'ರಾಮ ಕಾಲ್ಪನಿಕ ವ್ಯಕ್ತಿ' ಎಂದ ಶಾಸಕರ ವಿರುದ್ಧ ತಮಿಳುನಾಡಿನ ವಿಧಾನಸಭೆಯಲ್ಲಿ ಎಐಎಡಿಎಂಕೆ, ಬಿಜೆಪಿ ಕಿಡಿ
ಚೆನ್ನೈ ಜನವರಿ 13: ಸೇತುಸಮುದ್ರಂ ಯೋಜನೆಯ ಚರ್ಚೆಯ ವೇಳೆ 'ರಾಮ ಕಾಲ್ಪನಿಕ ವ್ಯಕ್ತಿ' ಎಂದ ಶಾಸಕರ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ ಕಿಡಿ ಕಾರಿದೆ. 'ರಾಮಾಯಣ ಕಾಲ್ಪನಿಕ ಗ್ರಂಥ ಮತ್ತು ರಾಮ ಕಾಲ್ಪನಿಕ ವ್ಯಕ್ತಿ' ಎಂದ ಶಾಸಕ ವಿ.ಪಿ ನಾಗೈ ಮಾಲಿ ಅವರ ಹೇಳಿಕೆಯನ್ನು ಬಿಜೆಪಿ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ಅವರು ತೀವ್ರವಾಗಿ ವಿರೋಧಿಸಿದ್ದಾರೆ. ಎಐಎಡಿಎಂಕೆ ಮತ್ತು ಅದರ ಮಿತ್ರ ಪಕ್ಷವಾದ ಬಿಜೆಪಿ ಗುರುವಾರ ವಿಧಾನಸಭೆಯಲ್ಲಿ ವಿ.ಪಿ ನಾಗೈ ಮಾಲಿ ಅವರ ಹೇಳಿಕೆಯನ್ನು ವಿರೋಧಿಸಿತು.
ರಾಮನನ್ನು ದೇವರಂತೆ ಪೂಜಿಸಲಾಗಿರುವುದರಿಂದ ಈ ಹೇಳಿಕೆ ಅನಗತ್ಯ ಎಂದು ನಾಗೇಂದ್ರನ್ ಹೇಳಿದ್ದಾರೆ. "ಇದು ಖಂಡನೀಯ ಹೇಳಿಕೆ'' ಎಂದು ಹೇಳಿದ ಅವರು, ಯೋಜನೆ ಸಾಕಾರಗೊಂಡರೆ ಮತ್ತು ದಕ್ಷಿಣದ ಜಿಲ್ಲೆಗಳಿಗೆ ಪ್ರಯೋಜನವಾದರೆ ಸಂತೋಷವಾಗುತ್ತದೆ ಎಂದರು. ಸೇತುಸಮುದ್ರ ಯೋಜನೆಯನ್ನು ಕೂಡಲೇ ಜಾರಿಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿ ಸದನ ಅಂಗೀಕರಿಸಿದ ನಿರ್ಣಯವನ್ನು ಬೆಂಬಲಿಸಿದರು.
ರಾಮ ಮಂದಿರ ಉದ್ಘಾಟನೆ ಘೋಷಣೆ ಮಾಡಲು ನೀವು ಪೂಜಾರಿಯಲ್ಲ: ಅಮಿತ್ ಶಾ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
"ಅವರೊಬ್ಬ ಕಾಲ್ಪನಿಕ ವ್ಯಕ್ತಿ ಎಂಬ ಹೇಳಿಕೆ ಜಗತ್ತಿನಾದ್ಯಂತ ಇರುವ 100 ಕೋಟಿ ಹಿಂದೂಗಳಿಗೆ ಅಪಮಾನವಾಗಿದೆ. ಅವರು 'ಅವತಾರ ಪುರುಷ' [ದೇವರ ಅವತಾರ]," ಎಂದು ಎಐಎಡಿಎಂಕೆ ಸದಸ್ಯ ಪೊಲ್ಲಾಚಿ ವಿ.ಜಯರಾಮನ್ ಹೇಳಿದರು.
