲಂಘನೆ ಆರೋಪ ಹೊರೆಸಲಾಗಿದೆ.(ಒನ್ಇಂಡಿಯಾ ಸುದ್ದಿ)












Click it and Unblock the Notifications