ಡಿ.10ರಂದು ವಿಪಕ್ಷಗಳ ಸಭೆ, ಕುತೂಹಲ ಮೂಡಿಸಿದೆ ಮಾಯಾ ನಡೆ!
ನವದೆಹಲಿ, ಡಿಸೆಂಬರ್ 03: 'ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಚುನಾವಣೆ ಎದುರಿಸಲು ಸಿದ್ಧ' ಎಂದು ಬಿಎಸ್ಪಿ ನಾಯಕಿ ಮಾಯಾವತಿ ಅವರು ಘೋಷಿಸಿ ಇನ್ನು ತಿಂಗಳು ಕಳೆದಿಲ್ಲ.
ಅಷ್ಟರಲ್ಲೇ ಲೋಕಸಭೆ ಚುನಾವಣೆಗೆ ಮುನ್ನುಡಿ ಬರೆಯಲು ವಿಪಕ್ಷಗಳ ಸಭೆ ಕರೆಯಲಾಗಿದೆ. ಡಿಸೆಂಬರ್ 10ರಂದು ನಡೆಯಲಿರುವ ಸಭೆಯಲ್ಲಿ ಮಾಯಾವತಿ ಪಾಲ್ಗೊಳ್ಳುವರೇ ಎಂಬುದು ಸದ್ಯದ ಕುತೂಹಲದ ಪ್ರಶ್ನೆಯಾಗಿದೆ.
ಕಾಂಗ್ರೆಸ್ಸಿನ ಮಹಾಮೈತ್ರಿಕೂಟದ ಕನಸಿಗೆ ಭಾರಿ ಪೆಟ್ಟು ಕೊಡುವಂಥ ಹೇಳಿಕೆ, ನಡೆ ಇಟ್ಟಿರುವ ಮಾಯಾವತಿ ಅವರು ಹಿಂತಿರುಗಿ ನೋಡಿ, ಕಾಂಗ್ರೆಸ್ ಕೈ ಹಿಡಿಯುವರೆ ಕಾದು ನೋಡಬೇಕಿದೆ.
ಬಿಜೆಪಿ ವಿರುದ್ಧ ಎಲ್ಲಾ ಶಕ್ತಿಗಳನ್ನು ಒಗ್ಗೂಡಿಸಿದರೆ ಮಾತ್ರ ಉತ್ತರಪ್ರದೇಶದಂಥ ದೊಡ್ಡ ರಾಜ್ಯ ಹಾಗೂ ದೇಶದಲ್ಲಿ ಅಧಿಕಾರ ಸ್ಥಾಪಿಸಲು ಎಂಬುದು ಕಾಂಗ್ರೆಸ್ಸಿಗೆ ಮನವರಿಕೆಯಾಗಿದೆ. ಸದ್ಯದ ಮಾಹಿತಿಯಂತೆ ಡಿಸೆಂಬರ್ 10ರ ಸಭೆಯಲ್ಲಿ ಬಹುಜನ ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳ ಪಕ್ಷದ ಮೈತ್ರಿ ಬಗ್ಗೆ ಹೆಚ್ಚಿನ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಡಿ.11ರಂದು ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬರಲಿದೆ. ಇದಕ್ಕೂ ಮುನ್ನ ಡಿ.10ರಂದು ಮಧ್ಯಾಹ್ನ 3.30ರ ವೇಳೆಗೆ ಸಂಸತ್ತಿನ ಆವರಣದ ಕಚೇರಿಯೊಂದರಲ್ಲಿ ಮೋದಿ ಸರ್ಕಾರದ ವಿರೋಧಿಗಳು ರಣತಂತ್ರ ರೂಪಿಸಲು ಸಜ್ಜಾಗುತ್ತಿದ್ದಾರೆ.

ಸೀಟು ಹಂಚಿಕೆ ಕಾರಣದಿಂದ ಮೈಮನಸ್ಯ
ಕರ್ನಾಟಕ ಮತ್ತು ಛತ್ತೀಸ್ಗಢದಲ್ಲಿ ಬೇರೆ ಪಕ್ಷಗಳೊಂದಿಗೆ ಬಿಎಸ್ಪಿ ಮೈತ್ರಿ ಮಾಡಿಕೊಂಡಿದೆ. ಆದರೆ, ಸದ್ಯ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದೆ.
ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್ಸಿನ ಉದ್ದೇಶವಲ್ಲ. ಮೈತ್ರಿಕೂಟದ ಪಕ್ಷಕ್ಕೆ ಹಾನಿಯಾಗುವುದನ್ನು ತಡೆಗಟ್ಟಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ಮಾಯಾವತಿ ಹೇಳಿದ್ದರು. ಸೀಟು ಹಂಚಿಕೆ ವ್ಯತ್ಯಾಸವೇ ಮಾಯಾವತಿ ಮುನಿಸಿಗೆ ಕಾರಣ ಎನ್ನಬಹುದು.