ಇಲ್ಲಿ ದೇವರು ಮತ್ತು ನಂಬಿಕೆಯನ್ನು ವಿಮರ್ಶೆ ಮಾಡುತ್ತಿಲ್ಲ. ದೇವರ ಹೆಸರು ಚರ್ಚೆ ವಿಷಯವಾಗಬಾರದು. ಸೇತುಸಮುದ್ರಂ ಯೋಜನೆಯಿಂದ ಜನರಿಗೆ ಅನುಕೂಲವಾದರೆ ಯೋಜನೆ ಅನುಷ್ಠಾನಗೊಳಿಸಬಹುದು. ದೇವರ ಹೆಸರಿನಲ್ಲಿ ಯೋಜನೆಗೆ ಅಡ್ಡಿಪಡಿಸುವ ಪ್ರಯತ್ನವನ್ನು ಮಾತ್ರ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದರು.
ಸೇತುಸಮುದ್ರಂ ಯೋಜನೆ ಮುಂದುವರೆಸುವಂತೆ ತಮಿಳುನಾಡು ವಿಧಾನಸಭೆ ಸರ್ವಸಮ್ಮತ ನಿರ್ಣಯವನ್ನು ಕೈಗೊಂಡಿದೆ. ನಿರ್ಣಯಕ್ಕೆ ಷರತ್ತುಗಳನ್ನು ವಿಧಿಸಿ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. ಸಿಎಂ ಸ್ಟಾಲಿನ್ ಸರ್ಕಾರ ಮಂಡಿಸಿದ ನಿರ್ಣಯಕ್ಕೆ ಸದನ ಒಮ್ಮತದ ಒಪ್ಪಿಗೆ ನೀಡಿದೆ. ರಾಜಕೀಯ ಕಾರಣಗಳಿಂದಾಗಿ ಸೇತುಸಮುದ್ರಂ ಯೋಜನೆಯನ್ನು ಬಿಜೆಪಿ ವಿರೋಧಿಸುತ್ತಿದೆ ಎಂದು ಸರ್ಕಾರ ದೂರಿದೆ. ಮಾಜಿ ಸಿಎಂ ಜಯಲಲಿತಾ ಮೊದಲು ಈ ಯೋಜನೆ ಪರವಾಗಿದ್ದರು. ಆದರೆ ದಿಢೀರ್ ಎಂದು ಮನಸ್ಸು ಬದಲಿಸಿ ಈ ಯೋಜನೆ ವಿರೋಧಿಸಿ ಕೇಸ್ ದಾಖಲಿಸಿದರು. ತಮಿಳುನಾಡಿನ ಆರ್ಥಿಕಾಭಿವೃದ್ಧಿಗಾಗಿ ಈ ಯೋಜನೆ ಅತ್ಯಗತ್ಯ. ವಾಜಪೇಯಿ ಕೂಡ ಸೇತುವೆ ಸಾಧ್ಯಾಸಾಧ್ಯತೆ ಪರಿಶೀಲಿಸಲು ಅನುಮತಿ ನೀಡಿದ್ದರು. ಹೀಗಾಗಿ ವಿಳಂಬ ಮಾಡದೇ ಯೋಜನೆ ಜಾರಿಗೆ ಮುಂದಾಗಬೇಕು ಎಂದು ಕೇಂದ್ರ ಸರ್ಕಾರವನ್ನು ಸ್ಟಾಲಿನ್ ಕೋರಿದ್ದಾರೆ.
ಈ ಯೋಜನೆಗೆ ಭಾರತ-ಲಂಕಾ ನಡುವೆ ಇರುವ ರಾಮಸೇತು ಅಡ್ಡಿಯಾಗಿದೆ. ಈ ಯೋಜನೆ ಕೈಗೊಂಡರೆ ರಾಮಸೇತುವೆಗೆ ಹಾನಿಯಾಗಲಿದೆ. ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ. ಹೀಗಾಗಿ ಈ ಯೋಜನೆ ಬೇಡ ಎಂದು ವಾದ ಮಾಡುತ್ತಿದ್ದ ಬಿಜೆಪಿ ಈಗ ಯೂ ಟರ್ನ್ ಹೊಡೆದಿದೆ.