ಏರ್ ಇಂಡಿಯಾ ಮತ್ತೆ ಸಂಬಳ ತಡ: ಸುರಕ್ಷತೆ ಬಗ್ಗೆ ಸಿಬ್ಬಂದಿ ಕಳವಳ
ನವದೆಹಲಿ, ಆಗಸ್ಟ್ 10: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ಸತತ ಐದನೇ ತಿಂಗಳೂ ಕೂಡ ತನ್ನ ನೌಕರರ ವೇತನ ಪಾವತಿ ವಿಳಂಬ ಮಾಡಿದೆ.
ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ, ತನ್ನ ಸಿಬ್ಬಂದಿಗೆ ಜುಲೈ ತಿಂಗಳ ಸಂಬಳವನ್ನು ಇನ್ನೂ ಮಂಜೂರು ಮಾಡಿಲ್ಲ.
ಈ ಸಂಬಂಧ ಏರ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಭಾರತೀಯ ವಾಣಿಜ್ಯ ಪೈಲಟ್ಗಳ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ದೀಪಾಂಕರ್ ಗುಪ್ತಾ ಪತ್ರ ಬರೆದಿದ್ದಾರೆ.
ಏರ್ ಇಂಡಿಯಾ ವಿಮಾನ ಸಂಸ್ಥೆ ಹರಾಜು: ಕೊಳ್ಳುವವರೇ ಇಲ್ಲ!
'ಸತತ ಐದನೇ ತಿಂಗಳೂ ವೇತನ ಪಾವತಿ ವಿಳಂಬವಾಗಿರುವುದು ನೋವುಂಟು ಮಾಡುತ್ತಿದೆ. ನಿಮ್ಮ ಭರವಸೆ ಹಾಗೂ ಆಶ್ವಾಸನೆಯ ಹೊರತಾಗಿಯೂ ಸಂಬಳ ಹಾಗೂ ಹಾರಾಟ ಭತ್ಯೆಯ ವಿಳಂಬದ ಬಗ್ಗೆ ಆಡಳಿತ ಮಂಡಳಿ ಯಾವುದೇ ಪೂರ್ವ ಮಾಹಿತಿ ನೀಡಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರಿಯಾದ ಸಮಯಕ್ಕೆ ವೇತನ ಸಿಗದ ಕಾರಣ ಹಣಕಾಸು ಸಂಸ್ಥೆಗಳು ಏರ್ ಇಂಡಿಯಾ ಸಿಬ್ಬಂದಿಯ ಬೆನ್ನುಬಿದ್ದಿದ್ದಾರೆ. ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳ ದುರ್ವರ್ತನೆ ನಮ್ಮ ಸದಸ್ಯರಿಗೆ ಖೇದ ಉಂಟುಮಾಡಿದೆ. ಸಂಸ್ಥೆಗಾಗಿ ನಾವು ಬೆವರು ಮತ್ತು ರಕ್ತ ಹರಿಸಿದ್ದೇವೆ. ಆದರೆ, ನಮ್ಮನ್ನು ಮನಬಂದಂತೆ ದುಡಿಸಿಕೊಂಡು ಶೋಷಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ವಿಮಾನದಲ್ಲೇ ಅಸುನೀಗಿದ ಬೆಂಗಳೂರಿನ ಹಸುಗೂಸು
ಸಂಸ್ಥೆಯನ್ನು ನಡೆಸಲು ಹಣಕಾಸಿನ ಕೊರತೆಯಿದೆ. ಇದರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಇದರಿಂದ ನಾವು ಕಾರ್ಯಾಚರಣೆಯ ಸುರಕ್ಷತೆ ಹಾಗೂ ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಳವಳ ಹೊಂದಿದ್ದೇವೆ. ನಿರಂತರ ಹಾಗೂ ಕಡ್ಡಾಯ ನಿರ್ವಹಣೆಗೆ ಅಗತ್ಯವಿರುವಷ್ಟಾದರೂ ಹಣವನ್ನು ಸಂಸ್ಥೆ ಹೊಂದಿದೆಯೇ? ಎಂದು ಪ್ರಶ್ನಿಸಿದ್ದಾರೆ.