ಯಾರು ಯಾರು ಪಾಲ್ಗೊಳ್ಳುತ್ತಿದ್ದಾರೆ?
ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ)ನ ಎಂಕೆ ಸ್ಟಾಲಿನ್, ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ, ರಾಷ್ಟ್ರೀಯ್ ಜನತಾ ದಳದ ತೇಜಸ್ವಿ ಯಾದವ್, ತೆಲುಗು ದೇಶಂ ಪಾರ್ಟಿಯ ಚಂದ್ರಬಾಬು ನಾಯ್ಡು, ಎನ್ ಸಿಪಿಯ ಶರದ್ ಪವಾರ್, ಜೆಡಿಎಸ್ ನಿಂದ ಎಚ್ ಡಿ ಕುಮಾರಸ್ವಾಮಿ, ನ್ಯಾಷನಲ್ ಕಾನ್ಫರೆನ್ಸ್ ಚೇರ್ಮನ್ ಫಾರೂಕ್ ಅಬ್ದುಲ್ಲಾ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಚೇರ್ಮನ್ ಸೋನಿಯಾ ಗಾಂಧಿ
ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ವಿನಃ, ಕಾಂಗ್ರೆಸ್ ಬಳಿ ಭಿಕ್ಷೆ ಬೇಡಲ್ಲ: ಮಾಯಾವತಿ

ಸಭೆಗೆ ಬರಲು ಒಪ್ಪಿದ ಎಸ್ಪಿ ಮುಖಂಡರು
ಉತ್ತರಪ್ರದೇಶದಲ್ಲಿ ಸೀಟು ಹಂಚಿಕೆಯೇ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ನಡುವಿನ ವೈಮನಸ್ಯಕ್ಕೆ ಕಾರಣವಾಗಿದೆ. ಬಿಎಸ್ಪಿ ಜತೆ ಇತ್ತೀಚಿನ ಮೈತ್ರಿ ಮಾಡಿಕೊಂಡು ಬಿಜೆಪಿಗೆ ಸರಿಯಾದ ಹೊಡೆತ ನೀಡಿದ ಅಖಿಲೇಶ್ ಯಾದವ್ ಅವರು ಡಿ.10ರ ಸಭೆಯಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ. ಮಾಯಾವತಿ ಅವರು ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಮಾಯಾವತಿ ಬದಲಿಗೆ ಪಕ್ಷದ ನಂ.2 ಸತೀಶ್ ಚಂದ್ರ ಮಿಸ್ರಾ ಅವರು ಭಾಗವಹಿಸಬಹುದು ಎನ್ನಲಾಗಿದೆ.

ಮಾಯಾವತಿಗೆ ಪ್ರಧಾನಿಯಾಗುವ ಆಸೆ
ಲೋಕಸಭೆ ಚುನಾವಣೆ 2019ರಲ್ಲಿ ಮೋದಿ ನೇತೃತ್ವದ ಎನ್ಡಿಎ ಸೋಲಿಸಲು ವಿವಿಧ ರೀತಿಯಲ್ಲಿ ಯತ್ನಿಸುತ್ತಿರುವ ವಿರೋಧಿಗಳು ಈಗ ದಲಿತ ಮಹಿಳಾ ಪ್ರಧಾನಮಂತ್ರಿ ಎಂಬ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಬಹುಜನ ಸಮಾಜ ಪಕ್ಷದಿಂದ ಮಾಯಾವತಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. 2014ರ ಉತ್ತರಪ್ರದೇಶ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲದಿದ್ದರೂ, ಬಿಎಸ್ಪಿ ಈ ಬಾರಿ ಪುಟಿದೇಳುವ ವಿಶ್ವಾಸದಲ್ಲಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಜತೆ ಕೈಜೋಡಿಸಿ, ಉತ್ತಮ ಫಲಿತಾಂಶ ಪಡೆಯುವಲ್ಲಿ ಪಕ್ಷ ಯಶಸ್ವಿಯಾಗಿದೆ.

ಲೋಕಸಭೆಯಲ್ಲಿ ಮೈತ್ರಿ ಸಾಧ್ಯತೆ
ಬಿಎಸ್ಪಿ ಪಕ್ಷವು ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ ಲೋಕಸಭೆ ಚುನಾವಣೆಯಲ್ಲೂ ತಾನು ಕೇಳಿದಷ್ಟು ಸೀಟು ನೀಡಬೇಕು ಎಂಬ ಷರತ್ತು ವಿಧಿಸಿದೆ. ಆದರೆ ಕಾಂಗ್ರೆಸ್ ಗೆ ಅದು ಇಷ್ಟವಿಲ್ಲ. ಸದ್ಯಕ್ಕೆ ವಿಧಾನಸಭೆ ಚುನಾವಣೆ ಮುಗಿಯಲಿ, ನಂತರ ಲೋಕಸಭೆ ಚುನಾವಣೆಯ ಬಗ್ಗೆ ಚರ್ಚಿಸೋಣ ಎಂಬುದು ಕಾಂಗ್ರೆಸ್ ಹೇಳಿದೆ. ಆದರೆ ಇದನ್ನು ಕೇಳುವುದಕ್ಕೆ ಬಿಎಸ್ಪಿ ರೆಡಿಯಿಲ್ಲ, ಕಾರಣ, ಬಿಎಸ್ಪಿಗೆ ಸದ್ಯ ಸಮಾಜವಾದಿ ಪಕ್ಷದ ನೆರವು ಸಿಕ್ಕಿದೆ.












Click it and Unblock the Notifications