ಮುಂಗಾರು ಅಧಿವೇಶನದ ಅಂತಿಮ ವಾರದಲ್ಲಿ ಕೇಂದ್ರಕ್ಕೆ ಸಂದೇಶ ನೀಡಿದ ಪ್ರತಿಪಕ್ಷಗಳು
ನವದೆಹಲಿ, ಆ.09: ಸಂಸತ್ತಿನ ಮುಂಗಾರು ಅಧಿವೇಶನ ಮುಗಿಯಲು ಕೇವಲ ಒಂದು ವಾರ ಬಾಕಿ ಇರುವಾಗ, ತೃಣಮೂಲ ಕಾಂಗ್ರೆಸ್ನ ಸಂಸದ ಡೆರೆಕ್ ಒಬ್ರಿಯಾನ್, ಪ್ರಧಾನಿ ನರೇಂದ್ರ ಮೋದಿ ವಿಚಾರಣೆಗೆ ಅಧಿವೇಶನಕ್ಕೆ ಹಾಜರಾಗಬೇಕು ಮತ್ತು ಪೆಗಾಸಸ್ ಬೇಹುಗಾರಿಕೆ, ರೈತರ ಸಮಸ್ಯೆ ಮೊದಲಾದ ಪ್ರತಿಪಕ್ಷಗಳ ಬೇಡಿಕೆಗಳನ್ನು ಆಲಿಸಬೇಕು ಎಂದು ಒತ್ತಾಯಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವಿರುದ್ದ ವಿರೋಧ ಪಕ್ಷದ ನಾಯಕರುಗಳು ಸಂಸತ್ತಿನಲ್ಲಿ ಮಾತನಾಡಿರುವ ತುಣುಕುಗಳನ್ನು ಟ್ವೀಟ್ ಮಾಡಿರುವ ತೃಣಮೂಲ ಕಾಂಗ್ರೆಸ್ನ ಸಂಸದ ಡೆರೆಕ್ ಒಬ್ರಿಯಾನ್, ಮೋದಿಯವರೇ, ನಮ್ಮ ಮಾತು ಕೇಳಿ ಎಂದು ಈ ಉಲ್ಲೇಖ ಮಾಡಿದ್ದಾರೆ.
Recommended Video
ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಆರಂಭದ ಮಾತುಗಳನ್ನು ಆಡಲು ಹಾಗೂ ನೂತನ ಸಚಿವರುಗಳ ಪರಿಚಯ ಮಾಡಲು ಸಂಸತ್ತಿಗೆ ಹಾಜರಾಗಿದ್ದರು. ಆದರೆ ಈ ಸಂದರ್ಭದಲ್ಲಿ ವಿರೋಧ ಪಕ್ಷಗಳು ಪೆಗಾಸಸ್ ಬೇಹುಗಾರಿಕೆ, ರೈತರ ವಿಚಾರ, ಕೋವಿಡ್ ಮೊದಲಾದವುಗಳನ್ನು ಕೇಂದ್ರೀಕರಿಸಿ ಕೇಂದ್ರ ಸರ್ಕಾರವನ್ನು ತರಾಟಗೆ ತೆಗೆದುಕೊಂಡಿತು. ಗದ್ದಲದಿಂದಾಗಿ ಕಲಾಪಕ್ಕೆ ಅಡ್ಡಿಯಾಯಿತು. ಈ ಹಿನ್ನೆಲೆ ಆಕ್ರೋಶಕ್ಕೆ ಒಳಗಾದ ಪ್ರಧಾನಿ ನರೇಂದ್ರ ಮೋದಿ, "ಸಚಿವರುಗಳನ್ನು ಪರಿಚಯಿಸಿದಂತೆ ಪರಿಗಣಿಸಬೇಕು," ಎಂದು ಹೇಳಿದ್ದರು. ಈ ಬೆನ್ನಲ್ಲೆ ತಮ್ಮ ನೂತನ ಸಚಿವರುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬಿಜೆಪಿ ಜನ ಆಶೀರ್ವಾದ ಕಾರ್ಯಕ್ರಮ ಆಯೋಜಿಸಿದೆ.
'ಕೋವಿಡ್ ಸಂದರ್ಭ ಬಡವರಿಗೆ ಆದ್ಯತೆ ನೀಡಲಾಗಿದೆ': ಪ್ರಧಾನಿ ಮೋದಿ
ಜಾಗತಿಕ ಮಾಧ್ಯಮ ಒಕ್ಕೂಟವು ಹಲವಾರು ರಾಷ್ಟ್ರಗಳಲ್ಲಿ ಪೆಗಾಸಸ್ ಬೇಹುಗಾರಿಕೆಯ ಬಗ್ಗೆ ವರದಿ ಮಾಡಿದ ಒಂದು ದಿನದ ನಂತರ ಅಂದರೆ ಜುಲೈ 19 ರಂದು ಮಾನ್ಸೂನ್ ಅಧಿವೇಶನವು ಆರಂಭವಾಗಿದೆ. ಭಾರತದಲ್ಲಿ, ರಾಜಕೀಯ ನಾಯಕರು, ಪತ್ರಕರ್ತರು, ಅಧಿಕಾರಶಾಹಿಗಳು ಮತ್ತು ನ್ಯಾಯಾಲಯದ ಅಧಿಕಾರಿಗಳು, ಮಾಜಿ ಚುನಾವಣಾ ಆಯುಕ್ತರು ಮತ್ತು ಇತರರ ಮೇಲೆ ಬೇಹುಗಾರಿಕೆ ಮಾಡಲಾಗಿದೆ ಎಂದು ವರದಿಗಳು ಆರೋಪಿಸಿದೆ. ಸಂಶಯಾಸ್ಪದ ಕಣ್ಗಾವಲು ಗುರಿಗಳ ಪಟ್ಟಿಯಲ್ಲಿ ಸುಮಾರು 300 ಸಂಖ್ಯೆಗಳು ಕಂಡುಬಂದಿವೆ ಎಂದು "ದಿ ವೈರ್" ವರದಿ ಮಾಡಿದೆ. ಕೆಲವು ಫೋನ್ಗಳ ವಿಧಿವಿಜ್ಞಾನ ವಿಶ್ಲೇಷಣೆಯನ್ನು ಮಾಡಿದಾಗ ಆ ಫೋನ್ಗಳಲ್ಲಿ ಹ್ಯಾಕಿಂಗ್ನ ಕುರುಹುಗಳನ್ನು ಕಂಡುಬಂದಿದೆ ಎಂದು ಅದು ಹೇಳಿದೆ.
ಇನ್ನು ಡೆರೆಕ್ ಒಬ್ರಿಯಾನ್ ಟ್ವೀಟ್ ಮಾಡಿದ ವಿಡಿಯೋದಲ್ಲಿ "ನಾವು ಕಳೆದ 14 ದಿನಗಳಿಂದ ಕೇಳುತ್ತಿರುವ ಚರ್ಚೆಯನ್ನು ಮತ್ತು ನಂತರ ನಾವು ಮಾಡಬಹುದಾದ ಚರ್ಚೆಗಳನ್ನು ನೀವು ಅನುಮತಿಸುತ್ತಿಲ್ಲ. ನೀವು ಈಗ ಆ ಮಸೂದೆಯನ್ನು ಅಂಗೀಕರಿಸುತ್ತಿದ್ದೀರಿ. ನಿಮಗೆ ಧೈರ್ಯವಿದ್ದರೆ ಈಗಲೇ ಚರ್ಚೆಯನ್ನು ಪ್ರಾರಂಭಿಸಿ," ಎಂದು ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. "ಈ ಸರ್ಕಾರ ಅನಗತ್ಯವಾಗಿ ಜನರ ಮೇಲೆ ದಾಳಿ ನಡೆಸುತ್ತಿದೆ. ಪೆಗಾಸಸ್ ನಂತಹ ಕಂಪನಿಗಳನ್ನು ತರುತ್ತಿದೆ ಮತ್ತು ಜನರ ಮಾತನ್ನು ಕೇಳುತ್ತಿಲ್ಲ. ಇದು ನಾಚಿಕೆಗೇಡಿನ ಸಂಗತಿ," ಎಂದು ಶರದ್ ಪವಾರ್ನ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ವಂದನಾ ಚವಾಣ್ ವಾಗ್ದಾಳಿ ನಡೆಸಿದ್ದಾರೆ.
"ಪೆಗಾಸಸ್ ಪ್ರತಿಯೊಬ್ಬರ ಮನೆಗೂ ತಲುಪಿದೆ. ನಾವು ಈ ಬಗ್ಗೆ ಚರ್ಚಿಸಬೇಕು," ಎಂದು ಆರ್ಜೆಡಿಯ ಮನೋಜ್ ಹೇಳಿದರೆ, "ದೆಹಲಿಯಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಸುಟ್ಟು ಹಾಕಲಾಗಿದೆ ಆದರೆ ಸರ್ಕಾರವು ಅದರ ಬಗ್ಗೆ ಮಾತನಾಡುತ್ತಿಲ್ಲ," ಎಂದು ಆಮ್ ಆದ್ಮಿ ಪಕ್ಷದ ಸುಶೀಲ್ ಕುಮಾರ್ ಗುಪ್ತಾ ಹೇಳಿದರು. ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ನ ದೀಪೇಂದರ್ ಸಿಂಗ್ ಹೂಡಾ, "ಮೈಕ್ರೊಫೋನ್ ಸ್ವಿಚ್ ಆಫ್ ಮಾಡದಿದ್ದರೆ" ರೈತರ ಸಮಸ್ಯೆಯ ಬಗ್ಗೆ ಮಾತನಾಡುವುದಾಗಿ ಹೇಳಿದರು.
ಕೃಷಿ ಕಾನೂನಿಗೆ ವಿರೋಧ: ಸಂಸತ್ತಿಗೆ ಟ್ರ್ಯಾಕ್ಟರ್ ಚಲಾಯಿಸಿ ಬಂದ ರಾಹುಲ್ ಗಾಂಧಿ
ಸರ್ಕಾರವು ಸಂಸದೀಯ ಪ್ರಜಾಪ್ರಭುತ್ವವನ್ನು "ಕದಿಯುತ್ತಿದೆ" ಎಂದು ಸಿಪಿಎಂ ಆರೋಪಿಸಿದೆ. "ಸಂಸತ್ತಿನಲ್ಲಿ ವಾಕ್ ಸ್ವಾತಂತ್ರ್ಯ ಇರಬೇಕು," ಎಂದು ತೃಣಮೂಲದ ಸುಖೇಂದು ಶೇಖರ್ ರಾಯ್ ಹೇಳಿದರು. ಡಿಎಂಕೆ ಕೂಡ, ಸರ್ಕಾರವು ಈ ಸಮಸ್ಯೆಯನ್ನು ನಿಭಾಯಿಸುವ ರೀತಿಯನ್ನು ವಿರೋಧಿಸಿತು. "ನಾವು ಪ್ರಜಾಪ್ರಭುತ್ವದ ಗುಣಮಟ್ಟದ ಬಗ್ಗೆ ಚರ್ಚಿಸೋಣ," ಎಂದು ಡಿಎಂಕೆ ನಾಯಕರು ಹೇಳಿದರು. ''ಸರ್ಕಾರವು ಸರ್ವಾಧಿಕಾರ ನಡೆಸುತ್ತಿದೆ,'' ಎಂದು ಬಹುತೇಕ ವಿರೋಧ ಪಕ್ಷಗಳು ಆರೋಪಿಸಿವೆ.
ಪ್ರಧಾನಮಂತ್ರಿ ಸಾಮಾನ್ಯವಾಗಿ ಪ್ರತಿ ಗುರುವಾರ ಸಂಸತ್ತಿಗೆ ಬರುತ್ತಾರೆ, ಏಕೆಂದರೆ ಅವರ ಅಡಿಯಲ್ಲಿರುವ ಸಚಿವಾಲಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇದು ಮೀಸಲಾದ ದಿನವಾಗಿದೆ. ಸಂಸತ್ತಿನ ಅಧಿವೇಶನದ ಸಮಯದಲ್ಲಿ, ಪ್ರಧಾನಿ ಯಾವಾಗಲೂ ಸಂಸತ್ತಿನ ಕಟ್ಟಡದಲ್ಲಿರುವ ತಮ್ಮ ಕಚೇರಿಯಲ್ಲಿ ಇರುತ್ತಾರೆ, ಅಲ್ಲಿ ಪ್ರಧಾನಿ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಹಿರಿಯ ಸಚಿವರನ್ನು ಭೇಟಿ ಮಾಡಿ ಸಂಸತ್ತಿನ ಕಾರ್ಯತಂತ್ರವನ್ನು ಚರ್ಚಿಸುತ್ತಾರೆ.
(ಒನ್ಇಂಡಿಯಾ ಸುದ್ದಿ)